ಪ್ರಭಾಕರ್ ರೆಡ್ಡಿ ವಿರುದ್ಧ ಮತ್ತಷ್ಟು ದೂರು
Team Udayavani, Feb 23, 2019, 6:23 AM IST
ಬೆಂಗಳೂರು: ಭೂ ಕಬಳಿಕೆ ಹಾಗೂ ವಂಚನೆ ಆರೋಪ ಕೇಸ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಎಚ್. ಪ್ರಭಾಕರ್ ರೆಡ್ಡಿಯಿಂದ ವಂಚನೆಗೊಳಗಾಗಿದ್ದ ಹಲವು ಮಂದಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರಿಗೆ ಸಾಲು ಸಾಲು ದೂರು ಸಲ್ಲಿಸುತ್ತಿದ್ದಾರೆ.
ಸಿಸಿಬಿ ಪೊಲೀಸರು ಪ್ರಭಾಕರ್ ರೆಡ್ಡಿ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿ ಬಂಧಿಸಿದ ಮಾಹಿತಿ ಬಹಿರಂಗಗೊಳ್ಳುತ್ತಲೇ ಹಲವು ಮಂದಿ ದೂರು ನೀಡಲು ಮುಂದಾಗುತ್ತಿದ್ದಾರೆ. ಇದುವರೆಗೂ 25 ದೂರುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ದಾಖಲೆಗಳನ್ನು ತೋರಿಸಿ ಅಮಾಯಕರ ಭೂಮಿ ಕಬಳಿಸುವುದು, ಜಮೀನು ಕೊಡಿಸುವುದಾಗಿ ಹಣ ಪಡೆದು ಪ್ರಭಾಕರ್ ರೆಡ್ಡಿ ವಂಚನೆ ಮಾಡುತ್ತಿದ್ದ. ವಂಚನೆಗೊಳಗಾದವರು ಹಣ ವಾಪಾಸ್ ಕೇಳಿದರೆ ಬೆದರಿಕೆ ಹಾಕುತ್ತಿದ್ದ. ಹೀಗಾಗಿ, ದೂರು ನೀಡಲು ಹಿಂಜರಿಯುತ್ತಿದ್ದರು. ಆತನಿಂದ ವಂಚನೆಗೊಳಗಾದವರು ಸಿಸಿಬಿ ಕಚೇರಿಯಲ್ಲಿ ದೂರು ನೀಡಬಹುದು ಎಂದು ತಿಳಿಸಿದ್ದಾರೆ.
ಆರೋಪಿ ಪ್ರಭಾಕರ್ ರೆಡ್ಡಿ ನೂರಾರು ಮಂದಿಗೆ ವಂಚಿಸಿರುವ ಸಾಧ್ಯತೆಯಿದೆ. ದಾಳಿ ವೇಳೆ ಆತನ ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಕಾಲ ನ್ಯಾಯಾಲಯದ ಅನುಮತಿ ಮೇರೆಗೆ ಕಸ್ಟಡಿಗೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.