ವಿಜ್ಞಾನ, ತಂತ್ರಜ್ಞಾನದಲ್ಲಿ ಹಾರ್ಡ್ವರ್ಕ್ ಕಾಣುತ್ತಿಲ್ಲ
Team Udayavani, Aug 6, 2017, 11:48 AM IST
ಬೆಂಗಳೂರು: ಭಾರತದಲ್ಲಿ ಕಠಿಣ ಪರಿಶ್ರಮದಿಂದ ಕೆಲಸ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಅದರಲ್ಲೂ ವಿಜ್ಞಾನ ಕ್ಷೇತ್ರದಲ್ಲಿ ಹಾರ್ಡ್ವರ್ಕ್ ಕಡಿಮೆಯಾಗಿದ್ದರಿಂದಲೇ ಉತ್ಕೃಷ್ಟ ಸಂಶೋಧನೆಗಳು ಹೊರಬರುತ್ತಿಲ್ಲ ಎಂದು ಭಾರತ ರತ್ನ ಪ್ರೊ.ಡಾ.ಸಿ.ಎನ್.ಆರ್.ರಾವ್ ಬೇಸರ ವ್ಯಕ್ತಪಡಿಸಿದರು. ಪ್ರಸ್ಕ್ಲಬ್ ಆಫ್ ಬೆಂಗಳೂರು ಇದರ 50ನೇ ವರ್ಷಾಚರಣೆಯ ಅಂಗವಾಗಿ ಶನಿವಾರ ಪ್ರಸ್ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮೂಲ ವಿಜ್ಞಾನ ಮತ್ತು ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.
ಭಾರತೀಯರು ಅತ್ಯಂತ ಆಲಸಿಗಳು, ಶ್ರಮಪಟ್ಟು ಕೆಲಸ ಮಾಡುವುದಿಲ್ಲ. ಅದರಲ್ಲೂ ವಿಜ್ಞಾನ ಕ್ಷೇತ್ರದಲ್ಲಿ ಹಾರ್ಡ್ವರ್ಕ್ ತುಂಬಾ ಕಡಿಮೆಯಾಗಿದೆ. ಚೈನಾ, ಕೋರಿಯಾ ಮೊದಲಾದ ದೇಶದ ಯುವ ಪೀಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಕಠಿಣ ಶ್ರಮ ಹಾಕಿ ಸಂಶೋಧನೆ ಮಾಡುತ್ತಿದ್ದಾರೆ. ಈ ದೇಶದಲ್ಲಿ ಸಂಶೋಧನಾ ಫಲಕೊಡುವಷ್ಟು ಪರಿಣಾಮಕಾರಿಯಾಗಿ ಭಾರತದಲ್ಲಿ ಸಂಶೋಧನೆಗಳು ಹೊರ ಬರುತ್ತಿಲ್ಲ. ಶ್ರಮಪಟ್ಟು ಶ್ರದ್ಧೆಯಿಂದ ಕೆಲಸ ಮಾಡುವ ಅಗತ್ಯವಿದೆ ಎಂದರು.
ಗುಣಮಟ್ಟದ ಶಿಕ್ಷಣ ಅಗತ್ಯ: ದೇಶದಲ್ಲಿ 750ಕ್ಕೂ ಅಧಿಕ ವಿಶ್ವವಿದ್ಯಾಲಯ ಇದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಉತ್ಕೃಷ್ಟ ಗುಣಮಟ್ಟದ ಸಂಶೋಧನೆಗಳು ಆಗುತ್ತಿಲ್ಲ. ಅಮೆರಿಕಾ ಸೇರಿದಂತೆ ಬೇರೆ ದೇಶದಲ್ಲಿ ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಚೆನ್ನಾಗಿದೆ. ಆದರೆ, ಭಾರತದ ಉನ್ನತ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಉನ್ನತೀಕರಿಸುವ ಅಗತ್ಯವಿದೆ. ಗುಣಮಟ್ಟ ಶಿಕ್ಷಣದ ಜತೆಗೆ, ಗುಣಮಟ್ಟದ ಸಂಶೋಧನೆಗಳು ನಡೆಯಬೇಕು. ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹೆಚ್ಚಾಗಬೇಕು. ಸಮಾಜದಿಂದ ವಿಜ್ಞಾನಕ್ಕೆ ಬೆಂಬಲ ಪ್ರೋತ್ಸಾಹ ಸಿಗಬೇಕು ಎಂದರು.
