“ನೈರ್ಮಲ್ಯ ಕಾಪಾಡಲು ಪಿಡಿಒಗಳಿಗೆ ನೋಟಿಸ್’
Team Udayavani, Sep 21, 2017, 11:25 AM IST
ದೇವನಹಳ್ಳಿ: ತಾಲೂಕಿನಲ್ಲಿ ಚಿಕೂನ್ ಗೂನ್ಯ ಮತ್ತು ಡೆಂಘಿ ಜ್ವರ ಹೆಚ್ಚು ಆವರಿಸುತ್ತಿದ್ದು, ಈಗಾಗಲೇ ನೈರ್ಮಲ್ಯ ಕಾಪಾಡಲು ಗ್ರಾಪಂಗಳ ಪಿಡಿಒಗಳಿಗೆ ನೋಟಿಸ್ ನೀಡಲಾಗಿದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ಪಟ್ಟಣದ ಬಿಬಿ ರಸ್ತೆ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ನ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಳೆ ಹೆಚ್ಚು ಬಂದಿರುವುದರಿಂದ ಸಾಂಕ್ರಾಮಿಕ ರೋಗಗಳು ಬರುತ್ತವೆ. ತಹಶೀಲ್ದಾರ್ ಮೂಲಕ ಆರ್ಐ ಮತ್ತು ಗ್ರಾಮಲೆಕ್ಕಾಧಿಕಾರಿಗಳಿಗೆ 24 ಪಂಚಾಯಿತಿಗಳ ಪಿಡಿಒಗಳಿಗೆ ತಾಪಂ ಇಒ ಮೂಲಕ ನೋಟಿಸ್ ನೀಡಲಾಗಿದೆ. ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಬೇಕು
ಎಂದು ಹೇಳಿದರು.
ಸಹಕಾರ ಸಂಘಗಳಿಂದ ಸೌಲಭ್ಯ : ರೈತರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಪಿಕಾರ್ಡ್ ಬ್ಯಾಂಕ್ ಹೊಂದಿದೆ. ಗ್ರಾಮೀಣ ಪ್ರದೇಶದ ರೈತರು ಇಂದಿಗೂ ರೇಷ್ಮೆ ಮತ್ತು ಹೈನುಗಾರಿಕೆ ಉದ್ಯಮದಿಂದಲೇ ಬದುಕು ನಡೆಸುತ್ತಿದ್ದು, ಇವರ ಜೀವನಾಡಿಯಾಗಿದೆ.
ಆದ್ದರಿಂದ ಆರ್ಥಿಕ ಬೆಳವಣಿಗೆಗೆ ರೇಷ್ಮೆ ಮತ್ತು ಹೈನುಗಾರಿಕೆ ರೈತರಿಗೆ ಎರಡು ಕಣ್ಣುಗಳಿದ್ದಂತೆ. ಗ್ರಾಮೀಣ ಪ್ರದೇಶದಲ್ಲಿ ರೈತರು ವಿಎಸ್ಎಸ್ಎನ್, ಎಂಪಿಸಿಎಸ್ ಸಹಕಾರ ಸಂಘಗಳಿಂದ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಹೇಳಿದರು.
73 ರಷ್ಟು ಸಾಲ ವಸೂಲಾತಿ: ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದಿಂದ 8,600 ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಲಾಗಿದೆ. ತಾಲೂಕಿಗೆ ಸುಮಾರು 21 ಕೋಟಿ ರೂ. ಅನುಕೂಲವಾಗಿದೆ. 1980ರಲ್ಲಿ ಅನಿರೀಕ್ಷಿತವಾಗಿ ತಾವು ನಿರ್ದೇಶಕನಾಗಿ ಆಯ್ಕೆಯಾದೆ. ಅಲ್ಲಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವಕಾಶ ಒದಗಿಬಂತು. ಈಗ ಪಂಚಾಯತ್ರಾಜ್ ಸಮಿತಿ ಕಾರ್ಯಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪಂಚಾಯತ್ರಾಜ್ ವ್ಯವಸ್ಥೆ ಬಗ್ಗೆ ಹಲವಾರು ತಿದ್ದುಪಡಿಗಳು ಆಗಿವೆ. ಸಂಘವು ಸಾಲ ವಸೂಲಾತಿಯಲ್ಲಿ ಶೇ. 73ರಷ್ಟು ಇದೆ ಎಂದರು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ರೈತರು ತಮ್ಮ ಜಮೀನುಗಳನ್ನು ಮಾರಿಕೊಳ್ಳಬೇಡಿ. ಜಮೀನನ್ನು ಮಾರಿದರೆ ಮತ್ತೆ ಸಂಪಾದಿಸಲು ಆಗುವುದಿಲ್ಲ. ಬೆಂಗಳೂರಿಗೆ ಹೋದವರು ಮತ್ತೆ ಹಳ್ಳಿಗಾಡಿನ ಕಡೆ ಬರುವಷ್ಟರಲ್ಲಿ ಹತ್ತು ಎಕರೆ ಇದ್ದವನು ಒಂದು ಎಕರೆಗೆ ಬರುವಂತೆ ಆಗುತ್ತದೆ. ರೈತರು ಅವಶ್ಯಕತೆಗೆ ತಕ್ಕಂತೆ ಮಾರಾಟ ಮಾಡಿ. ಕೇಂದ್ರ ಬ್ಯಾಂಕ್ನಿಂದ ಹೆಚ್ಚಿನ ಸಾಲವನ್ನು ಪಿಕಾರ್ಡ್ ಬ್ಯಾಂಕ್ಗೆ ಒದಗಿಸಿಕೊಡಬೇಕು. ಸಂಘಗಳಲ್ಲಿ ಸಾಧನೆ ಶಾಶ್ವತವಾಗಿ ಉಳಿಯಬೇಕು ಎಂದು ಸಲಹೆ ನೀಡಿದರು.
ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಆರ್.ಎನ್.ಕೃಷ್ಣಮೂರ್ತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಶ್ರೀನಿವಾಸ್, ಕೇಂದ್ರ ಬ್ಯಾಂಕ್ನ ಜಿಲ್ಲಾ ವ್ಯವಸ್ಥಾಪಕ ಬೈರೇಗೌಡ ಮಾತನಾಡಿದರು. 424.42 ಲಕ್ಷ ರೂ.
ಸಾಲ ವಿತರಣೆ: ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಆರ್.ಮುನೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್ 81 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು ತಾಲೂಕು ರೈತ ಬಾಂಧವರಿಗೆ ತನ್ನದೇ ಆದ ಆರ್ಥಿಕ ನೆರವು ಕೊಡುವುದರ
ಮೂಲಕ ಹಸಿರು ಕ್ರಾಂತಿಗೆ ಅಮೋಘವಾದ ಕೊಡುಗೆ ನೀಡಿದೆ. 2016ರಿಂದ 2017ರ ಸಾಲಿನಲ್ಲಿ 424.42 ಲಕ್ಷ ರೂ. ಸಾಲ ನೀಡಿದ್ದು, ಒಟ್ಟಾರೆ 31.3.2017ರ ಅಂತ್ಯಕ್ಕೆ ಸದಸ್ಯರಿಂದ 13.55 ಕೋಟಿ ಹೊರ ಬಾಕಿ ಬರಬೇಕಾಗಿರುತ್ತದೆ. ಬ್ಯಾಂಕ್ನಲ್ಲಿ 4783 “ಎ’ ವರ್ಗದ ಸದಸ್ಯರಿದ್ದು, 106.78 ಲಕ್ಷ ರೂ. ಷೇರು ಬಂಡವಾಳವಿದ್ದು, “ಬಿ’ ವರ್ಗದ ಷೇರು ಬಂಡವಾಳ 27ಲಕ್ಷ ಮತ್ತು ಸಿ ವರ್ಗದ ಷೇರು 2ಲಕ್ಷ ರೂ. ಸೇರಿ ಒಟ್ಟು ಬಂಡವಾಳ 109.5 ಲಕ್ಷ ರೂ.ಗಳಿರುತ್ತದೆ. ರಾಜ್ಯ ಸರ್ಕಾರದಿಂದ ಇನ್ನೂ 92.8ಲಕ್ಷ ರೂ. ಬಡ್ಡಿ ರಿಯಾಯಿತಿ ಬರಬೇಕಾಗಿದ್ದು, ಪೂರ್ಣ ಹಣ ಬಿಡುಗಡೆಯಾದರೆ ಬ್ಯಾಂಕ್ಗೆ ಪಾವತಿಸಬೇಕಾದ ಸುಸ್ತಿ ಕಂತಿಗೆ ಜಮಾ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಬ್ಯಾಂಕ್ನ ಉಪಾಧ್ಯಕ್ಷ ಶೈಲಜಾ, ನಿರ್ದೇಶಕರಾದ ಕೆ.ಸಿ.ವೆಂಕಟೇಗೌಡ, ಶ್ರೀರಾಮಯ್ಯ, ಸಂಪಂಗಪ್ಪ, ಸಿ. ಮುನಿರಾಜು, ಎಂ. ಬಸವರಾಜು, ಅಶ್ವಥ್ ನಾರಾಯಣ ಶೆಟ್ಟಿ, ಹನುಮಪ್ಪ, ಅನ್ನ ಪೂರ್ಣಮ್ಮ, ಎಚ್.ಎಂ.ಮುನಿನಾರಾಯಣಪ್ಪ, ವಿಶ್ವನಾಥ್, ತಾಪಂ ಸದಸ್ಯರಾದ ಸಾದಹಳ್ಳಿ ಮಹೇಶ್, ಭೀಮರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್. ಸೊಣ್ಣಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜ್, ತಾಲೂಕು ಸೊಸೈಟಿ ಅಧ್ಯಕ್ಷ ಎನ್.ಶ್ರೀನಿವಾಸಮೂರ್ತಿ, ಉಪಾಧ್ಯಕ್ಷೆ ಭಾರತಿ, ಬ್ಯಾಂಕ್ನ ಪ್ರಭಾರ ವ್ಯವಸ್ಥಾಪಕ ಬಿ.ಡಿ.ನಾಗರಾಜ್, ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಎಪಿಎಂಸಿ ನಿರ್ದೇಶಕ ಕೆ.ವಿ.ಮಂಜುನಾಥ್, ವಿಜಯಪುರ ಹೋಬಳಿ ಜೆಡಿಎಸ್ ಅಧ್ಯಕ್ಷ ವೀರಪ್ಪ, ಕುಂದಾಣ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ಕಸಬಾ ಹೋಬಳಿ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಮುನಿರಾಜು ಮತ್ತಿತರರಿದ್ದರು.