ಅಶ್ಲೀಲ ಕಮೆಂಟ್ ಮಾಡುತ್ತಿದ್ದವನ ಬಂಧನ
Team Udayavani, Sep 23, 2018, 12:58 PM IST
ಬೆಂಗಳೂರು: ಫೇಸ್ಬುಕ್ನಲ್ಲಿ ಗಣ್ಯ ವ್ಯಕ್ತಿಗಳ ಬಗ್ಗೆ ಅಶ್ಲೀಲ ಪದಗಳ ಬರಹ ಹಾಗೂ ಕಾಮೆಂಟ್ಗಳನ್ನು ಮಾಡುತ್ತಿದ್ದ ಉದಯ್ಗೌಡ ಎಂಬಾತನನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿ ಹೇಮಂತ್ಗೌಡ ಬಳಿ ಒಂದು ಕಾರು, ವಿವಿಧ ಕಂಪನಿಗಳ 100ಕ್ಕೂ ಅಧಿಕ ಸಿಮ್ಗಳು, 5 ಮೊಬೈಲ್, ಇತರೆ ವ್ಯಕ್ತಿಗಳ ವಿಸಿಟಿಂಗ್ ಕಾರ್ಡ್, ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ತನ್ನ ಫೇಸ್ಬುಕ್ ಕಾಮೆಂಟ್ನಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಪ್ರೀತಂಗೌಡ ಬಿಜೆಪಿಯ ಒಕ್ಕಲಿಗ ಯುವನಾಯಕರು ಆಗುತ್ತಿದ್ದಾರೆ ಎಂಬ ಅಸೂಯೆಯಿಂದ ಆರ್. ಅಶೋಕ್, ಜಾತ್ಯಾತೀತರೊಂದಿಗೆ ಸೇರಿ ಸೂಟ್ಕೇಸ್ ಪಕ್ಷಕ್ಕೆ ಬಿಜೆಪಿಯ ಆಂತರಿಕ ಒಳಗುಟ್ಟುಗಳನ್ನು ಮಾರಿಕೊಳ್ಳುತ್ತಿದ್ದಾರೆ ಎಂಬಿತ್ಯಾದಿ ಅಂಶಗಳನ್ನೊಳಗೊಂತೆ ಅಶ್ಲೀಲವಾಗಿ ಬರೆದಿದ್ದ.
ಈ ಕುರಿತು ಕೋದಂಡರಾಮ ಎನ್ನುವವರು ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಶನಿವಾರ ಬಿಬಿಎಂಪಿ ಕಚೇರಿ ಬಳಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.
ಕಾನೂನುಬಾಹಿರ ಕೃತ್ಯಗಳಿಗೆ ಸಿಮ್ ಬಳಕೆ!: ಅನ್ಯ ವ್ಯಕ್ತಿಗಳ ಹೆಸರಿನಲ್ಲಿ ದಾಖಲೆಗಳನ್ನು ಸಲ್ಲಿಸಿರುವ ಆರೋಪಿ ವಿವಿಧ ಕಂಪನಿಗಳ 100ಕ್ಕೂ ಹೆಚ್ಚು ಕಂಪನಿಗಳ ಸಿಮ್ ಕಾರ್ಡ್ಗಳನ್ನು ಪಡೆದುಕೊಂಡು, ಆ ಮೊಬೈಲ್ ನಂಬರ್ಗಳನ್ನು ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹೇಮಂತ್ ಗೌಡ ಹೆಸರಿನಲ್ಲಿ ಫೇಸ್ ಖಾತೆ ಹೊಂದಿರುವ ಆರೋಪಿ, ಸಮಾಜದ ಗಣ್ಯವ್ಯಕ್ತಿಗಳ ಬಗ್ಗೆ ಅಶ್ಲೀಲ ಭಾಷೆಯಲ್ಲಿ ಕಮೆಂಟ್ಗಳನ್ನು ಮಾಡುತ್ತಿದ್ದ. ಜತೆಗೆ, ಎರಡು ಕೋಮಿನ ನಡುವೆ ಸಾಮರಸ್ಯ ಕದಡುವ ಪ್ರಚೋದನಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದ. ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
100 ಸಿಮ್ ಪಡೆದುಕೊಂಡಿದ್ದು ಏಕೆ?: ಆರೋಪಿ ಉದಯ್ಗೌಡ 100 ಸಿಮ್ಗಳನ್ನು ಬಳಸಿ ಪ್ರತ್ಯೇಕವಾಗಿ ನಕಲಿ ಫೇಸ್ಬುಕ್ ಖಾತೆಗಳನ್ನು ತೆರೆದಿದ್ದನೇ, ಆತ ಅಷ್ಟೊಂದು ಸಿಮ್ಗಳನ್ನು ಖರೀದಿಸಿರುವ ಉದ್ದೇಶ ಏನು? ಆತನಿಗೆ ಯಾರಾದರೂ ಕುಮ್ಮಕ್ಕು ನೀಡಿದ್ದರೇ. ಯಾವುದಾದರೂ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದನೇ? ಆತನ ಹಿನ್ನೆಲೆ ಬಗ್ಗೆ ಕೂಲಂಕುಶ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.