ತುಂಗಭದ್ರೆ ರೌದ್ರಾವತಾರ; ಬದುಕು ತತ್ತರ
Team Udayavani, Aug 18, 2018, 5:21 PM IST
ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ 2.30 ಲಕ್ಷ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಶುಕ್ರವಾರವೂ ಪ್ರವಾಹ ಮುಂದುವರಿದಿದೆ. ಕಂಪ್ಲಿ-ಕೋಟೆ ಪ್ರದೇಶದ 26 ಮನೆಗಳಿಗೆ ನೀರು ನುಗ್ಗಿದ್ದು, 32 ಕುಟುಂಬಗಳನ್ನು ಸಮೀಪದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದ್ದು, 130ಕ್ಕೂ ಅಧಿಕ ಸಂತ್ರಸ್ತರಿಗೆ ಗಂಜಿಕೇಂದ್ರದ ವ್ಯವಸ್ಥೆ ಕಲ್ಪಿಸಲಾಗಿದೆ.
ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಸಾರ್ವಜನಿಕರು ಪರದಾಡುತ್ತಿದ್ದಾರೆ. ದೇವಸ್ಥಾನಗಳು, ಸಂಪರ್ಕ ರಸ್ತೆಗಳು ಜಲಾವೃತಗೊಂಡಿವೆ. ನದಿ ತೀರದಲ್ಲಿ ಕಂದಾಯ ಅಧಿಕಾರಿಗಳು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ನದಿಯಲ್ಲಿ ನೀರಿನ ಪ್ರವಾಹ ಅಧಿಕವಾಗಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳ ಸಂಪರ್ಕ ಕಳೆದುಕೊಂಡಿವೆ. ಜೊತೆಗೆ ನದಿ ತೀರದ ಬಹುತೇಕ ಪಂಪ್ಸೆಟ್ಗಳು ಜಲಾವೃತಗೊಂಡಿದೆ. ಕೋಟೆಯ ಬಹುತೇಕ ದೇವಸ್ಥಾನಗಳಿಗೆ ಜಲಕಂಟಕ ಎದುರಾಗಿದ್ದು, ಇದುವರೆಗೂ ಕೇವಲ ಅರ್ಧಮಟ್ಟಕ್ಕೆ ಮುಳುಗಿದ್ದ ದೇವಸ್ಥಾನಗಳು ಇಂದು ಮುಕ್ಕಾಲು ಭಾಗ ಮುಳುಗಿವೆ. ನದಿ ತೀರದ ಬಹುತೇಕ ಭತ್ತ, ಬಾಳೆ ಹಾಗೂ ಕಬ್ಬಿನ ಗದ್ದೆಗಳು ಜಲಾವೃತಗೊಂಡಿದ್ದು, ಬಹುತೇಕ ಬೆಳೆಗಳು ಕೊಳೆತು ಹೋಗುವ ಸ್ಥಿತಿಯಲ್ಲಿವೆ.
ನೀರಿನ ಮಟ್ಟ ಹೆಚ್ಚಳ: ಮುಂಜಾಗ್ರತಾ ಕ್ರಮ
ಬಳ್ಳಾರಿ: ತುಂಗಾಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ಹೊಸಪೇಟೆ,ಸಿರಗುಪ್ಪ ಮತ್ತು ಹೂವಿನಹಡಗಲಿ ತಾಲೂಕುಗಳಲ್ಲಿನ ನದಿಪಾತ್ರದಲ್ಲಿರುವ ಎಲ್ಲ ಗ್ರಾಮಗಳಲ್ಲಿ ಜಿಲ್ಲಾಡಳಿತ ವತಿಯಿಂದ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಹಡಗಲಿ ತಾಲೂಕಿನ ಹಿರೇಹಡಗಲಿ ಹೋಬಳಿ ಕುರವತ್ತಿ ಗ್ರಾಮದಲ್ಲಿ 38 ಜನರನ್ನು ಸ್ಥಳಾಂತರ ಮಾಡಲಾಗಿದ್ದು, ಅವರಿಗೆ ಗ್ರಾಮ ಮಟ್ಟದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹಡಗಲಿ ಹೋಬಳಿಯ ಅಂಗೂರು ಗ್ರಾಮದಲ್ಲಿ 11ಜನರನ್ನು ಸ್ಥಳಾಂತರಿಸಲಾಗಿದ್ದು, ಸಂತ್ರಸ್ಥರು ತಮ್ಮ ಇಚ್ಚೆಯಂತೆ ಸಂಬಂಧಿಕರ ಮನೆಗಳಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹಡಗಲಿ,ಹೊಸಪೇಟೆ ಮತ್ತು ಸಿರಗುಪ್ಪ ತಾಲೂಕುಗಳಲ್ಲಿ ನದಿ ನೀರಿನ ಮಟ್ಟ ಹೆಚ್ಚಳದ ಪರಿಣಾಮ 883 ಹೆಕ್ಟೇರ್ ಭತ್ತದ ಬೆಳೆ ನೀರಿನಲ್ಲಿ ಮುಳುಗಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಎರಡೂಮೂರು ದಿನಗಳಲ್ಲಿ ನದಿ ನೀರಿನ ಮಟ್ಟ ಕಡಿಮೆಯಾದರೇ ಬೆಳೆ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ನಾ| ವಿ.ಎಸ್.ಹಂದ್ರಾಳ್ ಭೇಟಿ
