ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಒತ್ತಾಯಿಸಿ ಜಾಥಾ
Team Udayavani, Jan 11, 2019, 6:40 AM IST
ಬೆಂಗಳೂರು: ಪರಿಶಿಷ್ಠ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಾಲ್ಮೀಕಿ ನಾಯಕ ಸ್ವಾಭಿಮಾನಿ ಚಳವಳಿ ಕಾರ್ಯಕರ್ತರು ಗುರುವಾರ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಸರ್ಕಾರದ ಜನಪರ ಯೋಜನೆಗಳನ್ನು ಸಕಾಲಕ್ಕೆ ತಲುಪಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ. ಪರಿಶಿಷ್ಠ ಪಂಗಡ ಮತ್ತು ಪರಿಶಿಷ್ಠ ಜಾತಿಗೆ ಸಂಬಂಧಿಸಿದ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ಹೊರತು ಪಡಿಸಿ ಬೇರೆ ಇಲಾಖೆಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ.
ಹೀಗಾಗಿ ಪ್ರತ್ಯೇಕ ಸಚಿವಾಲಯ ತೆರೆದು, ಸಮುದಾಯದ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಗಿರಿಜನ ವಿಶೇಷ ಉಪ ಯೋಜನೆಯಡಿ ಭೂರಹಿತ ಕೃಷಿ ಕಾರ್ಮಿಕರಿಗೆ ತಲಾ ಎರಡು ಎಕರೆ ಜಮೀನು ನೀಡಬೇಕು.
ಸರ್ಕಾರದಿಂದ ಮೂಲ ಸೌಕರ್ಯ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದವರನ್ನು ಬೋಧನಾ ಸಿಬ್ಬಂದಿಯನ್ನಾಗಿ ನೇಮಿಸಿಕೊಳ್ಳಲು ಸರ್ಕಾರ ಸೂಚಿಸಬೇಕು. ಅಲ್ಲದೆ, ತಾಂತ್ರಿಕ ಇಲಾಖೆಯಲ್ಲಿ 2015ರಿಂದಲೂ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ನೀಡಿರುವ ಲ್ಯಾಪ್ಟಾಪ್ಗ್ಳ ಗುಣ ಮತ್ತು ಮೌಲ್ಯದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.