ಉಪನ್ಯಾಸಕರೇ ಪ್ರೇರಣೆಯಾಗಲಿ: ವಿದ್ಯಾರ್ಥಿಗಳು ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳಿಂದ ದೂರವಿದ್ದು, ಹೊಸ ಅನ್ವೇಷಣೆಗೆ ಶಿಕ್ಷಕ, ಉಪನ್ಯಾಸಕರಿಂದಲೇ ಹೆಚ್ಚೆಚ್ಚು ಪ್ರೇರಣೆ ಪಡೆಯಬೇಕು. ವಿಜ್ಞಾನ ಮತ್ತು ಶಿಕ್ಷಣ ಸ್ಥಾನವನ್ನು ಹಣ ಕಬಳಿಸಿಕೊಳುತ್ತಿದೆ. ಸಮಾಜದಲ್ಲಿ ಹಣಕ್ಕೆ ಸಿಗುವಷ್ಟು ಮಾನ್ಯತೆ ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಿಗುತ್ತಿಲ್ಲ. ಪ್ರತಿಯೊಬ್ಬರು ಮೊಬೈಲ್ನಲ್ಲೇ ಹೆಚ್ಚಿನ ಕಾಲಹರಣ ಮಾಡುತಿದ್ದಾರೆ. ಲ್ಯಾಪ್ಟಾಪ್ ಹಾಗೂ ಮೊಬೈಲ್ನಿಂದಲೇ ಎಲ್ಲಾ ಮಾಹಿತಿ ಲಭ್ಯವಾಗುತ್ತದೆ ಎಂಬ ಭ್ರಮೆಯಿಂದ ವಿದ್ಯಾರ್ಥಿಗಳು ಹೊರಬರಬೇಕು. ಜೀವನದ ಪ್ರೇರಣೆಗೆ ಶಿಕ್ಷಕ ಹಾಗೂ ಉಪನ್ಯಾಸಕರು ಅವಶ್ಯಕ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಿರ್ದಿಷ್ಟ ಗುರಿ ಮುಖ್ಯ: ಜೀವನಕ್ಕೊಂದು ಗುರಿ ಹೊಂದಬೇಕು. ಅದನ್ನು ತಲುಪುವ ತನಕವೂ ಬಿಡಬಾರದು. ವಿಜ್ಞಾನಿ, ಎಂಜಿನಿಯರ್, ಪತ್ರಕರ್ತ ಅಥವಾ ಯಾವುದೇ ಕ್ಷೇತ್ರ ಪ್ರವೇಶಕ್ಕೂ ಮೊದಲೇ ನಿರ್ಧಾರ ಮಾಡಿ, ಅದಕ್ಕೆ ಸಂಬಂಧಿಸಿದ್ದಂತೆ ಕಠಿಣ ಪರಿಶ್ರಮ ಹಾಕಬೇಕು. ತ್ಯಾಗಮಯ ಜೀವನ ನಡೆಸಬೇಕು. ಆದರೆ, ಯಾರಿಗೂ ಕೂಡ ರಾಜಕೀಯ ಪ್ರವೇಶ ಮಾಡಿ ಎಂದು ಸಲಹೆ ನೀಡಲಾರೆ. ನಿಮ್ಮ ಭವಿಷ್ಯವೇ ದೇಶದ ಭವಿಷ್ಯ ಎಂಬುದನ್ನು ಅರಿತುಕೊಳ್ಳಬೇಕು. ಎಲ್ಲಾ ಕ್ಷೇತ್ರದಲ್ಲೂ ಅವಕಾಶ ಇದೆ. ಹಾಗೆಯೇ ಸ್ಪರ್ಧೆಯೂ ಇದೆ. ಅವಕಾಶವನ್ನು ಬಳಸಿಕೊಂಡು ಸ್ಪರ್ಧೆ ಎದುರಿಸಬೇಕು. ಹಣ ಗಳಿಸುವುದೇ ಜೀವನದ ಉದ್ದೇಶವಾಗಬಾರದು ಎಂದು ಹೇಳಿದರು.
