ಘೋಷಣೆಯಾಗಿದ್ದು 50, ಅನುಷ್ಠಾನಗೊಂಡಿದ್ದು 15
Team Udayavani, Feb 25, 2018, 11:49 AM IST
ಬೆಂಗಳೂರು: ಬಿಬಿಎಂಪಿಯ 2017-18ನೇ ಸಾಲಿನ ಬಜೆಟ್ನಲ್ಲಿ ಐವತ್ತಕ್ಕೂ ಹೆಚ್ಚು ಜನಪ್ರಿಯ ಕಾರ್ಯಕ್ರಮಗಳು ಘೋಷಣೆಯಾದರೂ ಅನುಷ್ಠಾನಗೊಂಡಿದ್ದು ಹದಿನೈದು ಮಾತ್ರ. ಪ್ರಸಕ್ತ ಆರ್ಥಿಕ ವರ್ಷದ ಹತ್ತು ತಿಂಗಳು ಕಳೆದರೂ ಐವತ್ತು ಕಾರ್ಯಕ್ರಮಗಳ ಪೈಕಿ ಹದಿನೈದು ಮಾತ್ರ ಅನುಷ್ಟಾನಕ್ಕೆ ಬಂದಿದ್ದು, ಉಳಿದ ಯೋಜನೆಗಳು ಘೋಷಣೆಯಾಗಿಯೇ ಉಳಿದಿವೆ.
ಇಂದಿರಾ ಕ್ಯಾಂಟೀನ್ ಯೋಜನೆ ಅನುಷ್ಠಾನ, ಆನ್ಲೈನ್ ಕಟ್ಟಡ ನಕ್ಷೆ ಹಾಗೂ ಖಾತೆ ಮಂಜೂರು ವ್ಯವಸ್ಥೆ, ಬಡ ರೋಗಿಗಳಿಗೆ ಆಂಜಿಯೋಪ್ಲಾಸ್ಟ್ ಚಿಕಿತ್ಸೆ, ನೂತನ ಟಿಡಿಆರ್ ನೀತಿ ಜಾರಿಗೊಳಿಸಿರುವುದು ಬಿಟ್ಟರೆ ಉಳಿದ ಯೋಜನೆಗಳು ಬಜೆಟ್ ಪುಸ್ತಕಕ್ಕೆ ಸೀಮಿತವಾಗಿವೆ.
ಬಹುದೊಡ್ಡ ಸಾಧನೆ: ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್ಗಳಲ್ಲಿ ನಿಗದಿತ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ನಿರ್ಮಿಸಿ ಆಹಾರ ವಿತರಿಸುತ್ತಿರುವುದು ಪಾಲಿಕೆಯ ಒಂದು ವರ್ಷದ ಬಹುದೊಡ್ಡ ಸಾಧನೆಯಾಗಿದೆ. 174 ವಾರ್ಡ್ಗಳಲ್ಲಿ ಕ್ಯಾಂಟೀನ್ಗಳನ್ನು ನಿರ್ಮಿಸಲಾಗಿದ್ದು, 24 ವಾರ್ಡ್ಗಳಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲಾಗಿದೆ.
ಉಳಿದಂತೆ, ವಿದ್ಯಾರ್ಥಿನಿಯರ ಭದ್ರತೆಗಾಗಿ ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಪರಿಸರ ಸಂರಕ್ಷಣೆಗೆ 10 ಲಕ್ಷ ಗಿಡಗಳನ್ನು ನೆಡುವುದು, ಆದಾಯ ಹೆಚ್ಚಳಕ್ಕಾಗಿ ಹೊಸ ಜಾಹೀರಾತು ನೀತಿ, ಆಡಳಿತ ಸುಧಾರಣೆಗೆ ಪೌರವಾಹಿನಿ ತಂಡ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಟೆಲಿ ಎಜುಕೇಷನ್ ಯೋಜನೆಗಳು ಘೋಷಣೆಯಾದರೂ ಈವರೆಗೆ ಅನುಷ್ಠಾನಗೊಂಡಿಲ್ಲ.
2017-18 ನೇ ಸಾಲಿನಲ್ಲಿ ಬಜೆಟ್ನಲ್ಲಿ ಬಡವರ ಕಲ್ಯಾಣಕ್ಕಾಗಿ 503 ಕೋಟಿ ರೂ. ಅನುದಾನವನ್ನು ಮೀಸರಿಲಿಸಲಾಗಿತ್ತು. ಆದರೆ, ವರ್ಷ ಪೂರ್ಣ ಗೊಳ್ಳುತ್ತಿದ್ದರೂ ಶೇ.50ರಷ್ಟು ವೆಚ್ಚವಾಗಿಲ್ಲ. ಪಾಲಿಕೆಯಲ್ಲಿ ಆಡಳಿತ ನಡೆಸುವ ಪಕ್ಷಗಳು ಆದಾಯದ ಖಾತರಿ ಇಲ್ಲದೆ ಜನಪ್ರಿಯತೆಗಾಗಿ ಬಜೆಟ್ ಮಂಡಿಸಿ ನಂತರ ಆದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿ.
ಜಾರಿಯಾಗದ ಯೋಜನೆಗಳು
-ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ಹೈಟೆಕ್ ಪಾರ್ಕಿಂಗ್ ವ್ಯವಸ್ಥೆ
-ಜಾಹೀರಾತು, ಲೆಕ್ಕಪತ್ರ ಹಾಗೂ ಮಾರುಕಟ್ಟೆ ಹೊಸ ನೀತಿ
-ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರಚಿಸುವುದು
-ಪಾಲಿಕೆಯ ಆರೋಗ್ಯ ಕೇಂದ್ರಗಳಲ್ಲಿ ಜನೌಷಧ ಕೇಂದ್ರಗಳ ಆರಂಭ
-ನಗರದ ಮಾರಕಟ್ಟೆಗಳ ನವೀಕರಣ, ಮಳೆ ನೀರು ಕೊಯ್ಲು ವ್ಯವಸ್ಥೆ
-6 ರೆಫರಲ್ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ತಪಾಸಣೆಗೆ ಮಮ್ಮೊàಗ್ರಾಮ್ ಯಂತ್ರ ಅಳವಡಿಕೆ
-ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ
-ಸುವರ್ಣ ಪಾಲಿಕೆ ಸೌಧ ನಿರ್ಮಾಣ, ಪಾಲಿಕೆಯ ಕೇಂದ್ರ ಕಚೇರಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಕೆ
-ಹೊಸ ವಲಯಗಳಲ್ಲಿ 12 ವಿವಾಹ ಸಮುದಾಯ ಭವನ ನಿರ್ಮಾಣ
-ನಕ್ಷೆ ಉಲ್ಲಂಘನೆಯಾಗದಂತೆ ನಾಲ್ಕಕ್ಕಿಂತ ಹೆಚ್ಚು ಅಂತಸ್ತಿನ ಕಟ್ಟಡದ ನೆಲ ಮಹಡಿ ಪಾಲಿಕೆಗೆ ಬರೆದುಕೊಡುವ ವ್ಯವಸ್ಥೆ
ಅನುಷ್ಟಾನಗೊಂಡ ಯೋಜನೆಗಳು
-ಆನ್ಲೈನ್ ನಕ್ಷೆ, ಖಾತಾ ಮಂಜೂರಾತಿ ವ್ಯವಸ್ಥೆ
-ನೂತನ ಟಿಡಿಆರ್ ನೀತಿ ಜಾರಿ
-ಹೃದ್ರೋಗಿಗಳ ಆಂಜಿಯೋ ಪ್ಲಾಸ್ಟ್ ಚಿಕಿತ್ಸೆಗೆ ಪಾಲಿಕೆಯಿಂದ ನೆರವು
-ಪ್ರಮುಖ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ
-5 ಲಕ್ಷ ಎಲ್ಇಡಿ ಬಲ್ಬ್ ಅಳವಡಿಕೆಗೆ ಕ್ರಮ
-ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ
-ತ್ಯಾಜ್ಯ ಬೇರ್ಪಡಿಸಲು ಕಸದ ಬುಟ್ಟಿಗಳ ವಿತರಣೆ
-ಮೆಕಾನಿಕಲ್ ಸ್ವೀಪಿಂಗ್ ಯಂತ್ರಗಳ ಖರೀದಿ
-ಪೌರಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ
-ಪಾದಚಾರಿ ಮೇಲ್ಸೇತುವೆ ನಿರ್ಮಾಣ
* ವೆಂ.ಸುನಿಲ್ಕುಮಾರ್