ಕೃಷಿ ಮೇಳಕ್ಕೆ ವರ್ಣರಂಜಿತ ತೆರೆ
Team Udayavani, Nov 19, 2018, 12:46 PM IST
ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಗುರುವಾರ ಆರಂಭಗೊಂಡಿದ್ದ ಕೃಷಿ ಮೇಳೆಕ್ಕೆ ಭಾನುವಾರ ಸಂಜೆ ವರ್ಣರಂಜಿತ ತೆರೆ ಬಿದ್ದಿದ್ದು, ನಾಲ್ಕು ದಿನಗಳಲ್ಲಿ 13 ಲಕ್ಷ ಜನ ಭೇಟಿ ನೀಡಿ, 5.82 ಕೋಟಿ ವಹಿವಾಟು ನಡೆಸಿದ್ದಾರೆ.
ಕೃಷಿ ಸಂಶೋಧನೆ, ಕೃಷಿ ಪರಿಕರದ ಪ್ರದರ್ಶನ ಮತ್ತು ಮಾರಾಟ, ಜೇನು ಸಾಕಾಣಿಕೆ, ಒಳನಾಡು ಮೀನುಗಾರಿಕೆ, ಹೈನುಗಾರಿಕೆ, ತೋಟಗಾರಿಕೆ ಹೀಗೆ ಕೃಷಿ ವಿವಿಧ ಆಯಾಮ ಮತ್ತು ಆಧುನಿಕ ಪದ್ಧತಿಯ ಅವಶ್ಯಕತೆ ಒಳಗೊಂಡ ಸಮಗ್ರ ಚಿತ್ರಣ ಅನಾವರಣಗೊಂಡಿತ್ತು. ರೈತರು, ಕೃಷಿ ತಜ್ಞರು, ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಾರ್ವಜನಿಕರು ಹೀಗೆ ಎಲ್ಲರೂ ಕೃಷಿ ಮೇಳವನ್ನು ಕಣ್ತುಂಬಿಕೊಂಡಿದ್ದಾರೆ.
ಭಾನುವಾರ ಜನಸಾಗರ: ನಾಲ್ಕು ದಿನದ ಮೇಳದಲ್ಲಿ ಕೊನೆಯ ದಿನ ಜನ ಸಾಗರವೇ ಸೇರಿತ್ತು. ಭಾನುವಾರವಾಗಿದ್ದರಿಂದ ಬಹುತೇಕರು ಕುಟುಂಬ ಸಮೇತರಾಗಿ ಬಂದಿದ್ದರು. ಮೇಳದಲ್ಲಿ 650ಕ್ಕೂ ಅಧಿಕ ಮಳಿಗೆ ದಿನಪೂರ್ತಿ ಭರ್ತಿಯಾಗಿತ್ತು.
ಗೀರ್ ತಳಿಯ ಹಸು ಹಾಗೂ ಹಳ್ಳಿಕಾರ್ ಎತ್ತು, ಬಂಡೂರು ಕುರಿ, ಖಡಕ್ನಾಥ್ ಕೋಳಿ, ಬೆಳೆಗೆ ರಸಗೊಬ್ಬರ ಸಿಂಪಡಿಸುವ ಡ್ರೋಣ್, ಕೃಷಿಯ ಆಧುನಿಕ ಪರಿಕರಗಳು ಮೇಳದ ಆಕರ್ಷಣೆಯಾಗಿತ್ತು. ವಿದ್ಯಾರ್ಥಿಗಳು, ಯುವಕರು, ಕುಟುಂಬಸ್ತರು ಅಲ್ಲಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಫುಡ್ಕೋರ್ಟ್ ಭರ್ತಿ: ಮೇಳದಲ್ಲಿ ಫುಡ್ಕೋರ್ಟ್ ಎಲ್ಲರನ್ನು ಆಕರ್ಷಿಸುತ್ತಿತ್ತು. ಸಸ್ಯಹಾರಿ ಹಾಗೂ ಮಾಂಸಹಾರಿ ಖಾದ್ಯಗಳು, ಐಸ್ಕ್ರೀಂ, ಚೈನಿಸ್ ಫುಡ್ ಹೀಗೆ ಎಲ್ಲ ಬಗೆಯ ತಿನಿಸುಗಳ ಮಳಿಗೆ ಇದ್ದವು. ಮೇಲುಕೋಟೆ ಪುಳಿಯೊಗರೆ ಸಹಿತವಾಗಿ ಸಸ್ಯಹಾರಿ ವಿಭಾಗದಲ್ಲಿ ವಿವಿಧ ಖಾದ್ಯಗಳು, ಕೂರ್ಗ್ ಸ್ಟೈಲ್ ಫೋರ್ಕ್, ಕರಾವಳಿ ಫಿಶ್, ಮಂಡ್ಯದ ಬಾಡೂಟ ಹೀಗೆ ನಾನಾ ಮಾದರಿಯ ರುಚಿಕರ ಖಾದ್ಯಗಳು ಸೇರಿದ್ದವರಿಗೆ ಖುಷಿ ಕೊಟ್ಟಿದೆ.
