ರೌಡಿಶೀಟರ್ ಕಾಲಿಗೆ ಗುಂಡೇಟು
Team Udayavani, Mar 23, 2019, 6:54 AM IST
ನೆಲಮಂಗಲ: ತಾಲೂಕಿನ ವಿವಿಧೆಡೆ ಹಗಲು ದರೋಡೆ ಮಾಡುತ್ತಿದ್ದ ಕುಖ್ಯಾತ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಇಬ್ಬರನ್ನು ಬಂಧಿಸಿದ್ದಾರೆ. ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ (23), ಆತನ ಸಹಚರ ಶ್ರೀನಿವಾಸ್ ಬಂಧಿತರು.
ತಾಲೂಕಿನ ವೀರನಂಜಿಪುರದ ಬಳಿ ಸಿಪಿಐ ಅನಿಲ್ಕುಮಾರ್ ನೇತೃತ್ವದಲ್ಲಿ ದಾಬಸ್ಪೇಟೆ ಪಿಎಸ್ಐ ಶಂಕರ್ನಾಯಕ್ ಹಾಗೂ ನೆಲಮಂಗಲ ಗ್ರಾಮಾಂತರ ಠಾಣೆ ಪಿಎಸ್ಐ ಕುಮಾರಸ್ವಾಮಿ ಮತ್ತು ತಂಡ ರೌಡಿಶೀಟರ್ ಜಯಂತ್ ಬಂಧನಕ್ಕಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಜಯಂತ್, ಪೊಲೀಸರ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ. ಈ ವೇಳೆ ಸಿಪಿಐ ಅನಿಲ್ಕುಮಾರ್ ಮತ್ತು ಪಿಎಸ್ಐ ಶಂಕರ್ನಾಯಕ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ಪಿಎಸ್ಐ ಕುಮಾರಸ್ವಾಮಿ ಅವರ ಎಡಗೈಗೆ ಡ್ರಾಗರ್ನಿಂದ ಹಲ್ಲೆ ಮಾಡಿದ್ದಾನೆ. ಪಿಎಸ್ಐ ಶಂಕರ್ನಾಯಕ್ ಹಾರಿಸಿದ ಗುಂಡು ಜಯಂತ್ನ ಬಲಗಾಲಿಗೆ ತಗುಲಿದೆ. ಕೆಳಗೆ ಬಿದ್ದ ಆತನನ್ನು ಪೊಲೀಸರು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊತ್ತೂಬ್ಬ ಆರೋಪಿ ಶ್ರೀನಿವಾಸ್ನನ್ನು ಬಂಧಿಸಿ, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
26 ಪ್ರಕರಣಗಳ ಆರೋಪಿ: ಬಂಧಿತ ಆರೋಪಿ ಜಯಂತ್ ವಿರುದ್ಧ ದಾಬಸ್ಪೇಟೆ ಠಾಣೆಯಲ್ಲಿ 12, ಗ್ರಾಮಾಂತರ ಠಾಣೆಯಲ್ಲಿ 3 ಸೇರಿ, ಟೌನ್ ಠಾಣೆ, ಮಾದನಾಯಕನಹಳ್ಳಿ, ತ್ಯಾಮಗೊಂಡ್ಲು ಠಾಣೆ, ಕ್ಯಾತ್ಸಂದ್ರ ಠಾಣೆ, ಕೋರಾ ಪೊಲೀಸ್ ಠಾಣೆ, ರಾಜಗೋಪಾಲ ನಗರ, ಕೆಂಗೇರಿ ಹಾಗೂ ಕುದೂರು ಠಾಣೆಗಳಲ್ಲಿ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಬಂಧನ ಭಯದಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೇಲೆ ಇತ್ತೀಚೆಗೆ ಹೆದ್ದಾರಿ ಸುಲಿಗೆ ಪ್ರಕರಣ ದಾಖಲಾಗಿತ್ತು.
ಎಸ್ಪಿ ಭೇಟಿ: ಗುಂಡಿನ ದಾಳಿ ನಡೆದ ಸ್ಥಳಕ್ಕೆ ಹಾಗೂ ರೌಡಿಶೀಟರ್ ಡ್ರಾಗರ್ನಿಂದ ದಾಳಿ ಮಾಡಿರುವ ಪಿಎಸ್ಐ ಕುಮಾರಸ್ವಾಮಿ ದಾಖಲಾಗಿರುವ ಖಾಸಗಿ ಆಸ್ಪತ್ರೆಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ನಿವಾಸ್ ಸಪೇಟ್, ಡಿವೈಎಸ್ಪಿ ಪಾಂಡುರಂಗ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಎಸ್ಪಿ ರಾಮ್ನಿವಾಸ್ ಸಪೇಟ್, 26 ಪ್ರಕರಣದಲ್ಲಿ ತಲೆಮರೆಸಿಕೊಂಡು, ಹೆದ್ದಾರಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ದಾಳಿ ಮಾಡಿದ್ದಾನೆ. ಇದರಿಂದ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.