ಕೃಷಿಯ ಜತೆ ಜೀವನ ಕ್ರಮವನ್ನೂ ಬದಲಿಸಿದ ಯಂತ್ರೋಪಕರಣಗಳು
Team Udayavani, Nov 18, 2018, 12:26 PM IST
ಬೆಂಗಳೂರು: ಯಂತ್ರೋಪಕರಣಗಳು ಕೃಷಿ ಪದ್ಧತಿಯನ್ನು ಮಾತ್ರವಲ್ಲ; ರೈತರ ಲೈಫ್ಸ್ಟೈಲ್ನಲ್ಲೂ ಬದಲಾವಣೆ ತರುತ್ತಿವೆ. ಇದು ರೈತರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆಯೇ? ಕೃಷಿ ಮೇಳದಲ್ಲಿ ತೆರೆಯಲಾದ ಉಚಿತ ಆರೋಗ್ಯ ತಪಾಸಣಾ ಮಳಿಗೆಯಲ್ಲಿ ಕಂಡು ಬರುತ್ತಿರುವ ಮಧುಮೇಹ ಪ್ರಕರಣಗಳು ಇಂತಹದ್ದೊಂದು ಅನುಮಾನ ಹುಟ್ಟುಹಾಕಿದೆ.
“ಮೇಳದಲ್ಲಿ ಕಳೆದ 3 ದಿನಗಳಲ್ಲಿ ಸುಮಾರು 733ಕ್ಕೂ ಅಧಿಕ ಜನ ರಕ್ತದೊತ್ತಡ, ಮಧುಮೇಹ ಸೇರಿದಂತೆ ಆರೋಗ್ಯ ತಪಾಸಣೆಗೊಳಪಟ್ಟಿದ್ದಾರೆ. ಅವರಲ್ಲಿ ಅಂದಾಜು ಶೇ.20ರಷ್ಟು ಜನರಲ್ಲಿ ಹೊಸದಾಗಿ ಮಧುಮೇಹ ಇರುವುದು ಕಂಡುಬಂದಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರೇ ಆಗಿದ್ದಾರೆ. “ನಮಗೆ ಮಧುಮೇಹ ಇರಲಿಲ್ಲ. ಇವತ್ತೇ ಗೊತ್ತಾಗಿದೆ’ ಎಂದು ಅವರೆಲ್ಲಾ ಅಚ್ಚರಿ ವ್ಯಕ್ತಪಡಿಸಿದರು. ಈ ಬೆಳವಣಿಗೆ ಸ್ವತಃ ನಮಗೂ ಅಚ್ಚರಿ ಮೂಡಿಸಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಅಶ್ವತ್ಥಮ್ಮ “ಉದಯವಾಣಿ’ಗೆ ತಿಳಿಸಿದರು.
ಕಾರಣ ಏನಿರಬಹುದು?: ರೈತರು ಹೆಚ್ಚು ಶ್ರಮಜೀವಿಗಳು. ಹಗಲು-ರಾತ್ರಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಅಂತಹವರಲ್ಲೂ ಈ ಮಧುಮೇಹ ಹೆಚ್ಚಾಗಿ ಕಂಡುಬರುತ್ತಿರುವುದು ಏಕೆ ಎಂಬುದು ನಮಗೂ ಗೊತ್ತಾಗುತ್ತಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಟ್ರೆಂಡ್ ಬದಲಾಗಿದೆ. ಯಂತ್ರೋಪಕರಣಗಳು, ಆಳುಗಳ ಮೇಲಿನ ಅವಲಂಬನೆ ಹೆಚ್ಚಿದೆ. ಅಷ್ಟೇ ಅಲ್ಲ, ವಾಹನಗಳ ಬಳಕೆ ಕೂಡ ಅಧಿಕವಾಗಿದೆ.
ಈ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ; ನಿತ್ಯ ಕಾಲ್ನಡಿಗೆ ಅಥವಾ ಎತ್ತಿನ ಬಂಡಿಗಳಿದ್ದವು. ಇದರೊಂದಿಗೆ ಆಹಾರ ಪದ್ಧತಿಯೂ ಬದಲಾಗಿದೆ. ಇದೆಲ್ಲವೂ ಮಧುಮೇಹ ಹೆಚ್ಚಾಗಿ ಕಂಡುಬರಲು ಕಾರಣವಾಗಿರಬಹುದು ಎಂದು ಡಾ.ಅಶ್ವತ್ಥಮ್ಮ ಅಭಿಪ್ರಾಯಪಡುತ್ತಾರೆ.
ಒಟ್ಟಾರೆ ರೈತ ಸಮೂಹಕ್ಕೆ ಇದು ಮಾನದಂಡ ಎಂದೂ ಹೇಳಲಿಕ್ಕಾಗದು. ಭಾರತ ಇಂದು ಮಧುಮೇಹಿಗಳ ರಾಜಧಾನಿಯಾಗಿ ಪರಿವರ್ತನೆಯಾಗಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ ಅಷ್ಟೇ. ಆದರೆ, ವಾಸ್ತವವಾಗಿ ಇದುವರೆಗೆ ದೇಶದಲ್ಲಿ ಮಧುಮೇಹಿ ರೈತರು ಹಾಗೂ ರೈತ ಮಹಿಳೆಯರ ಪ್ರತ್ಯೇಕ ಸಮೀಕ್ಷೆ ಅಥವಾ ಅಧ್ಯಯನ ನಡೆದಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ನಿಖರವಾಗಿ ಹೇಳುವುದೂ ಕಷ್ಟ ಎಂದೂ ಅವರು ಸ್ಪಷ್ಟಪಡಿಸಿದರು.
ಆದರೆ, ಕೃಷಿಯಲ್ಲಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ವೆಚ್ಚ ಮತ್ತಿತರ ಕಾರಣಗಳಿಂದ ಯಂತ್ರಗಳ ಅವಲಂಬನೆ ಅನಿವಾರ್ಯ ಆಗುತ್ತಿದೆ. ಅಷ್ಟಕ್ಕೂ ಯಂತ್ರೋಪಕರಣಗಳು ರೈತರ ಕೈಹಿಡಿಯುತ್ತಿದ್ದು, ಲಾಭದತ್ತ ಕೊಂಡೊಯ್ಯುತ್ತಿವೆ ಎಂದು ಕೃಷಿ ತಜ್ಞರು ಹೇಳುತ್ತಾರೆ. ಈ ಮಧ್ಯೆ ಆರೋಗ್ಯ ತಪಾಸಣೆ ಕೇಂದ್ರದಲ್ಲಿ ಭೇಟಿ ನೀಡಿದವರ ಪೈಕಿ ಸುಮಾರು 40ಕ್ಕೂ ಹೆಚ್ಚು ಜನ ಖನ್ನತೆಯಿಂದ ಬಳಲುತ್ತಿರುವವರೂ ಇದ್ದಾರೆ.
ಅವರಲ್ಲಿ ಕೆಲವರು ರೈತರೂ ಆಗಿದ್ದಾರೆ. ಮದ್ಯಪಾನ ಮತ್ತು ಧೂಮಪಾನ ವ್ಯಸನದಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಅವರು ಸಮಾಲೋಚನಾ ಕೇಂದ್ರದಲ್ಲಿ ಸಲಹೆ ಪಡೆದಿದ್ದಾರೆ. ಈ ಪೈಕಿ ಬೆರಳೆಣಿಕೆಯಷ್ಟು ರೈತರು ಸಾಲದಿಂದ ಬೇಸತ್ತಿರುವುದಾಗಿಯೂ ಹೇಳಿದ್ದಾರೆ ಎಂದು ಸಮಾಲೋಚನಾ ಘಟಕದಲ್ಲಿದ್ದ ಪೀಪಲ್ ಟ್ರೀ ಮಾರ್ಗದ ಸಮಾಲೋಚಕಿಯೊಬ್ಬರು ತಿಳಿಸಿದರು.
ಕೃಷಿಯತ್ತ ಟೆಕ್ಕಿಗಳ ಆಸಕ್ತಿ: ಸಾಫ್ಟ್ವೇರ್ ಕಂಪೆನಿ ಉದ್ಯೋಗಿಗಳು ಕೃಷಿ ಬಗ್ಗೆ ಆಸಕ್ತಿ ತೋರಿಸುತ್ತಿರುವುದೂ ಮೇಳದಲ್ಲಿ ಕಂಡುಬಂದಿದೆ. ಮೇಳದಲ್ಲಿ ಸಲಹಾ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಕಳೆದ ಮೂರು ದಿನಗಳಿಂದ ಸರಾಸರಿ 600-700 ಜನ ಭೇಟಿ ನೀಡಿ, ಸಲಹೆಗಳನ್ನು ಪಡೆದಿದ್ದಾರೆ. ಇದರಲ್ಲಿ ಶೇ. 5ರಷ್ಟು ಜನ ಟೆಕ್ಕಿಗಳೂ ಆಗಿದ್ದಾರೆ ಎಂದು ಸಲಹಾ ಕೇಂದ್ರದ ಮುಖ್ಯಸ್ಥ ಹಾಗೂ ಬೆಂಗಳೂರು ಕೃಷಿ ವಿವಿಯ ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಡಿ.ಇ. ಗಂಗಪ್ಪ ತಿಳಿಸಿದರು.
ಟೆಕ್ಕಿಗಳು ಕುರಿ, ಕೋಳಿ ಸಾಕಾಣಿಕೆ ಲಾಭದಾಯಕವೇ? ತಮ್ಮಲ್ಲಿ ಜಮೀನು ಇದ್ದು, ಅದರಲ್ಲಿ ಏನು ಬೆಳೆದರೆ ಲಾಭದಾಯಕ ಆಗಬಹುದು? ಎಂಬ ಇತ್ಯಾದಿ ಮಾಹಿತಿ ಪಡೆದಿದ್ದಾರೆ. ಉಳಿದವರು ಬಹುತೇಕ ರೋಗಗಳ ಹತೋಟಿ, ಹೊಸ ತಳಿಗಳು, ತೋಟಗಾರಿಕೆಯಲ್ಲಿ ಹಣ್ಣಿನ ತಳಿಗಳ ಬಗ್ಗೆ ಹೆಚ್ಚಾಗಿ ಕೇಳುತ್ತಿರುವುದು ಕಂಡುಬಂದಿದೆ ಎಂದರು.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