ವಿದ್ವಾಂಸರು ಕಾಣುತ್ತಿಲ್ಲ: ಬಹಳ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಬೇಂದ್ರೆ, ಕುವೆಂಪು, ಡಿವಿಜಿ ಸೇರಿದಂತೆ ಕವಿಗಳು, ವಿದ್ವಾಂಸರು, ಶ್ರೇಷ್ಠ ಅಧ್ಯಾಪಕರ ಸಂಖ್ಯೆ ಅಧಿಕ ಇತ್ತು. ಬೆಂಗಳೂರಿನ ಬೀದಿಯಲ್ಲಿ ಕವಿ, ವಿದ್ವಾಂಸರು ನಡೆದಾಡುತ್ತಿದ್ದ ಕಾಲವೂ ಇತ್ತು. ಈಗ ಬರೀ ಧೂಳೇ ತುಂಬಿಕೊಂಡಿದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಭಾರತದ ಜತೆ ಜತೆಗೆ ಕರ್ನಾಟಕವೂ ವಿಜ್ಞಾನ ಕ್ಷೇತ್ರದಲ್ಲಿ ಮುಂದೆ ಸಾಗಬೇಕಿದೆ. ಹಣ ಮಾಡಿದವರು ನೇಣಿಗೆ ಶರಣಾಗುತ್ತಿರುವ ನಿದರ್ಶನಗಳು ನಮ್ಮ ಮುಂದಿದೆ. ವಿಜ್ಞಾನ, ಸಂಶೋಧನೆಗೆ ಆದ್ಯತೆ ನೀಡಬೇಕೇ ವಿನಃ ಹಣಕ್ಕಲ್ಲ ಎಂದರು.
ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಮಾತನಾಡಿ, 2030ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಶಿಕ್ಷಣ, ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುವ ಹಣದ ಪ್ರಮಾಣವನ್ನು ಏರಿಕೆ ಮಾಡಬೇಕು. ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಉದ್ಭವಿಸುವ ಸಮಸ್ಯೆಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ವಿಷಯದ ಆಯ್ಕೆ, ಆಲೋಚನಾ ಸಾಮರ್ಥ್ಯ ಹಾಗೂ ಜ್ಞಾನದ ಉನ್ನತೀಕರಣ ಅಗತ್ಯವಾಗುತ್ತದೆ ಎಂದರು.
ಐಎಎಸ್ ಟಾಪರ್ ನಂದಿನಿ ಮಾತನಾಡಿ, ಜೀವನದಲ್ಲಿ ಉತ್ಕೃಷ್ಟ ಗುರಿ ಮತ್ತು ಕನಸು ಹೊಂದಿರಬೇಕು ಹಾಗೂ ಅದರ ಸಾಧನೆಯಲ್ಲಿ ಯಾವುದೇ ರೀತಿಯಲ್ಲೂ ಹೊಂದಾಣಿಕೆ ಮಾಡಿಕೊಳ್ಳಬಾರದು. ನಾಗರಿಕ ಸೇವೆಗೆ ಪ್ರವೇಶಿಸುವ ಮುನ್ನ ಚೆನ್ನಾಗಿ ಯೋಚನೆ ಮಾಡಬೇಕು. ಇದರಲ್ಲಿ ಸವಾಲುಗಳು ಸಾಕಷ್ಟಿದೆ. ಎಲ್ಲವನ್ನು ಎದುರಿಸಲು ಸಕ್ತರಾಗಿರಬೇಕು. ಪ್ರತಿಯೊಬ್ಬರನ್ನು ವಿಭಿನ್ನವಾದ ಸಾಮರ್ಥ್ಯ ಇರುತ್ತದೆ. ಪಾಲಕ, ಪೋಷಕರು ಅದನ್ನು ಪತ್ತೆಹಚ್ಚಿ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಪ್ರಸ್ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಕಿರಣ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