ಯಜಮಾನ ಭರ್ಜರಿ ಕುಣಿತ
Team Udayavani, Dec 12, 2018, 11:35 AM IST
ಆರಂಭದಲ್ಲಿ ಅದ್ದೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಯಜಮಾನ’ ಚಿತ್ರ ಭರದಿಂದ ಚಿತ್ರೀಕರಣವನ್ನು ನಡೆಸಿಕೊಂಡು ಸಾಗಿತ್ತು. ಹೀಗಿರುವಾಗಲೇ ನಟ ದರ್ಶನ್ ಅವರಿಗೆ ಅಪಘಾತವಾಗಿ ವೈದ್ಯರು ಕೆಲ ಸಮಯ ವಿಶ್ರಾಂತಿಗೆ ಸೂಚಿಸಿದ್ದರಿಂದ ಚಿತ್ರತಂಡ ಕೂಡ ಚಿತ್ರೀಕರಣಕ್ಕೆ ಕೆಲ ಕಾಲ ಬ್ರೇಕ್ ನೀಡಿತ್ತು.
ಇನ್ನೇನು ದರ್ಶನ್ ಚೇತರಿಕೆ ಕಂಡು ಚಿತ್ರತಂಡ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗಿ ಅಲ್ಲಿ ಚಿತ್ರೀಕರಣ ಆರಂಭಿಸಬೇಕು ಎನ್ನುವಷ್ಟರಲ್ಲಿ ನಟ ರೆಬಲ್ ಸ್ಟಾರ್ ಅಂಬರೀಶ್ ನಿಧನದಿಂದಾಗಿ, ಸ್ವೀಡನ್ಗೆ ತೆರಳಿದ್ದ ಚಿತ್ರತಂಡ ಚಿತ್ರೀಕರಣವನ್ನು ಮುಂದೂಡಿ ಅಂಬಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸ್ವದೇಶಕ್ಕೆ ವಾಪಾಸ್ಸಾಯಿತು. ಹೀಗಾಗಿ ಚಿತ್ರೀಕರಣ ಮತ್ತೆ ಕೆಲಕಾಲ ಮುಂದಕ್ಕೆ ಹೋಯಿತು.
ಈಗ ಮತ್ತೆ “ಯಜಮಾನ’ನ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದೆ. ನಟ ದರ್ಶನ್ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ “ಯಜಮಾನ’ ಚಿತ್ರದ ಮಾಸ್ ಹಾಡೊಂದರ ಚಿತ್ರೀಕರಣ ನಡೆಯುತ್ತಿದ್ದು ದರ್ಶನ್ ಪಕ್ಕಾ ಔಟ್ ಆ್ಯಂಡ್ ಔಟ್ ಮಾಸ್ ಲುಕ್ನಲ್ಲಿ ಮಿಂಚುತ್ತಿದ್ದಾರೆ.
ಬೃಹತ್ತಾದ ಅದ್ಧೂರಿ ಸೆಟ್ನಲ್ಲಿ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಮಾಸ್ ಮ್ಯೂಸಿಕ್ ಬಿಟ್ಸ್ಗೆ ಅಷ್ಟೇ ಮಾಸ್ ಆಗಿ ನೂರಾರು ಸಹ ನೃತ್ಯ ಕಲಾವಿದರ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ ದರ್ಶನ್ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಿರುವ ಕೆಲವು ಪೋಟೋಗಳು ಹೊರಬಿದ್ದಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿ ಹರಿದಾಡುತ್ತಿದೆ.
ಇನ್ನು ಈ ಹಾಡು ಎಷ್ಟರ ಮಟ್ಟಿಗೆ ಮಾಸ್ ಆಡಿಯನ್ಸ್ ಮನಗೆಲ್ಲಲಿದೆ ಎಂಬುದು ಗೊತ್ತಾಗಬೇಕಾದರೆ ಕೆಲ ತಿಂಗಳು ಕಾಯಲೇ ಬೇಕು. ಪಿ. ಕುಮಾರ್ ಹಾಗೂ ವಿ. ಹರಿಕೃಷ್ಣ ಜಂಟಿಯಾಗಿ ನಿರ್ದೇಶನ ಮಾಡುತ್ತಿರುವ “ಯಜಮಾನ’ ಚಿತ್ರವನ್ನು ಬಿ. ಸುರೇಶ್ ನಿರ್ಮಿಸುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರತಂಡದ ಪ್ಲಾನ್ ಪ್ರಕಾರ ನಡೆದರೆ ಇದೇ ತಿಂಗಳಾಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ.