ಉಗ್ರಾಣದ ಪುಸ್ತಕ ಓದುಗರದಾಗಲಿ
Team Udayavani, Mar 11, 2018, 11:29 AM IST
ಬೆಂಗಳೂರು: ಸರ್ಕಾರಿ ಉಗ್ರಾಣಗಳಲ್ಲಿರುವ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳ ಸಿದ್ದಪ್ಪ ಸಲಹೆ ನೀಡಿದರು.
ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಶನಿವಾರ ಹಮ್ಮಿಕೊಂಡಿದ್ದ ಪ್ರಕಾಶಕರ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 22 ಭಾಷೆಗಳಲ್ಲಿ ಪುಸ್ತಕಗಳನ್ನು ಹೊರತಂದಿದೆ. ಆದರೆ ಈ ಪುಸ್ತಕಗಳು ಸೇರಬೇಕಾದವರ ಕೈ ಸೇರಿಲ್ಲ. ಹೀಗಾದರೆ ಪುಸ್ತಕ ಪ್ರಕಣೆಯ ಮೂಲ ಉದ್ದೇಶ ಈಡೇರುವುದಿಲ್ಲ. ಈ ಬಗ್ಗೆ ಸರ್ಕಾರ ಕೂಡ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ದೇಶಾದ್ಯಂತ ಕರ್ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕೆ ಪ್ರಕಾಶಕರು ಕಾರಣ. ಪ್ರಕಾಶಕರು ಮೂಲ ಸೇವಕರು. ತ್ಯಾಗ ಜೀವಿಗಳು. ಹಿಂದೆ ಶಿವರಾಮ ಕಾರಂತರೂ ಸೇರಿ ಹಲವು ನವೋದಯ ಸಾಹಿತಿಗಳು ಲೇಖಕರಾಗಿ ಜತೆಗೆ ಪ್ರಕಾಶಕರಾಗಿಯೂ ಕೆಲಸ ನಿರ್ವಹಿಸಿದ್ದರು. ಕರ್ನಾಟಕದಲ್ಲಿ
ಪ್ರಕಾಶಕರ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ ಎಂದು ಬಣ್ಣಿಸಿದರು.
ಪ್ರಕಾಶನ ಒಂದು ರೀತಿಯ ಜೂಜಾಟ. ಉತ್ತಮ ಪುಸ್ತಕಗಳು ಹೊರ ಬಂದಾಗ ಅವರು ನಿರಾಳರಾಗುತ್ತಾರೆ. ಹಾಗೇ ಕೆಲ ಪುಸ್ತಕಗಳು ಮಾರಾಟವಾಗದೆ ಕೈಸುಟ್ಟುಕೊಳ್ಳುತ್ತಾರೆ. ಸರ್ಕಾರ, ಪ್ರಕಾಶಕರು ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಪುಸ್ತಕ ಉದ್ಯಮವನ್ನು ಸಮೃದ್ಧವಾಗಿ ಬೆಳೆಸಬೇಕು ಎಂದು ಮನವಿ ಮಾಡಿದರು.
ಪ್ರಕಾಶಕರ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಇದರ ಹುಟ್ಟಿಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಭಿನಂದನೆಗೆ ಅರ್ಹರು ಎಂದರು.
ಪುಸ್ತಕ ಪ್ರಕಾಶನ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಪುಸ್ತಕ ನೀತಿ ಜಾರಿಗೊಳಿಸಬೇಕು. ಪುಸ್ತಕ
ಮಾರಾಟಗಾರರಿಗೆ ದರದ ಮೇಲೆ ಸರ್ಕಾರ ರಿಯಾಯಿತಿ ನೀಡಬೇಕು. ಗ್ರಾಮೀಣ ಕನ್ನಡಗರಿಗೆ ಪುಸ್ತಕಗಳು ತಲುಪಬೇಕು ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಪ್ರಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ಟೌನ್ ಹಾಲ್ನಿಂದ ನಯನ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಜಾನಪದ ಕಲಾ ತಂಡಗಳು ಮೆರಣಿಗೆಗೆ ಸಾಥ್ ನೀಡಿದವು. ಹಿರಿಯ ಸಂಶೋಧಕ ಚಿದಾನಂದ ಮೂರ್ತಿ, ಚಂದ್ರಶೇಖರ ಪಾಟೀಲ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.
ಪುಸ್ತಕೋದ್ಯಮ ಪ್ರಗತಿಗೆ ಯೋಜನೆ ರೂಪಿಸಿ
ಕನ್ನಡ ಪುಸ್ತಕ ಪ್ರಾಧಿಕಾರ ಸಬಲಗೊಂಡು, ಪುಸ್ತಕೋದ್ಯಮದ ಪ್ರಗತಿಗೆ ಪೂರಕವಾಗಿರುವ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಪ್ರಕಾಶಕರ ಸಮ್ಮೇಳನಾಧ್ಯಕ್ಷ, ಮನೋಹರ ಗ್ರಂಥಮಾಲಾ ಪ್ರಕಾಶನದ ಡಾ.ರಮಾಕಾಂತ ಜೋಶಿ ಒತ್ತಾಯಿಸಿದರು. ಸರ್ಕಾರದ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲು ಕ್ರಮ
ಕೈಗೊಳ್ಳಬೇಕು ಎಂದು ಮನವಿ ಮಾಡಿದರು