ದರ್ಶನ್ಗೆ ಸಿನಿಮಾ ಮಾಡ್ತಾರಂತೆ ಸಾಧು
Team Udayavani, Nov 19, 2018, 12:10 PM IST
ಸಾಧು ಕೋಕಿಲ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ, ಯಾವುದೇ ವೇದಿಕೆ ಹತ್ತಲಿ, ಅಲ್ಲಿ ಅವರಿಗೆ ಎದುರಾಗುವ ಒಂದು ಸಾಮಾನ್ಯ ಪ್ರಶ್ನೆ ಎಂದರೆ, “ನಿರ್ದೇಶನ ಯಾವಾಗ’ ಎಂಬುದು. ಏಕೆಂದರೆ ಸಾಧುಕೋಕಿಲ ಕೇವಲ ನಟರಾಗಿ ಗುರುತಿಸಿಕೊಂಡಿಲ್ಲ. ನಟನೆಯ ಜೊತೆಗೆ ನಿರ್ದೇಶನ, ಸಂಗೀತ, ಹಿನ್ನೆಲೆ ಸಂಗೀತ … ಹೀಗೆ ಎಲ್ಲಾ ವಿಭಾಗಳಲ್ಲೂ ಬಿಝಿ. ಆದರೆ, ಈಗ ನಟನೆಗೆ ಹೆಚ್ಚು ಒತ್ತುಕೊಟ್ಟಿರುವ ಸಾಧು, ನಿರ್ದೇಶನದಿಂದ ದೂರ ಉಳಿದಿದ್ದಾರೆ.
ಈಗ ಮತ್ತೆ ನಿರ್ದೇಶನಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಅದು ದರ್ಶನ್ ಸಿನಿಮಾದ ಮೂಲಕ. ಇತ್ತೀಚೆಗೆ ವೇದಿಕೆಯೊಂದರಲ್ಲಿ ಮಾತನಾಡಿದ ಸಾಧು, ಮುಂದೆ ದರ್ಶನ್ಗೊಂದು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸಾಧು ಈಗಾಗಲೇ ದರ್ಶನ್ ಅವರಿಗೆ “ಅನಾಥರು’, “ಸುಂಟರಗಾಳಿ’, “ಶೌರ್ಯ’ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಮತ್ತೂಮ್ಮೆ ದರ್ಶನ್ಗೆ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಹಾಗಂತ ಯಾವಾಗ ಎಂದು ನೀವು ಕೇಳಿದರೆ ಅದಕ್ಕೆ ಉತ್ತರವಿಲ್ಲ. ಏಕೆಂದರೆ ಇತ್ತ ಕಡೆ ದರ್ಶನ್ ಒಪ್ಪಿಕೊಂಡಿರುವ ಸಿನಿಮಾ ಪಟ್ಟಿ ದೊಡ್ಡದಿದೆ. ಅವೆಲ್ಲವೂ ಮುಗಿದ ನಂತರ ಸಾಧುಗೆ ಅವಕಾಶ ಸಿಗುತ್ತಾ ಅಥವಾ ಅದರ ಮೊದಲೇ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ದರ್ಶನ್ ಅವರ “ಯಜಮಾನ’ ಚಿತ್ರದ ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಮುಂದಿನ ತಿಂಗಳು ಆರಂಭವಾಗಲಿದೆ.
ಜೊತೆಗೆ ಅವರ “ಒಡೆಯ’ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, “ಯಜಮಾನ’ ಮುಗಿಸಿಕೊಂಡು “ಒಡೆಯ’ದಲ್ಲಿ ಬಿಝಿಯಾಗಲಿದ್ದಾರೆ. ಈ ನಡುವೆಯೇ ತರುಣ್ ಸುಧೀರ್ ಅವರ ಚಿತ್ರದ ಥೀಮ್ ಪೋಸ್ಟರ್ ಕೂಡಾ ಬಿಡುಗಡೆಯಾಗಿದೆ. ಇದರ ಜೊತೆಗೆ ವೀರಮದಕರಿ ನಾಯಕನ ಕುರಿತಾದ ಸಿನಿಮಾ ಕೂಡಾ ಹೊಸ ವರ್ಷದಲ್ಲೇ ಆರಂಭವಾಗಲಿದೆ.