ಸುಪಾರಿ ಕೊಲೆಗೆ ಸ್ಕೆಚ್ ಹಾಕ್ತಿದ್ದಾರಂತೆ ದಯಾಳ್!
Team Udayavani, Nov 8, 2018, 12:53 PM IST
“ಪುಟ 109′ ಚಿತ್ರ ತೆರೆಕಾಣುತ್ತಿದ್ದಂತೆ ನಿರ್ದೇಶಕ ದಯಾಳ್ ಪದ್ಮನಾಭನ್ ‘ಸುಪಾರಿ ಕೊಲೆ’ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರಂತೆ. ಹೌದು. ದಯಾಳ್ ನಿರ್ದೇಶನದ ಮುಂದಿನ ಚಿತ್ರದ ಹೆಸರು “ಸುಪಾರಿ ಕೊಲೆ’. ಇತ್ತೀಚೆಗಷ್ಟೆ ಬಿಡುಗಡೆಗೊಂಡ ಲೇಖಕ ಶಿವಕುಮಾರ್ ಮಾವಲಿ ಅವರ “ಸುಪಾರಿ ಕೊಲೆ’ ನಾಟಕವನ್ನು ದಯಾಳ್, ಚಲನಚಿತ್ರವಾಗಿ ತೆರೆಮೇಲೆ ತರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಉಪೇಂದ್ರ ಈ ಚಿತ್ರದಲ್ಲಿ ಅರ್ಚನಾ ಎಂಬ ಹೆಸರಿನ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಈ ಬಗ್ಗೆ ಮಾತನಾಡುವ ದಯಾಳ್, “ಪ್ರಿಯಾಂಕಾ ಅವರಿಗೆ ಈ ಕಥೆ ತುಂಬ ಇಷ್ಟ ಆಗಿದೆ. ಈ ಚಿತ್ರದಲ್ಲಿ ಅರ್ಚನಾ ಎಂಬಾಕೆ ತನ್ನ ಗಂಡನನ್ನು ಕೊಲೆ ಮಾಡಿಸಲು ಸುಪಾರಿ ನೀಡುತ್ತಾರೆ. ಆಮೇಲೆ ತನ್ನನ್ನು ಕೊಲೆ ಮಾಡು ಅಂತಲೂ ಸುಪಾರಿ ಕೊಲೆಗಡುಕನ ಬೆನ್ನು ಬೀಳುತ್ತಾನೆ. ಅದು ಏಕೆ? ಹೇಗೆ? ಎಂಬುದೇ ಚಿತ್ರದ ಕಥೆ. ಮುಂದಿನ ಜನವರಿ ವೇಳೆಗೆ ಸುಪಾರಿ ಕೊಲೆ’ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ. ‘ಸುಪಾರಿ ಕೊಲೆ’ ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶಿಸಿದರೆ, ಜ್ಯಾಕ್ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.