ಬೋಧನೆಯೊಂದಿಗೆ ಸಮಾಜ ತಿದ್ದಿ
Team Udayavani, Sep 12, 2017, 12:15 PM IST
ಔರಾದ: ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಮಾಡುವುದರೊಂದಿಗೆ ಸಮಾಜ ತಿದ್ದುವವನೇ ನಿಜವಾದ ಶಿಕ್ಷಕ ಎಂದು ಮಾಜಿ ಗೃಹ ಸಚಿವ ಆರ್. ಆಶೋಕ ಹೇಳಿದರು.
ಪಟ್ಟಣದ ಅಮರೇಶ್ವರ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಅವರು, ದಾರಿ ತಪ್ಪುತ್ತಿರುವ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವುದರ ಜೊತೆಗೆ ಸಮಾಜದ ತಿರುಳು ಪರಿಚಯಿಸುವ ಮೂಲಕ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.
ಹಿಂದಿನ ಕಾಲದಲ್ಲಿ ಶಿಕ್ಷಕರನ್ನು ಕಂಡರೇ ಮಕ್ಕಳು ಭಯ ಪಡುತ್ತಿದ್ದರು. ಆದರೆ ಈಗ ಮಕ್ಕಳನ್ನು ಕಂಡು ಶಿಕ್ಷಕರೇ ಭಯದಿಂದ ಶಾಲೆಯಲ್ಲಿ ವಿದ್ಯಾಭಾಸ ಮಾಡಿಸುವಂತಹ ಅನಿವಾರ್ಯತೆ ಇದೆ. ಪರಿವರ್ತನೆ ಜಗದ ನಿಯಮವಾಗಿದೆ ಎಂದರು.
ನಾಡಿನ ಶಿಕ್ಷಕರ ಹಲವು ದಶಕಗಳ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗದೇ ಇರುವುದು
ದುರಾದೃಷ್ಟದ ಸಂಗತಿ. ಆದಿಕಾಲದಿಂದ ಆಧುನಿಕ ಯುಗದ ವರೆಗೂ ವಿಶ್ವದಲ್ಲಿ ಎಲ್ಲಾ ಸರ್ಕಾರಿ ನೌಕರರಿಗಿಂತ ಶಿಕ್ಷಕರಿಗೆ ಹೆಚ್ಚು ಗೌರವ ನೀಡಲಾಗುತ್ತಿದೆ. ಶಿಕ್ಷಕರು ತಮ್ಮ ಕರ್ತವ್ಯಕ್ಕೆ ಚುತಿ ಬರದಂತೆ ಜಾಗ್ರತೆಯಿಂದ ಕೆಲಸ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಗಡಿ ತಾಲೂಕಿನಲ್ಲಿ ಶಿಕ್ಷಕ ದಿನವನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ಶಾಸಕ ಪ್ರಭು ಚವ್ಹಾಣ ಅವರ ಕಾಳಜಿ ನಿಜಕ್ಕೂ ಅನನ್ಯವಾದದ್ದು. ಇವರಂತೆ ನಾನೂ ಕೂಡ ನಮ್ಮ ಕ್ಷೇತ್ರದಲ್ಲಿ ಶಿಕ್ಷಕರ ದಿನಾಚರಣೆ ಮಾಡಿ ಗುರು ವಂದನೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಶಾಸಕ ಪ್ರಭು ಚವ್ಹಾಣ ಮಾತನಾಡಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ತಾಲೂಕಿನಲ್ಲಿ ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಮಾಡಬೇಕೆನ್ನುವ ಉದ್ದೇಶದಿಂದ 7 ವರ್ಷಗಳಿಂದ ಶಿಕ್ಷಕ ಹಾಗೂ ಮಕ್ಕಳ ದಿನವನ್ನು ಅದ್ಧೂರಿಯಾಗಿ ಆಚರಿಲಾಗುತ್ತಿದೆ. ಅದರಂತೆ ಕೇವಲ ಶೇ.34ಕ್ಕೆ ಸೀಮಿತವಾಗಿದ್ದ ತಾಲೂಕಿನ ಫಲಿತಾಂಶ ಹಂತ ಹಂತವಾಗಿ ಸುಧಾರಣೆಯಾಗಿ ಇದೀಗ ಶೇ.74ಕ್ಕೆ ಬಂದಿದೆ ಎಂದು ಹೇಳಿದು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ದೇವರು, ಶಿವನಾಂದ ಶಿವಾಚಾರ್ಯ ಸ್ವಾಮೀಜಿ ತಮಲೂರ, ಶಿಕ್ಷಣಾಧಿಕಾರಿ ಚವ್ಹಾಣ ಶೆಟ್ಟಿ, ಜಿಪಂ ಸದಸ್ಯ ಮಾರುತಿ ಚವ್ಹಾಣ, ವೀಣಾ ಮಾಣಿಕ, ಅನೀಲಗುಂಡಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬಾಬುರಾವ್ ಮಲ್ಕಾಪುರೆ, ಸುಭಾಶ ಕಲ್ಲೂರ ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.