ಮತ್ತೂಮ್ಮೆ ಕಾಂಗ್ರೆಸ್ ಅಧಿಕಾರಕ್ಕೆಬರಲಿದೆ: ಸಿಎಂ ಸಿದ್ದರಾಮಯ್ಯ
Team Udayavani, Nov 27, 2017, 1:41 PM IST
ಹೊಸಕೋಟೆ: ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್ ಅಧಿಕಾರ ಗಳಿಸುವುದು ಶತಃ ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ
ದೃಢವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ
ಸಾಧನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹತಾಶೆ: ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಸಾಧನೆ ಮಾಡದೇ ಮತ್ತೂಮ್ಮೆ ಅಧಿಕಾರ ಪಡೆಯುವ ಹಗಲುಗನಸನ್ನು ಬಿಜೆಪಿ, ಜೆಡಿಎಸ್ ಕಾಣುತ್ತಿದೆ. ಹಿಂದೆ ಮಿಷನ್ 150 ಎಂಬ ಗುರಿ ಹೊಂದಿದ್ದ ಬಿಜೆಪಿ ಗುಂಡ್ಲುಪೇಟೆ,
ಚಾಮರಾಜನಗರ ಉಪಚುನಾವಣೆ ನಂತರ 50ಕ್ಕೆ ಇಳಿದಿದ್ದು, ಹತಾಶೆ ಎದ್ದುಕಾಣುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ 8165 ಕೋಟಿ ರೂ.ಗಳಷ್ಟು ಸಾಲ ಮನ್ನಾ ಮಾಡಿದ್ದು, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ
ಸಾಲವನ್ನು ಮನ್ನಾ ಮಾಡದೇ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಪರಿಶಿಷ್ಟ ಜಾತಿ/ಪಂಗಡದವರಿಗೂ ಸರ್ಕಾರದ ಕಾಮಗಾರಿಗಳಲ್ಲಿ ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡಿದ್ದು, 9.5 ಲಕ್ಷ ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡುವ ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದರು.
ಪ್ರಧಾನಿ ದುರ್ಬಲತೆ: ಸಂಸದ ಎಂ. ವೀರಪ್ಪ ಮೊಯ್ಲಿ ಮಾತನಾಡಿ, ತಾಲೂಕಿನ ಕಂಬಳೀಪುರದಲ್ಲಿ 1,300
ಕೋಟಿ ರೂ.ಗಳ ವೆಚ್ಚದಲ್ಲಿ ರಾಜೀವ್ ಗಾಂಧಿ ಪೆಟ್ರೋಲಿಯಂ ವಿಶ್ವವಿ ದ್ಯಾಲಯ ಪ್ರಾರಂಭಗೊಳ್ಳಲಿದ್ದು ಸ್ಥಳೀಯರಿಗೆ ಉದ್ಯೋಗಾವಕಾಶ ಲಭ್ಯ ವಾಗಲಿದೆ. ಕೇಂದ್ರ ಸರ್ಕಾರಕ್ಕೆ ಪಾಕಿ ಸ್ತಾನದ ಅತಿಕ್ರಮಣ ತಡೆಗಟ್ಟುವ ಯಾವುದೇ ಶಕ್ತಿ ಇಲ್ಲವಾಗಿರುವದೇ ಅಲ್ಲದೇ ಉಗ್ರವಾದಿ ಹಫೀಜ್ ಬಿಡುಗಡೆ ಪ್ರಧಾನಿ ಮೋದಿ ದುರ್ಬಲತೆ ಎತ್ತಿ ತೋರಿಸುತ್ತದೆ ಎಂದು
ಆರೋಪಿಸಿದರು.
30 ಕೆರೆಗಳಿಗೆ ನೀರು: ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಸರ್ಕಾರದ ಜನಪರ ಯೋಜನೆಗಳ ಪರಿಣಾಮವಾಗಿ ರಾಜ್ಯ ಗಣನೀಯ ಪ್ರಗತಿ ಸಾಧಿಸಿದೆ. ಎತ್ತಿನಹೊಳೆ ಯೋಜನೆಗಾಗಿ 13,500 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ಇದುವರೆಗೆ 4,500 ಕೋಟಿ ರೂ.ಗಳಷ್ಟು ಪ್ರಗತಿ ಸಾಧಿಸಿ 2 ವರ್ಷಗಳಲ್ಲಿ ಪೂರ್ಣ ಗೊಳ್ಳಲಿದೆ. 1,400 ಕೋಟಿ ರೂ.ಗಳ ವೆಚ್ಚದ ಕೆಸಿ ವ್ಯಾಲಿ ಯೋಜನೆಯಿಂದ ತಾಲೂಕಿನ ನಂದಗುಡಿ, ಕಸಬಾ ಹೋಬಳಿಯ 30 ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ.