ಫುಡ್ಕೋರ್ಟ್ನಲ್ಲಿ 50 ರೂ. ಮುದ್ದೆ ಊಟ ನೀಡುತ್ತಿದ್ದದ್ದು ಇನ್ನೊಂದು ವಿಶೇಷವಾಗಿತ್ತು. ದಿನಕ್ಕೆ ಸರಿ ಸುಮಾರು 10ರಿಂದ 15 ಸಾವಿರ ಮುದ್ದೆಯಂತೆ ನಾಲ್ಕು ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ಮುದ್ದೆ ಖಾಲಿಯಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು.
ಅಚ್ಚುಕಟ್ಟಾದ ವ್ಯವಸ್ಥೆ: ಮೇಳದ ಪಾರ್ಕಿಂಗ್ ಸೇರಿದಂತೆ ಎಲ್ಲ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಭದ್ರತೆಗಾಗಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕಾಲೇಜಿನ ಎನ್ಎಸ್ಎಸ್ ಹಾಗೂ ಎನ್ಸಿಸಿ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ್ದಾರೆ.
ಮೇಳಕ್ಕೆ ಬಂದವರಿಗೆ ಯಾವುದೇ ಸಮಸ್ಯೆಯಾಗದಂತೆ ಪೊಲೀಸ್ ಚೌಕಿಯ ನಿರ್ಮಾಣ ಮಾಡಲಾಗಿತ್ತು. ಕೃಷಿ ಸಮಾಲೋಚನೆ ಹಾಗೂ ಮಾಹಿತಿ ನೀಡಲು ಪ್ರತ್ಯೇಕ ಘಟಕ ತೆರೆಯಲಾಗಿತ್ತು. ಕೃಷಿ ಸಾಧಕರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉತ್ತಮ ಪ್ರದರ್ಶಕರು:ಕೃಷಿ ವಿವಿ ಮಳಿಗೆ, ಕೃಷಿ ಉಪಕರಣ, ಸಾವಯವ ಕೃಷಿ, ಬ್ಯಾಂಕ್, ಸ್ಟಾರ್ಟ್ಅಪ್, ಸರ್ಕಾರದ ಮಳಿಗೆ, ನರ್ಸರಿ, ಪಶುಸಂಗೋಪನೆ, ನೀರಾವರಿ ತಂತ್ರಜ್ಞಾನ ಹೀಗೆ 16 ವಿಭಾಗದಲ್ಲಿ ಸರಿ ಸುಮಾರು 50 ಪ್ರದರ್ಶಕರಿಗೆ ಉತ್ತಮ ಪ್ರದರ್ಶಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾರ್ವಜನಿಕರ ಭೇಟಿ, ವಹಿವಾಟು ವಿವರ
ದಿನ ಜನರ ಸಂಖ್ಯೆ ವಹಿವಾಟು
-ಮೊದಲ ದಿನ 1.1 ಲಕ್ಷ 97 ಲಕ್ಷ ರೂ.
-ಎರಡನೇ ದಿನ 2.50 ಲಕ್ಷ 1.5 ಕೋಟಿ ರೂ.
-ಮೂರನೇ ದಿನ 4 ಲಕ್ಷ 1.6 ಕೋಟಿ ರೂ.
-ನಾಲ್ಕನೇ ದಿನ 5.5 ಲಕ್ಷ ಜನ 1.75 ಕೋಟಿ ರೂ.
ಕೃಷಿ ಮೇಳದಿಂದಾಗಿ ಅನೇಕ ಹೊಸ ಹೊಸ ಸಂಗತಿಗಳು ಕಲಿಯಲು ಸಿಕ್ಕಿವೆ. ಇದೇ ಮೊದಲ ಬಾರಿ ನಾನು ಮೇಳಕ್ಕೆ ಭೇಟಿ ನೀಡಿದ್ದೇನೆ. ಹೊಸ ಪೀಳಿಗೆಯನ್ನು ಕೃಷಿಯತ್ತ ಆಕರ್ಷಿಸಲು ಇದು ಉತ್ತಮ ವೇದಿಕೆ. ಮುಂಬರುವ ವರ್ಷಗಳಲ್ಲಿ ಇದು ಇನ್ನಷ್ಟು ಉತ್ತಮವಾಗಿ ಮೂಡಿಬರಲಿ.
-ಪ್ರಸನ್ನ, ಇಂಜಿನಿಯರ್, ಇಂಡೋ ಎಂಐಎಂ
ವಿದ್ಯಾರ್ಥಿ ದೆಸೆಯಿಂದಲೂ ಪ್ರತಿ ವರ್ಷ ಮೇಳಕ್ಕೆ ಬರುತ್ತಿದ್ದೇನೆ. ಇಷ್ಟು ಅಚ್ಚುಕಟ್ಟಾಗಿ ಮತ್ತು ವಿನೂತನವಾಗಿ ರೈತರ ಜಾತ್ರೆ ಬೇರೆಲ್ಲೂ ನಡೆಯುವುದಿಲ್ಲ ಎಂಬುದು ನನ್ನ ಭಾವನೆ. ಇವೆಲ್ಲವನ್ನೂ ನೋಡಿದಾಗ, ನಾನೂ ಕೃಷಿಯನ್ನು ಮಾಡಲು ಸಾಧ್ಯವಿದೆ ಎಂಬ ಆತ್ಮವಿಶ್ವಾಸ ಬರುತ್ತಿದೆ.
