ಪದೇ ಪದೆ ಗಲಾಟೆಮಾಡೋದು ಒಳ್ಳೇದಲ್ಲ
Team Udayavani, Oct 25, 2018, 11:04 AM IST
ಬೆಂಗಳೂರು: ಮಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ರನ್ನು ಬುಧವಾರ ವಿಚಾರಣೆ ನಡೆಸಿರುವ ಪೊಲೀಸರು, “”ಪದೇ ಪದೇ ನಿಮ್ಮ ವಿರುದ್ಧ ದೂರುಗಳು ದಾಖಲಾಗುತ್ತಿದ್ದು, ಈ ಬೆಳವಣಿಗೆ ಒಳ್ಳೆಯದಲ್ಲ. ನಿಮ್ಮ ಕೌಟುಂಬಿಕ ಕಲಹ ಬಗೆಹರಿಸುವುದೇ ನಮಗೆ ಕೆಲಸವಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಆರೋಪಿಗಳು ಎಂದು ಪರಿಗಣಿಸಲಾದ ದುನಿಯಾ ವಿಜಯ್, ಕೀರ್ತಿಗೌಡ ಸೇರಿದಂತೆ ಐವರನ್ನು ಪ್ರತ್ಯೇಕವಾಗಿ ಗಿರಿನಗರ ಠಾಣೆ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ.ಸೆಲೆಬ್ರಿಟಿಯಾಗಿ ಪದೇ ಪದೇ ಗಲಾಟೆ ಮಾಡಿಕೊಂಡು ಬರುತ್ತೀರಿ. ನಿಮ್ಮ ವಿರುದ್ಧದ ಕೇಸುಗಳ ಬಗೆಹರಿಸುವುದೇ ಕೆಲಸವಲ್ಲ. ಮತ್ತೂಮ್ಮೆ ಹೀಗಾದಂತೆ ಜಾಗರೂಕತೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ವಿಜಯ್, ನನ್ನ ವಿರುದ್ಧ ನಿರಾಧಾರ ಆರೋಪ ಮಾಡಿದ್ದಾರೆ ಎಂದು ನಾನು ಮಗಳ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನ ಕೀ ಹಾಗೂ ಅಗತ್ಯ ವಸ್ತುಗಳನ್ನು ತರುವ ಸಲುವಾಗಿ ಅ.22ರಂದು ತಂದೆ ವಿಜಯ್ ವಾಸಮಾಡುತ್ತಿರುವ ಮನೆಗೆ ತೆರಳಿದ್ದೆ. ಈ ವೇಳೆ ತಂದೆ ವಿಜಯ್, ಕೀರ್ತಿಗೌಡ, ಹೇಮಂತ್, ವಿನೋದ್, ಮಹಮ್ಮದ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಒದ್ದಿದ್ದಾರೆ. ಅಷ್ಟೇ ಅಲ್ಲದೆ ನನ್ನ ತಲೆ ಹಿಡಿದುಕೊಂಡು ಗೋಡೆಗೆ ಬಲವಾಗಿ ಹೊಡೆಸಿದ್ದಾರೆ ಎಂದು ಆರೋಪಿಸಿ ವಿಜಯ್ ಪುತ್ರಿ ಮೋನಿಕಾ ದೂರು ನೀಡಿದ್ದರು.