ಐಟಿ ದಾಳಿ ಕುರಿತು ಸುದೀಪ್ ಫನ್ ಟಾಕ್
Team Udayavani, Jan 8, 2019, 9:23 AM IST
ಕನ್ನಡ ಚಿತ್ರರಂಗದ ಸ್ಟಾರ್ ನಟರ ಮನೆ ಮೇಲೆ ಐಟಿ ದಾಳಿ ನಡೆದಿರುವುದು ನಿಮಗೆ ಗೊತ್ತೇ ಇದೆ. ಐಟಿ ದಾಳಿ ಎದುರಿಸಿದ ನಟರಲ್ಲಿ ಸುದೀಪ್ ಕೂಡಾ ಒಬ್ಬರು. ಎರಡು ದಿನ ತಮ್ಮ ಮನೆಯಲ್ಲೇ ಇದ್ದು, ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಸುದೀಪ್, ಅಲ್ಲಿಂದ ನೇರವಾಗಿ ಬಿಗ್ಬಾಸ್ ಶೋಗೆ ತೆರಳಿ, ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಯನ್ನು ವೇದಿಕೆಯಲ್ಲಿ ಮಾತನಾಡಿಸುವ ವೇಳೆ ಸುದೀಪ್, ಐಟಿ ದಾಳಿ ಕುರಿತ ಅಂಶವನ್ನು ಫನ್ನಿಯಾಗಿ ಹೇಳುತ್ತಾ ವೇದಿಕೆ ಮುಂಭಾಗದಲ್ಲಿದ್ದವರ ಮೊಗದಲ್ಲಿ ನಗು ತಂದರು.
ಅಷ್ಟಕ್ಕೂ ಬಿಗ್ಬಾಸ್ ವೇದಿಕೆಯಲ್ಲಿ ಸುದೀಪ್, ಐಟಿ ದಾಳಿ ಕುರಿತು ಮಾತನಾಡಲು ಕಾರಣವೇನು ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ಬಿಗ್ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಮುರಳಿ. “ನಾನು 30 ಕೋಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂಬ ಖುಷಿ ಇದೆ’ ಎನ್ನುತ್ತಿದ್ದರು ಮುರಳಿ. ಹೀಗೆ ಎರಡೂ¾ರು ಬಾರು ಮುರಳಿ ಬಾಯಿಂದ “30 ಕೋಟಿ’ ಎಂದು ಬರುತ್ತಿದ್ದಂತೆ ಸುದೀಪ್, “ಸಾರ್ 30 ಕೋಟಿ, 30 ಕೋಟಿ ಅನ್ನಬೇಡಿ. ನಿನ್ನೆಯಷ್ಟೇ ಯಾರೋ ಮನೆಗೆ ಬಂದು ಹೋದ್ರು. ಆಮೇಲೆ, ಬಿಗ್ಬಾಸ್ ಮನೆಗೆ ಬಂದಿºಟ್ಟಾರೂ’ ಎನ್ನುತ್ತಾ ಐಟಿ ದಾಳಿ ನಡೆದ ಬಗ್ಗೆ ಹೇಳಿದರು. ಅಷ್ಟಕ್ಕೆ ಸುದೀಪ್ ಫನ್ ಮುಗಿಯುವುದಿಲ್ಲ.
ಮುಂದುವರೆದು ಮಾತನಾಡಿದ ಸುದೀಪ್, “ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ನಾಲ್ಕು ಕಲಾವಿದರೂ ಒಂಥರಾ ರಜಾ ತಗೊಂಡಿದ್ರು, ಅದರಲ್ಲಿ ಕೆಲವರಿಗೆ ಇವತ್ತು ಮುಕ್ತಿಯಾಯ್ತು, ಇನ್ನು ಕೆಲವರಿಗೆ ನಿನ್ನೆ, ಕೆಲವರಿಗೆ ಮೊನ್ನೆ ಮುಕ್ತಿಯಾಯ್ತು. ಶನಿವಾರ ನಿಮ್ಮನ್ನು ಕರೆಯೋಕೆ ಬಂದಿದ್ದೆ.
ಯಾಮಾರಿದ್ರೆ ಕರೆಯೋರೆ ಇರ್ತಿರಲಿಲ್ಲ ನಿಮ್ಮನ್ನ …’ ಎನ್ನುತ್ತಾ ಐಟಿ ದಾಳಿ ವಿಚಾರವನ್ನು ಬಿಗ್ಬಾಸ್ ವೇದಿಕೆ ಮೇಲೆ ಫನ್ ಆಗಿ ಹೇಳುತ್ತಾ ಹೋದರು ಸುದೀಪ್. ಆಗಷ್ಟೇ ಬಿಗ್ಬಾಸ್ ಮನೆಯಿಂದ ಹೊರಬಂದು, ಸುದೀಪ್ ಎದುರಿಗಿದ್ದ ಮುರಳಿಗೆ ಸುದೀಪ್ ಯಾವ ವಿಚಾರ ಮಾತನಾಡುತ್ತಿದ್ದಾರೆಂಬುದು ಗೊತ್ತಾಗಲೇ ಇಲ್ಲ. ಸದ್ಯ ಸುದೀಪ್ “ಪೈಲ್ವಾನ್’ ಚಿತ್ರೀಕರಣದಲ್ಲಿ ಬಿಝಿಯಾಗಿದ್ದು, ಚಿತ್ರದ ಫಸ್ಟ್ಲುಕ್ ಟೀಸರ್ ಜನವರಿ 15 ರಂದು ಸಂಜೆ ಬಿಡುಗಡೆಯಾಗಲಿದೆ.