-ರಶ್ಮಿ, ಎಕ್ಸೆಂಚರ್ ಉದ್ಯೋಗಿ
ಪ್ರತಿ ವರ್ಷ ನಾನು ಮೇಳಕ್ಕೆ ಬರುತ್ತೇನೆ. ಮಳಿಗೆಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅವುಗಳಲ್ಲಿ ಕೃಷಿಗೆ ಅನುಕೂಲವಾಗುವಂತಹವು ಕಡಿಮೆ ಅನಿಸುತ್ತದೆ. ರೈತರಿಗೆ ನೆರವಾಗುವ ಮಳಿಗೆಗಳು ಬರಬೇಕು. ಜನಾಕರ್ಷಣೆಗೆ ಹೆಚ್ಚು ಒತ್ತುಕೊಟ್ಟಂತಿದೆ.
-ಶಿವಕುಮಾರಸ್ವಾಮಿ, ರೈತ, ತಿಪಟೂರು
ವರ್ಷದಿಂದ ವರ್ಷಕ್ಕೆ ಜನದಟ್ಟಣೆ ಹೆಚ್ಚುತ್ತಿದೆ. ಮಳಿಗೆಗಳನ್ನು ಅವಲೋಕಿಸಿದಾಗ, ಪುನರಾವರ್ತನೆ ಹೆಚ್ಚಿದೆ. ಅಂದರೆ ಹಿಂದಿನ ವರ್ಷಗಳಲ್ಲಿ ನಾನು ನೋಡಿದ ಮಳಿಗೆಗಳನ್ನು ಈ ಬಾರಿಯೂ ಕಾಣುತ್ತಿದ್ದೇನೆ. ಹಾಗಾಗಿ, ಈ ನಿಟ್ಟಿನಲ್ಲಿ ಬದಲಾವಣೆ ಅವಶ್ಯಕತೆಯೂ ಇದೆ.
-ವತ್ಸಲಾ, ನಿವೃತ್ತ ಪ್ರಾಧ್ಯಾಪಕಿ, ಭಾರತೀಯ ವಿಜ್ಞಾನ ಸಂಸ್ಥೆ
ಕಳೆದ ಮೂರು ವರ್ಷಗಳಿಂದ ತಪ್ಪದೆ ಮೇಳಕ್ಕೆ ಬರುತ್ತಿದ್ದೇನೆ. ಉತ್ತಮ ಮಾಹಿತಿ ಕೇಂದ್ರವಾಗಿದೆ. ಸ್ವತಃ ನಾನು ಟೆರೇಸ್ನಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದೇನೆ. ಅದಕ್ಕೆ ಪೂರಕವಾದ ಮತ್ತು ಉತ್ತಮಪಡಿಸಲು ಸಾಕಷ್ಟು ಮಾಹಿತಿ ಇಲ್ಲಿ ಸಿಕ್ಕಿದೆ.
-ದುರ್ಗಾ, ಸಹಕಾರ ನಗರ ನಿವಾಸಿ
ಒಳ್ಳೆಯ ಮಾಹಿತಿ ಇದೆ. ಆದರೆ, ಅದನ್ನು ತಿಳಿದುಕೊಳ್ಳಲಿಕ್ಕೂ ಆಗದಷ್ಟು ಗದ್ದಲ. ಸ್ವತ್ಛತೆ ಕೊರತೆ ಎದ್ದುಕಾಣುತ್ತಿದೆ. ಇನ್ನಷ್ಟು ವ್ಯವಸ್ಥಿತವಾಗಿ ಆಗಬೇಕು. ರೈತರಿಗೆ ಹೆಚ್ಚು ಅನುಕೂಲ ಆಗುವಂತಿದೆ.
-ಡಾ.ಗಾಯತ್ರಿ, ವೈದ್ಯರು, ಸದಾಶಿವನಗರ
ಕೃಷಿ ಸಂಬಂಧಿತ ಹೊಸ ಸಂಗತಿಗಳು, ಪ್ರಗತಿಪರ ರೈತರ ಸಾಧನೆಗಳನ್ನು ಯುವಪೀಳಿಗೆಗೆ ಅದರಲ್ಲೂ ಬೆಂಗಳೂರಿನ ನಿವಾಸಿಗಳಿಗೆ ಪರಿಚಯಿಸಲು ಉತ್ತಮ ವೇದಿಕೆ. ವಿನೂತನ ಮಳಿಗೆಗಳಲ್ಲಿ ಅನೇಕ ಮಾಹಿತಿಗಳನ್ನು ಕಾಣಬಹುದು. ತಂತ್ರಜ್ಞಾನಗಳ ದೃಷ್ಟಿಯಿಂದಲೂ ರೈತರಿಗೆ ಅನುಕೂಲಕರವಾಗಿದೆ.
-ಸತ್ಯನಾರಾಯಣ, ವಿಜಯನಗರ ನಿವಾಸಿ