ಕಂಪ್ಲಿ: ಕಳೆದ ಹಲವು ದಿನಗಳಿಂದ ಪ್ರವಾಹಕ್ಕೆ ತುತ್ತಾಗಿರುವ ಕಂಪ್ಲಿ-ಕೋಟೆ ಪ್ರದೇಶ ಸೇರಿದಂತೆ ತಾಲೂಕಿನಲ್ಲಿ ಜಲಾವೃತಗೊಂಡ ವಿವಿಧ ಗ್ರಾಮಗಳಿಗೆ ಜಿಲ್ಲಾ ನ್ಯಾಯಾಧೀಶರಾದ ವಿ.ಎಸ್.ಹಂದ್ರಾಳ್, ಶಾಸಕ ಜೆ.ಎನ್.ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರಿಗೆ ತೊಂದರೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದರು. ಕೋಟೆ ನದಿ ತೀರದ ವಿವಿಧ ಪ್ರದೇಶ ಹಾಗೂ ಮನೆಗಳಿಗೆ ನೀರು ನುಗ್ಗಿ ಸಂತ್ರಸ್ತರಾದ ಕುಟುಂಬಗಳೊಂದಿಗೆ ಚರ್ಚಿಸಿದರು. ಸಂತ್ರಸ್ತರು ತಾಲೂಕು ಆಡಳಿತ ಆರಂಭಿಸಿರುವ ಗಂಜಿಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು ಹಾಗೂ ನೀರಿನ ಪ್ರವಾಹ ಅಧಿಕವಾದರೆ ಸುರಕ್ಷಿತ ಸ್ಥಳಗಳಿಗೆ
ತೆರಳುವಂತೆ ಸೂಚಿಸಿದರು. ನಂತರ ಗಂಜಕೇಂದ್ರಕ್ಕೆ ಭೇಟಿ ನೀಡಿದ ನ್ಯಾ|ವಿ.ಎಸ್. ಹಂದ್ರಾಳ್, ಸಂತ್ರಸ್ತರಿಗೆ ಕೈಗೊಂಡ ವಸತಿ ಹಾಗೂ ಊಟದ ವ್ಯವಸ್ಥೆ ಪರಿಶೀಲಿಸಿ ಸೇತುವೆ ಮೇಲೆ ಹರಿಯುತ್ತಿರುವ ಪ್ರವಾಹ ವೀಕ್ಷಿಸಿದರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ನದಿಗೆ ಇನ್ನು ಹೆಚ್ಚಿನ ಪ್ರಮಾಣದ ನೀರು ಬಿಡುವ ನಿರೀಕ್ಷೆ ಇದ್ದು, ನದಿ ತೀರದ ಕುಟುಂಬಗಳನ್ನು ಸ್ಥಳಾಂತರಿಸಲು ಸೂಕ್ತ ಕ್ರಮ ಮತ್ತು ಸಂತ್ರಸ್ತರಿಗೆ ಗಂಜಿಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸೂಚಿಸಿದರು. ಈ ವೇಳೆ ತಹಶೀಲ್ದಾರ್ ಎಂ.ರೇಣುಕಾ,
ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಪಿಎಸ್ಐ ನಿರಂಜನ ಇದ್ದರು.
ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೋಟೆಯಲ್ಲಿ ಪ್ರವಾಹ ಪರಿಸ್ಥಿತಿ ಅಧಿಕವಾಗಿದೆ. ಇಂದು 26 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಅಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. ಪ್ರವಾಹ ಅಧಿಕವಾದರೆ ಪಟ್ಟಣದ 8ನೇ ವಾರ್ಡ್ ಸರ್ಕಾರಿ ಶಾಲೆಯನ್ನು ವಸತಿಗಾಗಿ ಕಾಯ್ದಿರಿಸಲಾಗಿದೆ.
ಗಂಜಿಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ನದಿ ತೀರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ನದಿ ತೀರದಲ್ಲಿ ಕಂದಾಯ ಅಧಿಕಾರಿಗಳು, ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಆಹಾರ ನಿರೀಕ್ಷಕರಾದ ರವಿ ರಾಠೊಡ್, ಎಸ್.ಎಸ್.ತಂಗಡಗಿ, ಗ್ರಾಮ ಲೆಕ್ಕಾಧಿಕಾರಿಗಳು, ಪುರಸಭೆ ಸಿಬ್ಬಂದಿ, ಪೊಲೀಸರು ಬೀಡು ಬಿಟ್ಟಿದ್ದು ತೀವ್ರ ನಿಗಾವಹಿಸಿದ್ದಾರೆ.
ಎಂ.ರೇಣುಕಾ, ತಹಶೀಲ್ದಾರ್ ಕಂಪ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