ದರ್ಶನ್ ಬರ್ತ್ಡೇಗೆ ಅಕ್ಕಿ, ಬೇಳೆ
Team Udayavani, Feb 6, 2019, 5:53 AM IST
ಈ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಅಂಬರೀಶ್ ಅವರು ಅಗಲಿದ ಹಿನ್ನೆಲೆಯಲ್ಲಿ, ತಮ್ಮ ಬರ್ತ್ಡೇ ದಿನ ಯಾವುದೇ ರೀತಿಯ ಸಂಭ್ರಮ ಇರುವುದಿಲ್ಲ. ಅಭಿಮಾನಿಗಳು ಯಾವುದೇ ಕೇಕ್, ಹಾರ ತರಬಾರದು. ತಂದರೂ ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿಕೊಂಡಿದ್ದರು. ದರ್ಶನ್ ಅವರ ಪ್ರೀತಿಯ ಮಾತಿಗೆ ಜೈ ಎಂದಿರುವ ಅವರ ಅಭಿಮಾನಿ ವರ್ಗ ಈಗ ಹೊಸದೊಂದು ಸಾಮಾಜಿಕ ಸೇವೆಗೆ ಮುಂದಾಗಿದೆ.
ಹೌದು, ದರ್ಶನ್ ಅವರು ತಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದನ್ನು ಅಭಿಮಾನಿಗಳು ಸಹ ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಸರಳವಾಗಿ ಆಚರಿಸಿಕೊಳ್ಳಲಿರುವ ದರ್ಶನ್ ಅವರು, ಯಾವುದೇ ಕೇಕ್ ತರದೆ, ಪಟಾಕಿ ಸಿಡಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇತ್ತೀಚೆಗೆ ದರ್ಶನ್ ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ತೆರಳಿ ಶಿವೈಕ್ಯವಾದ ಶ್ರೀಗಳ ದರ್ಶನ ಪಡೆದಿದ್ದರು.
ಆ ಬಳಿಕ ಪ್ರತಿ ತಿಂಗಳು ಅವರು ಮಠಕ್ಕೆ ತಮ್ಮ ಸೇವೆ ಮಾಡಲು ಮುಂದಾಗಿದ್ದರು. ಅದನ್ನು ಗಮನಿಸಿರುವ ದರ್ಶನ್ ಅಭಿಮಾನಿಗಳು ಇದೀಗ, ಪ್ರೀತಿಯ ನಾಯಕನ ಹುಟ್ಟುಹಬ್ಬದ ದಿನದಂದು ಕೇಕ್ ಮತ್ತು ಪಟಾಕಿ ತರುವ ಬದಲು ಅಕ್ಕಿ, ಬೇಳೆ, ಸಕ್ಕರೆ ಸೇರಿದಂತೆ ಇನ್ನಿತರೆ ಸಾಮಾಗ್ರಿಗಳನ್ನು ತರಲು ನಿರ್ಧರಿಸಿದ್ದಾರೆ. ಈ ಮೂಲಕ ದರ್ಶನ್ ಅವರಂತೆಯೇ ಅವರ ಅಭಿಮಾನಿಗಳು ಸಾಮಾಜಿಕ ಸೇವೆಗೆ ಮುಂದಾಗಿದ್ದಾರೆ.