ವೇತನಾನುದಾನಕ್ಕೆ ಆಗ್ರಹಿಸಿ ಧರಣಿ
Team Udayavani, Aug 19, 2018, 11:58 AM IST
ಬೆಂಗಳೂರು: ವೇತನಾನುದಾನಕ್ಕೆ ಆಗ್ರಹಿಸಿ ಕರ್ನಾಟ ರಾಜ್ಯ ಅನುದಾನಕ್ಕೆ ಒಳಪಡುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಒಕ್ಕೂಟ, ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಸುತ್ತಿರುವ ಧರಣಿ ಶನಿವಾರ 33ನೇ ದಿನಕ್ಕೆ ಕಾಲಿರಿಸಿದೆ.
ಈ ಹಿಂದೆ, 1983ರಿಂದ 1994-95ರ ಅವಧಿಯಲ್ಲಿ ಪ್ರಾರಂಭವಾದ ಸುಮಾರು 94 ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು, ವೇತನಾನುದಾನಕ್ಕೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಶಿಫಾರಸು ಮಾಡಿ ಆರ್ಥಿಕ ಇಲಾಖೆ ಸಮ್ಮತಿಗೆ ಕಳುಹಿಸಿದ್ದರು.
ಆದರೆ, ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಸರ್ಕಾರಿ ಆದೇಶದಲ್ಲಿ ಇದು ಇಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಿ ಕಡತಗಳನ್ನು ಹಿಂದಿರುಗಿಸಿದ್ದಾರೆ. ಹೀಗಾಗಿ, ಹಲವು ಶಿಕ್ಷಕರು ತೊಂದರೆಗೆ ಸಿಲುಕಿದ್ದಾರೆ ಎಂದು ಧರಣಿ ನಿರತರು ದೂರಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವರದರಾಜ್, 2007ರಲ್ಲಿ ಸರ್ಕಾರ 1600 ಶಾಲೆಗಳಿಗೆ ವೇತನಾನುದಾನ ನೀಡಿತ್ತು. ಇದೇ ರೀತಿ ಬಾಕಿ ಉಳಿದಿರುವ ಸುಮಾರು 94 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೂ ನೀಡಬೇಕು. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿ ನಡೆಯಲಿದೆ ಎಂದರು.