“ವಿಷ್ಣು ಸರ್ಕಲ್’ನಲ್ಲಿ ಡಬ್ಬಿಂಗ್ ಪೂರ್ಣ
Team Udayavani, Jan 11, 2019, 6:10 AM IST
ಚಿತ್ರೀಕರಣ ಮುಗಿಸಿ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ “ವಿಷ್ಣು ಸರ್ಕಲ್’ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋನಲ್ಲಿ ಇತ್ತೀಚೆಗೆ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಇಂದಿನ ಕಾಲೇಜ್ ಹುಡುಗರ ಜೀವನ ಮತ್ತು ಕನಸುಗಳ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಲಕ್ಷ್ಮೀ ದಿನೇಶ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
“ತಿರುಪತಿ ಪಿಕ್ಚರ್ ಪ್ಯಾಲೇಸ್’ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ವಿಷ್ಣು ಸರ್ಕಲ್’ ಚಿತ್ರಕ್ಕೆ ಪಿ.ಎಲ್ ರವಿ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀವತ್ಸ ಸಂಗೀತ ನಿರ್ದೇಶನವಿದೆ. ಹೈಟ್ ಮಂಜು ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಮಾಸ್ ಮಾದ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ.
ಗುರುರಾಜ್ ಜಗ್ಗೇಶ್, ದಿವ್ಯಾಗೌಡ, ಸುತಾನ್ಯ, ದತ್ತಣ್ಣ, ಬಿರಾದರ್, ರಾಕ್ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ, ಸಂದೇಶ್, ವಿ. ಮನೋಹರ್ ಮುಂತಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ನ ಅಂತಿಮ ಹಂತದಲ್ಲಿರುವ “ವಿಷ್ಣು ಸರ್ಕಲ್’ ಚಿತ್ರವನ್ನು ಮುಂಬರುವ ಏಪ್ರಿಲ್ ವೇಳೆಗೆ ತೆರೆಗೆ ತರುವ ಆಲೋಚನೆಯಲ್ಲಿದೆ ಚಿತ್ರತಂಡ.