ಬಾಯಲ್ಲಿ ನೀರೂರಿಸುವ ದಾಸವಾಳದ ಚಾಕಲೇಟ್, ಮೊಟ್ಟೆ ಚಿಪ್ಪಿನ ಕುಕ್ಕೀಸ್
Team Udayavani, Nov 19, 2017, 11:26 AM IST
ಬೆಂಗಳೂರು: ಠಳಕ್ಕಂತ ಮೊಟ್ಟೆ ಒಡೆದ ಮೇಲೆ ಆ ಚಿಪ್ಪು ಹೋಗೋದು, ಕಸದ ಬುಟ್ಟಿಗೆ! ಇದು ಲೋಕದ ಸತ್ಯ. ಆದರೆ, ಆ ಚಿಪ್ಪು ನಿಮ್ಮ ಹೊಟ್ಟೆಗೂ ತಲುಪುತ್ತೆ. “ಎಂಥ ರುಚಿ’ ಎಂಬ ಉದ್ಘಾರವನ್ನೂ ಹೊರಹಾಕುತ್ತೆ!
ಹೌದು, ಮೊಟ್ಟೆ ಚಿಪ್ಪಿನಿಂದ ರುಚಿರುಚಿಯ ಬಿಸ್ಕತ್ತು ತಿನ್ನಿಸ್ತಾರೆ, ಬೆಂಗಳೂರಿನ ಕೃಷಿ ವಿವಿ ಆಹಾರ ವಿಜ್ಞಾನ ಕೇಂದ್ರದ ತಜ್ಞರು. ಕೇವಲ ಮೊಟ್ಟೆ ಚಿಪ್ಪಲ್ಲ, ನುಗ್ಗೆಸೊಪ್ಪಿನಿಂದಲೂ ಕುಕ್ಕೀಸ್ ಸಿದ್ಧಮಾಡ್ತಾರೆ. ದಾಸವಾಳದ ಚಾಕ್ಲೆಟ್ ನಿಮ್ಮ ಬಾಯಿಯನ್ನು ಸಿಹಿ ಮಾಡಿದ್ರೆ, ಮೆಂತ್ಯೆ ಕಾಳಿನ ಸೂಪ್ಸ್ಟಿಕ್ಸ್ ಮಧುಮೇಹಿಗಳ ಸಕ್ಕರೆ ಅಂಶ ಇಳಿಸುತ್ತದೆ!
ಕೃಷಿ ವಿವಿಯ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಕವನ ಅವರು, ಡಾ.ಎಚ್.ಬಿ.ಶಿವಲೀಲಾ ಅವರ ಮಾರ್ಗದರ್ಶನದಲ್ಲಿ ಇಂತಹದೊಂದು ಸಂಶೋಧನೆಯಲ್ಲಿ ತೊಡಗಿದ್ದು, ಯಶಸ್ವಿ ಆಗಿದ್ದಾರೆ. ಕೋಳಿ ಮೊಟ್ಟೆಯ ಸಿಪ್ಪೆಯಿಂದ ನೈಸರ್ಗಿಕವಾಗಿ ಕ್ಯಾಲ್ಸಿಯಂ ಸಿಗುತ್ತದೆ.
ಸಿಪ್ಪೆಯನ್ನು ಚೆನ್ನಾಗಿ ತೊಳೆದು, ಪುಡಿ ಮಾಡಿಕೊಂಡು ನಿಗದಿತ ಪ್ರಮಾಣದ ಗೋಧಿಯಲ್ಲಿ ಮಿಶ್ರಣ ಮಾಡಿಕೊಂಡು ಬಿಸ್ಕೆಟ್ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದಾಗಿದೆ. ಅಥವಾ ಹಾಲಿನ ಪುಡಿ, ದೋಸೆ ಹಿಟ್ಟಿನಲ್ಲೂ ಮೊಟ್ಟೆ ಸಿಪ್ಪೆಯಿಂದ ತಯಾರಿಸಿದ ಹಿಟ್ಟನ್ನು ನಿಗದಿತ ಪ್ರಮಾಣದಲ್ಲಿ ಬಳಸಬಹುದು. ಹೀಗೆ ಕ್ಯಾಲ್ಸಿಯಂ ಕೊರತೆಯಿಂದ ಬಳಲುವವರು ನೈಸರ್ಗಿಕವಾಗಿ ಕ್ಯಾಲ್ಸಿಯಂ ಪಡೆಯಬಹುದಾಗಿದೆ. ಇದರಿಂದ ಆರೋಗ್ಯ ಸುಧಾರಣೆಯೂ ಆಗಲಿದೆ.
