ಅಭ್ಯರ್ಥಿಗೆ ಬಿ.ಸಿ.ರೋಡು ರಸ್ತೆಯ ಬಿಸಿ ಶಾ(ತಾ)ಪ
Team Udayavani, Feb 23, 2018, 2:22 PM IST
ಬೆಳ್ತಂಗಡಿ: ಅದೆಷ್ಟು ಚುನಾವಣೆ ಕಳೆದರೂ ಬಿ.ಸಿ. ರೋಡು- ಚಾರ್ಮಾಡಿ ರಸ್ತೆ ಮಾತ್ರ ಹಾಗೆಯೇ ಇದೆ. ಈ ವರೆಗೆ ಎಲ್ಲರೂ ಭರವಸೆಗಳನ್ನಷ್ಟೇ ಕೊಟ್ಟಿದ್ದಾರೆ, ಯಾವುದೂ ಈಡೇರಲೇ ಇಲ್ಲ. ಗ್ರಾಮಾಂತರದ ಅದೆಷ್ಟು ರಸ್ತೆಗಳು ನಳನಳಿಸಿದರೂ ಬಿ.ಸಿ. ರೋಡು – ಚಾರ್ಮಾಡಿ ರಸ್ತೆ ಮಾತ್ರ ದ್ವಿಪಥವಾಗಲೇ ಇಲ್ಲ. ಆದ್ದರಿಂದ ಈ ಬಾರಿ ಎರಡೂ ಪಕ್ಷದ ಅಭ್ಯರ್ಥಿಗಳಿಗೆ ಇದೊಂದು ಸವಾಲಾಗುವ ಸಾಧ್ಯತೆಯಿದೆ. ಏಕೆಂದರೆ ಈ ವಿಚಾರದಲ್ಲಿ ಎರಡೂ ಪಕ್ಷದವರು ಹೇಳಿಕೊಂಡು ಬಂದದ್ದು ಸುಳ್ಳೇ.
ಎಂಟು ವರ್ಷಗಳ ಹಿಂದೆ ರಾ. ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮ್ಯ ರಸ್ತೆಗಿಂತಲೂ ಕಳಪೆ ಸ್ಥಾನಮಾನದಲ್ಲಿರುವ ಬಂಟ್ವಾಳ – ಕಡೂರು ರಸ್ತೆ ಬಿ.ಸಿ. ರೋಡಿನಿಂದ ಚಾರ್ಮಾಡಿ ತನಕ ದ್ವಿಪಥವಾಗಬೇಕಿದೆ.
ಮೇಲ್ದರ್ಜೆಗೆ: ಕಡೂರು – ಬಂಟ್ವಾಳ ರಾಜ್ಯ ಹೆದ್ದಾರಿಯು ಮಂಗಳೂರಿನಿಂದ ತಿರುವಣ್ಣಾಮಲೈ ರಸ್ತೆಯಾಗಿ 2010 ಮೇ ತಿಂಗಳಲ್ಲಿ ರಾ. ಹೆ. 234 ಆಗಿ ಪರಿವರ್ತನೆಗೊಂಡಿದೆ. ಈ ಹೆದ್ದಾರಿಯಲ್ಲಿ ಬಿ.ಸಿ. ರೋಡಿನಿಂದ ಚಾರ್ಮಾಡಿ ತನಕ ಅನೇಕ ಪೇಟೆಗಳು ಸಿಗುತ್ತವೆ. ಅಂತಹ ಪ್ರದೇಶಗಳಲ್ಲಿ ಪಾರ್ಕಿಂಗ್ ಸೇರಿದಂತೆ ವಾಹನ ದಟ್ಟಣೆ, ಜನಜಂಗುಳಿ ನಿತ್ಯ ನಿರಂತರ.
