ಎಎಸ್ಐಗಳಿಗೂ ಇನ್ನು ಶಸ್ತ್ರಾಸ್ತ್ರ ಬಲ
Team Udayavani, Nov 21, 2018, 11:51 AM IST
ಬೆಂಗಳೂರು: ಪ್ರಕರಣಗಳ ತನಿಖೆಯಲ್ಲಿ ಮೇಲಾಧಿಕಾರಗಳಿಗೆ “ಅಸ್ತ್ರ’ಗಳಾಗಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್(ಎಎಸ್ಐ)ಗಳಿಗೂ ಈಗ “ಶಸ್ತ್ರ’ ಬಲ ಬಂದಿದೆ. ನಗರದಲ್ಲಿ ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಮತ್ತೂಂದೆಡೆ ಆರೋಪಿಗಳು ಪೊಲೀಸರ ಮೇಲೆಯೇ ದಾಳಿ ನಡೆಸುವ ಘಟನೆಗಳೂ ಮರುಕಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರು ಪೊಲೀಸರ ಪಿಸ್ತೂಲ್ ಘರ್ಜಿಸಲಾರಂಭಿಸಿದೆ.
ಅದರ ಬೆನ್ನಲ್ಲೇ ಸಹಾಯಕ ಸಬ್ ಇನ್ಸ್ಪೆಕ್ಟರ್ಗಳನ್ನೂ ಶಸ್ತ್ರಸಜ್ಜಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಇದುವರೆಗೆ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಮತ್ತು ಅವರಿಗಿಂತ ಮೇಲಾಧಿಕಾರಿಗಳಿಗೆ ಮಾತ್ರ ಸೀಮಿತವಾಗಿದ್ದ ರಿವಾಲ್ವರ್ ಹಾಗೂ ಪಿಸ್ತೂಲ್ ಸಹಾಯಕ ಸಬ್ ಇನ್ಸ್ಪೆಕ್ಟರ್(ಎಎಸ್ಐ)ಗಳಿಗೂ ನೀಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿರುವ 500ಕ್ಕೂ ಹೆಚ್ಚು ಮಂದಿ ಎಎಸ್ಐಗಳಿಗೆ ಈಗಾಗಲೇ ನಗರ ಸಶಸ್ತ್ರ ಪಡೆ (ಸಿಎಆರ್)ಯಲ್ಲಿ ಪಿಸ್ತೂಲ್ ಹಾಗೂ ರಿವಲ್ವಾರ್ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.
ಪೊಲೀಸ್ ಇಲಾಖೆಯಲ್ಲಿರುವ ಕಾನ್ಸ್ಟೆಬಲ್, ಹೆಡ್ಕಾನ್ಸ್ಟೆಬಲ್ ಹಾಗೂ ಎಎಸ್ಐಗಳು ಪಿಯುಸಿ ಮತ್ತು ಪದವಿ ಪಡೆದವರಾಗಿದ್ದು, ಕಾನೂನು ಮತ್ತು ಐಪಿಸಿ ಸೆಕ್ಷನ್ಗಳ ಬಗ್ಗೆ ಜ್ಞಾನ ಹೊಂದಿರುತ್ತಾರೆ. ಜತೆಗೆ ಇಲಾಖೆಯಲ್ಲಿ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದರಿಂದ ಪ್ರಕರಣಗಳ ತನಿಖಾ ಹಂತಗಳ ಬಗ್ಗೆಯೂ ತಿಳಿದುಕೊಂಡಿರುತ್ತಾರೆ. ಹೀಗಾಗಿ ಇವರ ಜ್ಞಾನ ಬಳಸಿಕೊಳ್ಳುವ ಉದ್ದೇಶದಿಂದ ಈಗಾಗಲೇ ಎಎಸ್ಐಗಳಿಗೂ ಸಣ್ಣ-ಪುಟ್ಟ (ಕೈಯಿಂದ ಹಲ್ಲೆ, ಗಲಾಟೆ, ಕಳ್ಳತನ) ಪ್ರಕರಣಗಳ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಅವರ ಕೈಗೆ ಶಸ್ತ್ರ ಒದಗಿಸಲು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.