ದಾಸವಾಳದ ಚಾಕಲೇಟ್: ದಾಸವಾಳವನ್ನು ಪೂಜೆಗೆ ಬಳಸಿ ಬಿಸಾಡುವವರೇ ಹೆಚ್ಚು. ಆದರೆ, ಕೃಷಿ ವಿವಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಹಿರಿಯ ಎಂಎಸ್ಸಿ, ಪಿಎಚ್ಡಿ ವಿದ್ಯಾರ್ಥಿಗಳು ಇದನ್ನು ಮೌಲ್ಯವರ್ಧಿತ ಉತ್ಪನ್ನವಾಗಿ ಬಳಕೆ ಮಾಡುವ ಕುರಿತು ಸಂಶೋಧನೆ ನಡೆಸಿದ್ದಾರೆ. ದಾಸವಾಳ ಹೂವಿನ ದಳಗಳನ್ನು ಶುದ್ಧವಾದ ನೀರಿನಲ್ಲಿ ತೊಳೆದು 50ರಿಂದ 60 ಡಿಗ್ರಿ ಸೆಂಟಿಗ್ರೇಟ್ನಲ್ಲಿ 4ರಿಂದ 5 ಗಂಟೆಗಳ ಕಾಲ ಚೆನ್ನಾಗಿ ಒಣಗಿಸಬೇಕು.
ನಂತರ ಅದನ್ನು ಚೆನ್ನಾಗಿ ರುಬ್ಬಿಕೊಂಡು ಪುಡಿ ಮಾಡಬೇಕು. ನಂತರ ಇದನ್ನು ನಿಗದಿತ ಪ್ರಮಾಣದಲ್ಲಿ ಹಾಲು ಮತ್ತು ಚಾಕಲೇಟ್ಗೆ ಬಳಸುವ ಪದಾರ್ಥದೊಂದಿಗೆ ಮಿಶ್ರಣ ಮಾಡಿ, ಬೇಕಾದ ಗಾತ್ರಕ್ಕೆ ತಂದು ಶಿಥಲೀಕರಣದಲ್ಲಿ ಗಟ್ಟಿಯಾಗುವಂತೆ ಮಾಡಿ, ನಂತರ ಪ್ಯಾಕ್ ಮಾಡಿದರೆ ದಾಸವಾಳದ ಚಾಕಲೇಟ್ ತಯಾರು. ಇದರಲ್ಲಿ ಉತ್ಕರ್ಷಣ ನಿರೋಧಕ (ಆ್ಯಂಟಿಆಕ್ಸಿಡೆಂಟ್ಸ್)ಹೆಚ್ಚಾಗಿದ್ದು, ಆರೋಗ್ಯಕ್ಕೂ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ತೊಡಗಿದ್ದಾರೆ.
ನುಗ್ಗೆಸೊಪ್ಪಿನ ಕುಕ್ಕೀಸ್: ಗೋಧಿಹಿಟ್ಟಿನಲ್ಲಿ ನುಗ್ಗೆ ಸೊಪ್ಪಿನ ಹಿಟ್ಟನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಸಬೇಕು. ಇದಕ್ಕೆ ನಿಗದಿತ ಪ್ರಮಾಣದಲ್ಲಿ ಉಪ್ಪು, ಕ್ರೀಮ್ಡ್ಫ್ಯಾಟ್, ಸಕ್ಕರೆಯನ್ನು ಸೇರಿಸಬೇಕು. ಕೊನೆಗೆ ಬೇಕಾದ ಗಾತ್ರ, ಆಕಾರಕ್ಕೆ ತಂದು 160ಕ್ಕೂ ಹೆಚ್ಚು ಸೆಂಟಿಗ್ರೇಡ್ನಲ್ಲಿ ಬೇಯಿಸಬೇಕು.
ನಂತರ ತಣ್ಣಗೆ ಮಾಡಿ ಪ್ಯಾಕ್ ಮಾಡಿದರೆ ನುಗ್ಗೆ ಸೊಪ್ಪಿನ ಬಿಸ್ಕೆಟ್ ತಯಾರು. ಇದರಲ್ಲಿ ಕ್ಯಾಲ್ಸಿಯಂ, ಬೀಟಾ ಕೆರೋಟಿನ್, ನಾರಿನಾಂಶ, ಹೆಚ್ಚಾದ ಆ್ಯಂಟಿಆಕ್ಸಿಡೆಂಟ್ಸ್ ಇರುತ್ತದೆ. ಇದರಿಂದ ದೇಹದ ಬ್ಲಿಡ್ಶುಗರ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಣೆ ಮಾಡಬಹುದಾಗಿದೆ.
