ಮತ್ತೆ ಉಕ್ಕಿನ ಸೇತುವೆ ಪ್ರಸ್ತಾಪಕ್ಕೆ ಖಂಡನೆ
Team Udayavani, Jan 3, 2019, 6:17 AM IST
ಬೆಂಗಳೂರು: ಹಿಂದಿನ ಸರ್ಕಾರ ಕೈಬಿಟ್ಟಿದ್ದ ಉಕ್ಕಿನ ಸೇತುವೆ ಯೋಜನೆಯನ್ನು ಮತ್ತೆ ಜಾರಿಗೊಳಿಸಲು ಸಮ್ಮಿಶ್ರ ಸರ್ಕಾರ ಮುಂದಾಗಿರುವುದು ಖಂಡನೀಯ. ಹಿಂದೆ ನಡೆದಿರುವ “ಕಮಿಟ್ಮೆಂಟ್’ಗಾಗಿ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿರುವಂತಿದ್ದು, ಈ ಯೋಜನೆ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಹೇಳಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ಉಕ್ಕಿನ ಸೇತುವೆ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ ಯೋಜನೆ ಕೈಬಿಟ್ಟಿತ್ತು. ಇದೀಗ ಸಮ್ಮಿಶ್ರ ಸರ್ಕಾರ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದೆ. ಹಾಗಾಗಿ ಪರಿಸರವಾದಿಗಳು, ನಗರ ತಜ್ಞರು ಇತರರ ಸಹಯೋಗದಲ್ಲಿ ಯೋಜನೆ ಜಾರಿಯಾಗದಂತೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಉಕ್ಕಿನ ಸೇತುವೆ ಯೋಜನೆ ಪರಿಸರಕ್ಕೆ ಮಾರಕವಾಗಿದ್ದು, ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಆ ಭಾಗದಲ್ಲಿ ದಟ್ಟಣೆ ತೀವ್ರವಾಗಿದ್ದು, ಪರಿಹಾರ ಕಂಡು ಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ ದೂರದರ್ಶಿತ್ವದ ಯೋಜನೆಯ ಅಗತ್ಯವಿದೆ. ಈ ಹಿಂದೆಯೇ ಬಿಬಿಎಂಪಿ ಹಾಗೂ ಬಿಡಿಎ ಸಹಯೋಗದಲ್ಲಿ ಬಸವೇಶ್ವರ ವೃತ್ತದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಂದು ಬದಿ ವಾಹನ ಸಂಚಾರ ಮಾರ್ಗ ಹಾಗೂ ಇನ್ನೊಂದು ಬದಿಯಲ್ಲಿ ರೈಲು ಸಂಪರ್ಕ ಮಾರ್ಗ ನಿರ್ಮಿಸುವ ಯೋಜನೆಯ ನೀಲನಕ್ಷೆ ರೂಪಿಸಲಾಗಿದ್ದು, ಅದನ್ನು ಜಾರಿಗೊಳಿಸಬೇಕು. ಸೂಕ್ತ ಪರಿಸರಸ್ನೇಹಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಉಕ್ಕಿನ ಸೇತುವೆ, ವೈಟ್ ಟಾಪಿಂಗ್ನಂತಹ ಯೋಜನೆಗಳ ಬಗ್ಗೆಯೇ ವ್ಯಾಮೋಹವಿದ್ದು, ತನಗೆ ಅನುಕೂಲವಾಗುವ ಕಾಮಗಾರಿಗಳನ್ನಷ್ಟೇ ಕೈಗೊಳ್ಳುತ್ತಿದೆ. ಅಗತ್ಯವಿಲ್ಲದ ಕಡೆಯೆಲ್ಲಾ ಮೇಲುಸೇತುವೆ ನಿರ್ಮಿಸುತ್ತಿದ್ದು, ಮುಂದೆ ಅವುಗಳನ್ನು ತೆರವುಗೊಳಿಸಬೇಕಾದ ಸ್ಥಿತಿ ಎದುರಾಗುವ ಆತಂಕವಿದೆ ಎಂದು ಹೇಳಿದರು.
ನಗರದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಸಂಪೂರ್ಣ ವಿಫಲವಾಗಿದೆ. ಕ್ಯಾಂಟೀನ್ನಲ್ಲಿ ಬೆರಳೆಣಿಕೆ ಮಂದಿಯಷ್ಟೇ ಆಹಾರ ಸೇವಿಸುತ್ತಿದ್ದಾರೆ. ಹಾಗಾಗಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಆರಂಭಿಕ ಖರ್ಚು, ನಂತರದ ವೆಚ್ಚ, ಪಾವತಿ ಮೊತ್ತ, ಆಹಾರ ಸೇವಿಸಿದವರ ಸಂಖ್ಯೆ ಇತರೆ ವಿವರಗಳಿಗೆ
ಸಂಬಂಧಪಟ್ಟಂತೆ ತನಿಖೆ ನಡೆಯಬೇಕಿದೆ. ಸರ್ಕಾರ ಸಮರ್ಪಕವಾಗಿ ನಡೆಸುವುದಾದರೆ ಕ್ಯಾಂಟೀನ್ ಮುಂದುವರಿಸಲಿ ಇಲ್ಲದಿದ್ದರೆ ಮುಚ್ಚಿಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಅಭಿವೃದ್ಧಿ, ರಸ್ತೆಗಳ ವಿಸ್ತರಣೆ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಗಮನ ನೀಡುತ್ತಿಲ್ಲ. ಸರ್ಕಾರಕ್ಕೆ ಬೆಂಗಳೂರಿನಿಂದ ಬರುವ ಆದಾಯ ಬೇಕು. ಆದರೆ ನಗರದ ಅಭಿವೃದ್ಧಿ ಬೇಡ. ನೆರೆಹೊರೆ ರಾಜ್ಯಗಳು ಕೈಗಾರಿಕೋದ್ಯಮಿಗಳು, ಹೂಡಿಕೆದಾರರನ್ನು ಸೆಳೆಯುತ್ತಿದ್ದರೆ, ಕರ್ನಾಟಕ ಸರ್ಕಾರ ಉದ್ಯಮಿಗಳು ದೂರ ಹೋಗುವಂತೆ ಮಾಡುತ್ತಿದೆ. ಇದರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಕೆಟ್ಟದಾಗಿ ಮಾತನಾಡುತ್ತಿರುವುದು ಸರಿಯಲ್ಲ. ತಮ್ಮ ಪ್ರಚಾರಕ್ಕಾಗಿ ಅನಗತ್ಯವಾಗಿ ಅವಹೇಳನ ಮಾತನಾಡುತ್ತಿದ್ದಾರೆ. ನಮ್ಮ ಬಳಿಯೂ ಮಾತನಾಡಲು ಅಸ್ತ್ರಗಳಿವೆ ಎಂದು ಕಿಡಿ ಕಾರಿದರು.
ಸಚಿವ ಡಿಕೆಶಿಗೆ ಆಸಕ್ತಿ,ಅಚ್ಚರಿಯ ವಿಷಯವಲ್ಲ
ಬೆಂಗಳೂರು: ಕೆ.ಜೆ.ಜಾರ್ಜ್ ಅವರ ಉತ್ತರಾಧಿಕಾರಿಯಂತಿರುವ ಸಚಿವ ಡಿ.ಕೆ. ಶಿವಕುಮಾರ್ ಅವರು ಉಕ್ಕಿನ ಸೇತುವೆ ನಿರ್ಮಾಣದ ಬಗ್ಗೆ ಆಸಕ್ತಿ ತೋರಿರುವುದು ಅಚ್ಚರಿಯ ವಿಷಯವೇನಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಲೇವಡಿ ಮಾಡಿದ್ದಾರೆ.