7 ಮೀ. ಅಗಲ: ಈಗಿನ ರಸ್ತೆ 5.5 ಮೀ. ಅಗಲವಿದೆ. ಇದನ್ನು ದ್ವಿಪಥ ಎಂದರೆ 7 ಮೀ. ಅಗಲಗೊಳಿಸುವ ಕಾರ್ಯ ಮೊದಲಾಗಿ ನಡೆಯಬೇಕಿದೆ. ಈಗಾಗಲೇ ನಡೆದ ವಾಹನ ಗಣತಿ ಪ್ರಕಾರ ಇದು ಚತುಷ್ಪಥವಾಗಲು ಅರ್ಹ. ಆದರೆ ಸದ್ಯ ದ್ವಿಪಥಗೊಂಡರೂ ಸಾಕು. ಮಂಗಳೂರಿನಿಂದ ಬಿ.ಸಿ. ರೋಡು ತನಕ ಈಗಾಗಲೇ ಚತುಷ್ಪಥ ರಸ್ತೆ ನಿರ್ಮಾಣಗೊಂಡಿದೆ. ಬಿ.ಸಿ. ರೋಡಿನಿಂದ ಹಾಸನ ಮಾರ್ಗವೂ ಚತುಷ್ಪಥ ವಾಗುತ್ತಿದೆ. ಬೇಲೂರಿನಿಂದ ಇದೇ ರಸ್ತೆ ಅಗಲಗೊಂಡಿದೆ. ಚಾರ್ಮಾಡಿ – ಬಿ.ಸಿ. ರೋಡು ಮಧ್ಯೆ ಮಾತ್ರ ಬಾಕಿ ಇದೆ.
11,500 ವಾಹನ: ಗಣತಿಯಂತೆ ಈ ರಸ್ತೆಯಲ್ಲಿ ಚತುಷ್ಪಥಗೊಳ್ಳಲು ಬೇಕಾದಷ್ಟು ವಾಹನಗಳ ಓಡಾಟ ನಡೆಯುತ್ತಿದೆ.
ಸಚಿವರು, ಶಾಸಕರು, ಸಂಸದರಿಗೂ ಈ ರಸ್ತೆಯಲ್ಲಿ ವಾಹನ ದಟ್ಟಣೆಯ ಅನುಭವವಾಗಿದೆ. ಶಾಸಕರು ಕೇಂದ್ರದ ಕಡೆಗೆ ಬೊಟ್ಟು ಮಾಡಿದರೆ, ಸಂಸದರು ಅನುದಾನ ಬಿಡುಗಡೆಯಾಗಿದೆ ಎನ್ನುತ್ತಾರೆ. ಯಾವಾಗ, ಏನು, ಎಷ್ಟು ಎಂದು ಕೇಳಿದರೆ ಉತ್ತರವಿಲ್ಲ.
ಬಾಕಿಯಾಗಿರುವುದು: ಸಂಸೆ -ದಿಡುಪೆ ರಸ್ತೆ ನಿರ್ಮಾಣ ಭರವಸೆಗೆ ಅರಣ್ಯ ಇಲಾಖೆ, ವನ್ಯಜೀವಿ ವಿಭಾಗದ ತಗಾದೆಯಿದೆ. ಶಿಶಿಲ -ಮೂಡಿಗೆರೆ ರಸ್ತೆಗೆ ಪರಿಸರವಾದಿಗಳ ವಿರೋಧ ಇದೆ. ಹೀಗಾಗಿ ಎರಡು ರಸ್ತೆಗಳ ಬೇಡಿಕೆ ಈಡೇರಿಕೆಗೆ ಬಾಕಿಯಾಗಿದೆ. ಊರಿನ ಎಲ್ಲ ರಸ್ತೆಗಳು ದುರಸ್ತಿಯಾದರೂ ಕೊಯ್ಯೂರು ರಸ್ತೆ ತಾಂತ್ರಿಕ ಕಾರಣದಿಂದ ದುರಸ್ತಿಯಾಗದೇ ಉಳಿದಿದೆ. ಧರ್ಮಸ್ಥಳ ಡಿಪೋದಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಿದ್ದು, ಡಿಪೋ ನಿರ್ಮಾಣಕ್ಕೆ ಜಾಗ ಒದಗಿಸಿಕೊಡಲು ಸಾಧ್ಯವಾಗಿಲ್ಲ. ಬೆಳ್ತಂಗಡಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ. ಪ್ರಮುಖ ಬೇಡಿಕೆಗಳ ಈಡೇರಿಕೆಯಾಗಿದೆ. ಆದರೂ ಒಂದಷ್ಟು ಉಳಿದುಕೊಂಡಿದೆ.