ಇನ್ನೇರಡು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಅನುಗೊಂಡನಹಳ್ಳಿ, ಜಡಿಗೇನಹಳ್ಳಿ ಹೋಬಳಿಯ 30 ಕೆರೆಗಳಿಗೆ ಸಮ್ಮೇತನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲಾಗುವುದು. ಸೂಲಿಬೆಲೆ ಹೋಬಳಿಯ ಕೆರೆಗಳಿಗೆ ಬಾಗಲೂರು ಕೆರೆ ನೀರನ್ನು ಸಂಪರ್ಕಿಸಲು ಉದ್ದೇಶಿಸಲಾಗಿದೆ. ರೈತರಿಗೆ ಬಡ್ಡಿರಹಿತ ಸಾಲ, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದ್ದು, ತಾಲೂಕಿನಲ್ಲಿ ಇದುವರೆಗೂ 500 ಕೋಟಿ ರೂ.ಗಳಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಸರ್ಕಾರ ನೀಡಿದ್ದ 165ರಲ್ಲಿ 155 ಭರವಸೆಗಳನ್ನು ಈಡೇರಿಸಿ
ಮಾದರಿಯಾಗಿರುವ ಹೆಗ್ಗಳಿಕೆ ಹೊಂದಿದೆ ಎಂದರು.
ನಗರೋತ್ಥಾನ ಯೋಜನೆಯಡಿ ಹಣ ನೀಡಿ: ತಾಲೂಕಿನಲ್ಲಿ ಬಹುತೇಕ ಎಲ್ಲಾ ಪರಿಶಿಷ್ಟ ಜಾರಿ ಕಾಲೋನಿಗಳಿಗೆ ರಸ್ತೆ
ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಸಮ್ಮೇತನಹಳ್ಳಿ ಏತ ನೀರಾವರಿ ಯೋಜನೆಯಿಂದ ಜಡಿಗೇನಹಳ್ಳಿ,
ಕಸಬಾ ಹೋಬಳಿ 29 ಕೆರೆಗಳಿಗೆ ನೀರು ಹರಿಸಲು ಅಗತ್ಯ ಅನುದಾನ ನೀಡಬೇಕು. ಪಟ್ಟಣಕ್ಕೆ ಕಾವೇರಿ ನೀರು
ಸರಬರಾಜು ಯೋಜನೆಗೆ ಮಂಜೂರಾತಿ, ರಸ್ತೆಗಳ ಡಾಂಬರೀಕರಣಕ್ಕೆ ಈಗಾಗಲೇ ವಿವಿಧ ಯೋಜನೆಗಳಡಿ 22
ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ನಗರೋತ್ಥಾನ ಯೋಜನೆಯಡಿ ಹೆಚ್ಚುವರಿಯಾಗಿ 10
ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ಎನ್.ನಾಗರಾಜ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಸಾರಿಗೆ ಇಲಾಖೆ ಸಚಿವ ಎಚ್.ಎಂ.ರೇವಣ್ಣ, ಗ್ರಾಮಾಂತರ ಜಿಪಂ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿದರು. ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಎಚ್. ಟಿ.ಸಾಂಗ್ಲಿಯಾನ, ಕಾರ್ಯದರ್ಶಿಗಳಾದ ಕೆ.ನಾಗಲಕ್ಷ್ಮೀ ಚೌಧರಿ, ಕಮ ಲಾಕ್ಷಿ,
ಜಿಲ್ಲಾ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾ ರಿಗಳು, ಜಿಪಂ, ತಾಪಂ ಸದಸ್ಯರು ಉಪಸ್ಥಿತರಿದ್ದರು.
ಬೆಂಗಳೂರು ನಗರದಲ್ಲಿ ಈಗಾಗಲೇ 200 ಇಂದಿರಾ ಕ್ಯಾಂಟೀನ್ಗಳನ್ನು ಪ್ರಾರಂಭಿಸಲಾಗಿದ್ದು, ಜ.1ರಿಂದ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲೂ ಸ್ಥಾಪಿಸಲಾಗುವುದು.
ಸಿದ್ದರಾಮಯ್ಯ , ಮುಖ್ಯಮಂತ್ರಿ