ಕಂಪ್ಲಿ-ಕೋಟೆಯ ಸೇತುವೆ ಜಲಾವೃತ
Team Udayavani, Aug 16, 2018, 4:24 PM IST
ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷ 48 ಸಾವಿರ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸಂಪರ್ಕದ ಕೊಂಡಿಯಾದ ಕಂಪ್ಲಿ-ಕೋಟೆಯ ಸೇತುವೆ ಜಲಾವೃತಗೊಂಡಿದ್ದು, ಸಂಚಾರ ಕಡಿತಗೊಂಡಿದೆ.
ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಿದಂತೆ ಹೊರ ಹರಿವು ಹೆಚ್ಚಾಗತೊಡಗಿದೆ. ಕಂಪ್ಲಿ-ಕೋಟೆಯ ಸೇತುವೆ ಮುಳುಗಡೆಯಾಗಿದ್ದು ನದಿ ಪಾತ್ರದ ಬಹುತೇಕ ಜಮೀನುಗಳು ಜಲಾವೃತಗೊಂಡಿವೆ.
2014ರಲ್ಲಿ ಕೊನೆಯ ಬಾರಿಗೆ ಜಲಾಶಯ ಭರ್ತಿಯಾಗಿದ್ದು ಬಿಟ್ಟರೆ ಇದೀಗ ನಾಲ್ಕು ವರ್ಷಗಳ ನಂತರ ಜಲಾಶಯ ಭರ್ತಿಯಾಗಿದೆ. ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ. ಕಂಪ್ಲಿ-ಕೋಟೆ ಬಳಿಯ ದೇವಸ್ಥಾನಗಳು ಹಾಗೂ ಮನೆಗಳಿಗೆ ನೀರು ನುಗ್ಗಿವೆ. ಕಂಪ್ಲಿ-ಕೋಟೆ ಬಳಿಯ ಭತ್ತ ಹಾಗೂ ಬಾಳೆ ತೋಟಗಳಿಗೆ ನೀರು ನುಗ್ಗಿದೆ.
ಕೋಟೆಯ ಪ್ರಸನ್ನ ವೆಂಕಟರಮಣ ದೇವಸ್ಥಾನ, ಹೊಳೆ ಆಂಜನೇಯಸ್ವಾಮಿ ದೇವಸ್ಥಾನ, ಐತಿಹಾಸಿಕ ಕೋಟೆ ಜಲಾವೃತಗೊಂಡಿದ್ದು, ಕೋಟೆ ಪ್ರದೇಶದ ಬಹುತೇಕ ಮಾರ್ಗಗಳ ಸಂಚಾರ ಕಡಿತಗೊಂಡಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ನದಿ ಪಾತ್ರದ ಜನರು ಮುಂಜಾಗ್ರತೆ ವಹಿಸುವಂತೆ ತಾಲೂಕು ಆಡಳಿತ ಮನವಿ ಮಾಡಿದೆ.
ಕಂಪ್ಲಿ-ಕೋಟೆಯ ಸೇತುವೆ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಕಂಪ್ಲಿಯಿಂದ ಗಂಗಾವತಿಗೆ ತೆರಳುವ ಸೇತುವೆ ಮೇಲಿನ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಂಪ್ಲಿಯಲ್ಲಿ ಬಸ್, ಲಾರಿ ಸೇರಿದಂತೆ ಇತರೆ ವಾಹನಗಳನ್ನು ಹೊಸಪೇಟೆ ಮಾರ್ಗವಾಗಿ ತೆರಳುವಂತೆ ಸೂಚಿಸಲಾಗಿದೆ. ವಾಹನಗಳು ಬುಕ್ಕಸಾಗರದ ನೂತನ ಸೇತುವೆ ಮೇಲೆ ಸಂಚರಿಸುತ್ತಿವೆ.
ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವುದರಿಂದ ಕೋಟೆಯ ದಂಡೆಯಲ್ಲಿನ ಸುಮಾರು 6ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಈ ಆರು ಮೀನುಗಾರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಕೋಟೆಯ ಸರ್ಕಾರಿ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿದೆ.
ಸೇತುವೆ ಜಲಾವೃತಗೊಂಡ ಹಿನ್ನೆಲೆಯಲ್ಲಿ ಬುಧವಾರ ತಹಶೀಲ್ದಾರ್ ಎಂ. ರೇಣುಕ, ಉಪತಹಶೀಲ್ದಾರ್ ಬಿ. ರವೀಂದ್ರಕುಮಾರ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ, ಅಧ್ಯಕ್ಷರಾದ ಎಂ. ಸುಧೀರ್, ಪಿಎಸ್ಐ ಬಿ. ನಿರಂಜನ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ತಹಶೀಲ್ದಾರ್ ಎಂ.ರೇಣುಕ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳಗೊಡುಹಾಳು, ಇಟಗಿ, ಸಣಾಪುರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿದರು.
ಕೋಟೆಯ ಬಹುತೇಕ ದೇವಸ್ಥಾನಗಳು ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ತ ಹಾಲೆರೆಯಲು ಸಾರ್ವಜನಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಹರಿಗೋಲು ಮಾಲೀಕ ಹಸೇನಪ್ಪ ದೇವಸ್ಥಾನಕ್ಕೆ ತೆರಳುವ
ಎಲ್ಲ ಭಕ್ತರನ್ನು ಉಚಿತವಾಗಿ ತಮ್ಮ ಹರಿಗೋಲಿನಲ್ಲಿ ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವ ಮೂಲಕ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು
ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು
Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು
Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು
Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು