ಔಷಧೋದ್ಯಮಕ್ಕೆ ಪೂರ್ಣ ನೆರವು
Team Udayavani, Jul 22, 2018, 11:41 AM IST
ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ಕೇಂದ್ರವೆಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರನ್ನು ಔಷಧೋದ್ಯಮ ಕೇಂದ್ರವನ್ನಾಗಿಯೂ ರೂಪಿಸಲು ಮುಂದಾದರೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ಅರಮನೆ ರಸ್ತೆಯಲ್ಲಿನ ಔಷಧ ನಿಯಂತ್ರಣ ಇಲಾಖೆ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಬೆಂಗಳೂರು, “ಐಟಿ ಹಬ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇರೀತಿ ಬೆಂಗಳೂರನ್ನು “ಫಾರ್ಮಾಸುಟಿಕಲ್ ಹಬ್’ ಆಗಿ ರೂಪಿಸುವುದಾದರೆ ಅದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಅನುಮತಿ ಇಲ್ಲದೇ ಔಷಧಗಳನ್ನು ಮಾರಾಟ ಮಾಡುವುದು ನಿಯಮ ಬಾಹಿರವಾಗಿದ್ದು, ಇದಕ್ಕೆ ಮೂರು ವರ್ಷ ಜೈಲು ಶಿಕ್ಷೆ ಇದೆ. ಪರವಾನಗಿ ಇಲ್ಲದೇ ಮಳಿಗೆಗಳಲ್ಲಿ ಔಷಧ ಮಾರಾಟ ಮಾಡುವವರನ್ನು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ. ಕಾನೂನು, ನಿಯಮಗಳು ಕಠಿಣವಾಗಿದ್ದು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಬದ್ಧತೆಯನ್ನು ಇಲಾಖೆ ಅಧಿಕಾರಿಗಳು ತೋರಿಸಬೇಕು. ಇಲಾಖೆ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದರು.
ತಪ್ಪು ಔಷಧ ಮಾರಾಟದಿಂದ ಗಂಭೀರ ಸ್ವರೂಪದ ಕಾಯಿಲೆಗಳು, ಪ್ರಾಣಹಾನಿ ಉಂಟಾಗುವ ಅಪಾಯವಿರುತ್ತದೆ. ಅದಕ್ಕೆ ಆಸ್ಪದ ನೀಡಬಾರದು. ಇದರ ತಡೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ ಎಂಬ ಮಾಹಿತಿ ಇದೆ. ತಪ್ಪು ಔಷಧ ಮಾರಾಟದಿಂದ ಯಾವುದೇ ಪ್ರಾಣಹಾನಿ ಉಂಟಾಗದಂತೆ ತಡೆಯಲು ಹೆಚ್ಚಿನ ಮುತುವರ್ಜಿಯಿಂದ ಕಾರ್ಯಾಚರಣೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್, ಕಾಯ್ದೆ ಅನುಸಾರ ಕ್ರಮ ಜರುಗಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಸಿಬ್ಬಂದಿ ಕೊರತೆ ನೆಪ ನೀಡಿ ಕರ್ತವ್ಯಕ್ಕೆ ಚ್ಯುತಿ ತರಬಾರದು. ನಿಯಮಾನುಸಾರ ಕಾರ್ಯಾಚರಣೆ ನಡೆಸಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ನೂತನ ಐದು ಅಂತಸ್ತಿನ ಕಟ್ಟಡ ನಿರ್ಮಿಸುವ ಯೋಜನೆ 2010ರಲ್ಲಿ ರೂಪುಗೊಂಡಿದ್ದು, 26 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ್, ಹೆಚ್ಚುವರಿ ಔಷಧ ನಿಯಂತ್ರಕ ಅಮರೇಶ್ ತಂಬಗಿ ಇತರರು ಉಪಸ್ಥಿತರಿದ್ದರು.
ಔಷಧದ ಹೆಸರಿನಲ್ಲಿ ಮಾದಕ ವಸ್ತು ಮಾರಾಟ ಜಾಲ “ಔಷಧ ಮಾರಾಟದ ಹೆಸರಿನಲ್ಲಿ ಮಾದಕ ವಸ್ತು ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದಾಗ ಅಚ್ಚರಿ ಯಾಯಿತು. ಅದರಂತೆ ಕಾರ್ಯಾಚರಣೆ ನಡೆಸಲು ಸೂಚಿಸಿದಾಗ ಮನೆಯೊಂದರಲ್ಲಿ ಮಾದಕ ವಸ್ತು ತಯಾರಿಸುತ್ತಿದ್ದುದು ಪತ್ತೆಯಾಗಿತ್ತು!’ ಎಂದು ಡಿಸಿಎಂ ಡಾ.ಪರಮೇಶ್ವರ್ ಅಚ್ಚರಿ ವ್ಯಕ್ತಪಡಿಸಿದರು.
ಮಾದಕ ವಸ್ತುಗಳು ನಗರಕ್ಕೆ ವಿದೇಶಗಳಿಂದ ಪೂರೈಕೆಯಾಗುತ್ತವೆ ಎಂದು ತಿಳಿದಿದ್ದ ನನಗೆ ಸ್ಥಳೀಯ ವಾಗೇ ತಯಾರಾಗುವ ಬಗ್ಗೆ ಗೊತ್ತಿರಲಿಲ್ಲ. ಅದರಂತೆ ಕಾರ್ಯಾಚರಣೆಗೆ ಸೂಚಿಸಿದೆ ಎಂದು ಹೇಳಿದರು.
ಕಮ್ಮನಹಳ್ಳಿಯ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಔಷಧ ತಯಾರಿಕೆಗೆ ಅನುಮತಿ ಪಡೆದು ಮಾದಕ ವಸ್ತು ತಯಾರಿಸುತ್ತಿದ್ದುದು ಕಂಡುಬಂತು. ಪೊಲೀಸರು ಹಾಗೂ ಸುಂಕ ಅಧಿಕಾರಿಗಳು ಇದನ್ನು ಪತ್ತೆಹಚ್ಚಿ ವಶಕ್ಕೆ ಪಡೆದರು. ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಈ ರೀತಿಯ ಕೃತ್ಯಗಳು ನಡೆಯುತ್ತಿವೆ ಎಂಬ ಮಾಹಿತಿಯಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಿಯಾಶೀಲವಾಗಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ. ಔಷಧ ನಿಯಂತ್ರಣ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಕಾಯ್ದೆ ಪ್ರಕಾರ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