ಕ್ಷೇತ್ರಕ್ಕೆ ಲಭಿಸಿದ್ದೇನು?
ತಾಲೂಕಿನ ಜನತೆ ಈ ಬಾರಿ ಸಿದ್ದರಾಮಯ್ಯ ಸರಕಾರದ ಭಾಗ್ಯಶಾಲಿಗಳು. 21,000 ಮಂದಿಗೆ 94ಸಿ, 94ಸಿಸಿ ಹಕ್ಕುಪತ್ರ ಸಿಕ್ಕಿದೆ, ವಿವಿಧ ವಸತಿ ಯೋಜನೆಗಳ 35,000 ಮನೆಗಳು ದೊರೆತಿವೆ. ಅನ್ನಭಾಗ್ಯದ ಉಚಿತ ಅಕ್ಕಿ ದೊರೆತಿದೆ. 8 ಕೋ.ರೂ. ವೆಚ್ಚದ ಮಿನಿ ವಿಧಾನ ಸೌಧ ಉದ್ಘಾಟನೆಯಾಗಿದೆ. ಒಂದೇ ವರ್ಷದಲ್ಲಿ 23 ಸೇತುವೆಗಳ ರಚನೆಯಾಗಿದೆ. 60 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣವಾಗಿದೆ. ಬಾಂಜಾರು, ಕೋಲೋಡಿಯಂತಹ ಹಿಂದುಳಿದ ಪ್ರದೇಶಗಳಿಗೂ ಕಾಂಕ್ರೀಟ್ ರಸ್ತೆ, ಸೇತುವೆಗಳಾಗಿವೆ. ತಾಲೂಕಿನ ಬಹುತೇಕ ರಸ್ತೆಗಳು ಡಾಮರು ಕಂಡಿವೆ. ಪುದುವೆಟ್ಟು, ಕಾಜೂರಿನಂತಹ ಅತ್ಯಂತ ಪ್ರಮುಖ ಬೇಡಿಕೆಯ ಸೇತುವೆಗಳ ರಚನೆಯಾಗಿ ಜನರ ಕನಸು ನನಸಾಗಿದೆ. ಕೆಲವೇ ದಿನಗಳ ಹಿಂದೆ ಮತ್ತೆ 16 ಕೋ.ರೂ. ಮಂಜೂರಾಗಿ ರಸ್ತೆ ಸೇತುವೆಗೆ ಶಿಲಾನ್ಯಾಸ ನಡೆದಿದೆ. ಪುಂಜಾಲ ಕಟ್ಟೆ ಪ್ರ.ದ. ಕಾಲೇಜು ಕಟ್ಟಡ, ಮಾಲಾಡಿ ಐಟಿಐ ಕಟ್ಟಡ ಆಗಿದೆ. ಇವೆಲ್ಲ ಬಹುದಿನಗಳ ಕಾಲ ನನೆಗುದಿಗೆ ಬಿದ್ದಿದ್ದ ಯೋಜನೆಗಳು. ಈ ಬಾರಿ ಅವುಗಳಿಗೆಲ್ಲ ಮೋಕ್ಷ ದೊರೆತಿದೆ.
ಲಕ್ಷ್ಮೀ ಮಚ್ಚಿನ