ಗಮನ ಸೆಳೆದ ಮೌಲ್ಯವರ್ಧಿತ ಉತ್ಪನ್ನ: ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಸ್ನಾತಕೋತ್ತರ ಹಾಗೂ ಪಿಎಚ್ಡಿ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪರ ಮಾರ್ಗದರ್ಶನದಲ್ಲಿ 40ಕ್ಕೂ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಮೆಂತ್ಯೆ ಕಾಳಿನ ಕೋಡುಬಳೆ, ಮೆಂತ್ಯೆ ಸೊಪೊಇನ ಸೂಪ್ ಸ್ಟಿಕ್ಸ್, ಅಲೋವೇರಾ ರಸ, ತೊಂಡೆಕಾಯಿ ಜೆಲ್ಲಿ ಇತ್ಯಾದಿಗಳನ್ನು ಪ್ರಾಯೋಗಿಕವಾಗಿ ತಯಾರಿಸಿದ್ದು, ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಸೊಪ್ಪು, ತರಕಾರಿ, ಕಾಳುಗಳನ್ನು ಬಳಕೆ ಮಾಡಿ, ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಇಂತಹ ಉತ್ಪನ್ನಗಳಿಂದ ಆರೋಗ್ಯಕ್ಕೂ ಹೆಚ್ಚು ಸಹಕಾರಿಯಾಗಿದೆ. ಅಲ್ಲದೇ, ಅನಾರೋಗ್ಯ ತಡೆಗಟ್ಟಲು ಇದರಿಂದ ಸಾಧ್ಯವಾಗುತ್ತದೆ. ಆಹಾರ ವಿಜ್ಞಾನದ ವಿದ್ಯಾರ್ಥಿಗಳು ಈ ಕುರಿತು ಹೆಚ್ಚು ಹೆಚ್ಚು ಸಂಶೋಧನೆಯಲ್ಲಿ ತೊಡಗಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯಕರ ಬಿಸ್ಕೆಟ್, ಚಾಕಲೇಟ್, ಜೆಲ್ಲಿ, ಜ್ಯೂಸ್ಗಳು ಮಾರುಕಟ್ಟೆ ಪ್ರವೇಶಿಸುವ ಆಶಾವಾದವಿದೆ.
ಹಲವು ಬಗೆಯ ಚಾಕಲೇಟ್, ಬಿಸ್ಕೆಟ್ಗಳನ್ನು ತಯಾರಿಕೆಯನ್ನು ಸ್ನಾತಕೋತ್ತರ, ಪಿಎಚ್ಡಿ ವಿದ್ಯಾರ್ಥಿಗಳು ಸಂಶೋಧಿಸುತ್ತಿದ್ದಾರೆ. ಇನ್ನು ಹೆಚ್ಚಿನ ಸಂಶೋಧನೆಗೆ ಅಗತ್ಯವಿದ್ದು, ಮುಂದೇನು ಮಾಡಬೇಕು ಎಂಬುದನ್ನು ಪ್ರಾಧ್ಯಾಪಕರ ಸಹಕಾರದಿಂದ ತೀರ್ಮಾನಿಸುತ್ತೇವೆ.
-ಗೀತಾ ಗಂಡಲಾಟಿ, ಸ್ನಾತಕೋತ್ತರ ವಿದ್ಯಾರ್ಥಿನಿ.
ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಸಾರ್ವಜನಿಕರು ಮತ್ತು ರೈತರಿಂದಲೂ ಅತ್ಯುತ್ತಮ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಈ ಪದಾರ್ಥಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ಅತ್ಯಂತ ಕುತೂಹಲದಿಂದ ಕೇಳಿ ಮಾಹಿತಿ ಪಡೆಯುತ್ತಿದ್ದು, ನಮ್ಮ ವಿದ್ಯಾರ್ಥಿಗಳ ಶ್ರಮಕ್ಕೆ ಸಿಕ್ಕ ಪ್ರೋತ್ಸಾಹ ಇದೆನ್ನಬಹುದು.
-ಡಾ.ಡಿ.ವಿಜಯಲಕ್ಷ್ಮೀ, ವಿಜ್ಞಾನಿ ಮತ್ತು ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕರು.
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