ಹೆಬ್ಟಾಳ ಉಕ್ಕಿನ ಸೇತುವೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಉಕ್ಕಿನ ಸೇತುವೆಯಂತಹ ಯೋಜನೆಗಳುನಿಗೂಢ ರೀತಿಯಲ್ಲಿ ಮರುಜೀವ ಪಡೆದು ಕೊಳ್ಳುತ್ತವೆ. ಸಮ್ಮಿಶ್ರ ಸರ್ಕಾರದಲ್ಲಿಯೂ ಸಹ ಬಿಲ್ಡರ್-ಕಂಟ್ರಾಕ್ಟರ್ಗಳ ಮೂಲಕ ನಗರ ಶೋಷಣೆ, ಸಾರ್ವಜನಿಕರ ಹಣದ ದುರ್ಬಳಕೆ, ಭ್ರಷ್ಟಾಚಾರ ಮುಂದುವರಿದಿದೆ ಎಂದು ದೂರಿದ್ದಾರೆ. ಈ ದುಬಾರಿ ಯೋಜನೆ ಜಾರಿಗೆ ತರಲು ಡಿಸಿಎಂ ಜಿ.ಪರಮೇಶ್ವರ್ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಸಾರ್ವಜನಿಕರ ದಿಕ್ಕು ತಪ್ಪಿಸಲು ಯಾವುದೇ ಪ್ರಯತ್ನ ನಡೆಸಿದರೂ ಎಂಪಿಸಿ ನೇತೃತ್ವದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ರೂಪಿಸಿದ ಸಮಗ್ರ ಯೋಜನೆಯ ಹೊರತಾದ ಯಾವುದೇ ಯೋಜನೆಯನ್ನು ಜಾರಿಗೆ ತರಲು ಅವಕಾಶ
ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಸ್ಟೀಲ್ ಬ್ರಿಡ್ಜ್ ಚರ್ಚೆ
ಬೆಂಗಳೂರು: ಚಾಲುಕ್ಯ ವೃತ್ತದಿಂದ ಹೆಬ್ಟಾಳದವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಮುಂದಿನ 10 ವರ್ಷಗಳಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬುಧವಾರ ವಿಧಾನಸೌಧದಲ್ಲಿ ಸಭೆ ನಡೆಸಿದರು.
ಬಿಡಿಎ, ನಗರಾಭಿವೃದ್ಧಿ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ ಯೋಜನೆ ಕುರಿತು ವ್ಯಾಪಕ ಚರ್ಚೆ ನಡೆಯಿತು ಎಂದು ಹೇಳಲಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ಧಪಡಿಸಿದ್ದ 2031 ಸಿಡಿಪಿ ಬಿಡುಗಡೆ ಕುರಿತು ಚರ್ಚೆ ನಡೆದು, ಕರಡು ಕುರಿತು 31618 ಆಕ್ಷೇಪಣೆಗಳು ಬಂದಿದ್ದು, ಇನ್ನೂ ಆಕ್ಷೇಪಣೆ ಸಲ್ಲಿಕೆಗಾಗಿ ಅವಕಾಶ ನೀಡುವಂತೆ ನಾಗರಿಕ ಕ್ಷೇಮಾಭಿವೃದ್ಧಿ ಸಂಘಟನೆಗಳು ನ್ಯಾಯಾಲಯ ಮೊರೆ ಹೋಗಿದ್ದವು. ಇದೀಗ ಮತ್ತಷ್ಟು ಕಾಲಾವಕಾಶ ಸಹ ನೀಡಲಾಗಿದೆ. ಎಲ್ಲ ಆಕ್ಷೇಪಣೆಗಳು ಬಂದ ನಂತರ ಚರ್ಚಿಸಿ ಆದಷ್ಟು ಬೇಗ ಸಿಡಿಪಿ-2031 ಬಿಡುಗಡೆಗೊಳಿಸಲು ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.
2031ರ ವೇಳೆಗೆ ನಗರದ ಜನಸಂಖ್ಯೆ ಎರಡು ಕೋಟಿ ದಾಟುವ ನಿರೀಕ್ಷೆಯಿದ್ದು, ಸಂಚಾರ ದಟ್ಟಣೆ ನಿವಾರಣೆ, ಅಗತ್ಯ ಇರುವ ಕಡೆ ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ, ಫೆರಿಫೆರಲ್ ರಿಂಗ್ ರಸ್ತೆ, ಎಲಿವೇಟೆಡ್ ಕಾರಿಡಾರ್ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಡಿಪಿ-2031 ಅಂಗೀಕಾರ ಹಾಗೂ ಬಿಡುಗಡೆಗೆ ಜನಪ್ರತಿನಿಧಿಗಳಿಂದಲೂ ತೀವ್ರ ಒತ್ತಡ ಬರುತ್ತಿರುವುದರಿಂದ ಸಭೆ ನಿಗದಿಪಡಿಸಲಾಗಿತ್ತು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