ಉದ್ದೇಶ ಏನು?: ಕಾನ್ಸ್ಟೆಬಲ್ ಹುದ್ದೆಯಿಂದ ಬಡ್ತಿ ಪಡೆದು ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದವರು ಇಲಾಖೆಯಲ್ಲಿ ಸುಮಾರು 15-20 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಜತೆಗೆ ಕಾನ್ಸ್ಟೆಬಲ್ ಹಂತದಲ್ಲೇ “302 ರೈಫಲ್’ ತರಬೇತಿ ಪಡೆದು ಬಂದಿರುತ್ತಾರೆ. ಹೀಗಾಗಿ ಎಎಸ್ಐಗಳಿಗೆ ಪಿಸ್ತೂಲ್ ಅಥವಾ ರಿವಲ್ವಾರ್ ಬಳಕೆ ಕುರಿತು ತರಬೇತಿ ನೀಡಿದರೆ ಅದರ ಬಳಕೆ ಇನ್ನಷ್ಟು ಸುಲಭವಾಗುತ್ತದೆ.
ಈಗಾಗಲೇ ಸಣ್ಣ -ಪುಟ್ಟ ಪ್ರಕರಣಗಳ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರ ಹೊಂದಿರುವ ಎಎಸ್ಐಗಳು ತನಿಖಾಧಿಕಾರಿಗಳಾಗಿ ಬೇರೆ ಬೇರೆ ಕಡೆ ಹೋಗುತ್ತಿದ್ದಾರೆ. ಇಂತಹ ವೇಳೆ ಪೆಟ್ರೋಲಿಂಗ್ ಮಾಡಲು ಬಂದೂಕು ಕೊಂಡೊಯ್ಯುವುದು ಕಷ್ಟ. ಹೀಗಾಗಿ ಲಘು ತೂಕದ ಪಿಸ್ತೂಲ್ ಕೊಟ್ಟರೆ ಕಾನೂನು ಸುವ್ಯವಸ್ಥೆ ಜತೆಗೆ ಆತ್ಮರಕ್ಷಣೆಗೂ ಅನುಕೂಲವಾಗುತ್ತದೆ. ಪ್ರಮುಖವಾಗಿ ಇತ್ತೀಚೆಗೆ ಬಂಧಿಸಲು ಬರುವ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ, ಮಾರಕಾಸ್ತ್ರಗಳಿಂದ ದಾಳಿ ಮುಂತಾದ ಕೃತ್ಯಗಳನ್ನು ಎಸಗುವುದರಿಂದ ಆತ್ಮರಕ್ಷಣೆಗೂ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನಕೈಗೊಳ್ಳಲಾಗಿದೆ.
45ಕ್ಕೂ ಹೆಚ್ಚು ಮಂದಿಗೆ ರಿವಾಲ್ವರ್ ವಿತರಣೆ: ಈಗಾಗಲೇ ತರಬೇತಿ ಪಡೆದಿರುವ 500ಕ್ಕೂ ಹೆಚ್ಚು ಮಂದಿ ಎಎಸ್ಐಗಳ ಪೈಕಿ 45ಕ್ಕೂ ಹೆಚ್ಚು ಮಂದಿಗೆ ಪಿಸ್ತೂಲ್ ಅಥವಾ ರಿವಾಲ್ವಾರ್ ವಿತರಣೆ ಮಾಡಲಾಗಿದೆ. ಹಂತ-ಹಂತವಾಗಿ ಇನ್ನುಳಿದ ಎಲ್ಲ ಎಎಸ್ಐಗಳಿಗೆ ಸದ್ಯದಲ್ಲೇ ವಿತರಿಸಲಾಗುವುದು. ತನಿಖೆ ಉದ್ದೇಶದಿಂದ ಬೇರೆ ಕಡೆ ಹೋಗುವಾಗ ಹಾಗೂ ಬೀಟ್ ವೇಳೆ ಕಡ್ಡಾಯವಾಗಿ ಪಿಸ್ತೂಲ್ ಅಥವಾ ರಿವಾಲ್ವಾರ್ ಕೊಂಡೊಯ್ಯುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತ್ಮಸ್ಥೈರ್ಯ ಹೆಚ್ಚಿದೆ: ಎಎಸ್ಐಗಳಿಗೂ ಪಿಸ್ತೂಲ್ ಹಾಗೂ ರಿವಲ್ವಾರ್ ತರಬೇತಿ ಕೊಡುತ್ತಿರುವುದಕ್ಕೆ ತುಂಬ ಖುಷಿಯಾಗಿದೆ. ಇಲಾಖೆಗೆ ಸೇರುವಾಗಲೇ ನಾವು 302 ರೈಫಲ್ ತರಬೇತಿ ಪಡೆದಿರುತ್ತೇವೆ. ಹೀಗಾಗಿ ರಿವಲ್ವಾರ್ ಹಾಗೂ ಪಿಸ್ತೂಲ್ ತರಬೇತಿ ಹೆಚ್ಚು ಕಷ್ಟವಾಗುವುದಿಲ್ಲ. ಈ ಹಿಂದೆ ಪ್ರಕರಣಗಳ ತನಿಖೆಗಾಗಿ ಬೇರೆ ಬೇರೆ ಕಡೆ ಹೋಗುವಾಗ ಆತಂಕ ಇತ್ತು. ಇದೀಗ ರಿವಲ್ವಾರ್ ವಿತರಣೆ ಮಾಡಿರುವುದು ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದು ಹೆಸರೆಳಲಿಚ್ಛಿಸದ ಎಎಸ್ಐ ಒಬ್ಬರು ಹೇಳಿದರು.
500 ಮಂದಿಗೆ ತರಬೇತಿ: ಈಗಾಗಲೇ ನಗರದ ಎಲ್ಲ ಠಾಣೆಗಳಲ್ಲಿರುವ ಸುಮಾರು 500ಕ್ಕೂ ಹೆಚ್ಚು ಮಂದಿ ಎಎಸ್ಐಗಳಿಗೆ ಎರಡು ಹಂತಗಳಲ್ಲಿ ರಿವಾಲ್ವರ್ ಬಳಕೆ ಕುರಿತು ತರಬೇತಿ ನೀಡಲಾಗಿದೆ. ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಪಡೆಯ(ಸಿಎಆರ್) ಸಣ್ಣ ಶಸ್ತ್ರಾಸ್ತ್ರ ವಿಭಾಗದ ಅಧಿಕಾರಿಗಳು ಇಲ್ಲಿರುವ ಒಳಾಂಗಣದಲ್ಲಿ ಪಿಸ್ತೂಲ್ ಮತ್ತು ರಿವಲ್ವಾರ್ಗಳ ಬಳಕೆ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡುತ್ತಿದ್ದಾರೆ. ರಿವಲ್ವಾರ್ಗೆ ಗುಂಡುಗಳನ್ನು ಹೇಗೆ ತುಂಬುವುದು? ಪಿಸ್ತೂಲ್ಗಳಿಗೆ ಮ್ಯಾಗಜಿನ್ಗಳನ್ನು ಹೇಗೆ ಭರ್ತಿ ಮಾಡಬೇಕು. ಜತೆಗೆ ಪಿಸ್ತೂಲ್ನಲ್ಲಿರುವ ಆಟೊ ಫೈರಿಂಗ್ ಹಾಗೂ ಮಾನವ ಚಾಲಿತ ಫೈರಿಂಗ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಈಗಾಗಲೇ ಸಣ್ಣ-ಪುಟ್ಟ ಪ್ರಕರಣಗಳನ್ನು ಎಎಸ್ಐಗಳೇ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಪೆಟ್ರೋಲಿಂಗ್ ಹೋಗುವ ವೇಳೆ ಆತ್ಮರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇವರಿಗೆ ಪಿಸ್ತೂಲ್ ಹಾಗೂ ರಿವಾಲ್ವಾರ್ ತರಬೇತಿ ನೀಡಲಾಗಿದ್ದು, ಶೀಘ್ರದಲ್ಲಿಯೇ ಎಲ್ಲ ಎಎಸ್ಐಗಳಿಗೆ ವಿತರಿಸಲಾಗುವುದು.
-ಟಿ. ಸುನಿಲ್ ಕುಮಾರ್, ನಗರ ಪೊಲೀಸ್ ಆಯುಕ್ತ
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