ಡಿಸಿಗೆ ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಮನವಿ
Team Udayavani, Oct 5, 2017, 11:41 AM IST
ಬೀದರ: ನಗರಸಭೆಯವರ ನಿರ್ಲಕ್ಷ್ಯದಿಂದ ನಗರದಲ್ಲಿ ಮಗು ಸಾವನ್ನಪ್ಪಿದ್ದು, ಆ ಮಗುವಿನ ಕುಟುಂಬಕ್ಕೆ 50 ಲಕ್ಷ ರೂ. ಸಹಾಯಧನ ನೀಡಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಆಗ್ರಹಿಸಿದೆ.
ವೇದಿಕೆ ಅಧ್ಯಕ್ಷ ಆಲ್ಬರ್ಟ್ ಕೋಟೆ ನೇತೃತ್ವದಲ್ಲಿ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮಂಗಲಪೇಟ್ನ ವಿಲ್ಸಂಟ್ ರಾಜಯ ಸಂಜಯ ಜಸ್ಸಿ ಬೀದಿ ನಾಯಿಗಳಿಗೆ ಹೆದರಿ ಓಡಿ ಹೋಗುವಾಗ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದಕ್ಕೆ ನಗರಸಭೆ ನೇರ ಹೊಣೆಯಾಗಿದೆ. ನಿರ್ಲಕ್ಷ್ಯವಹಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರ ಪ್ರದೇಶದಲ್ಲಿ ಹತ್ತಾರು ಹಾಳು ಬಿದ್ದ ಬಾವಿಗಳು, ವಿಫಲಗೊಂಡ ಕೊಳವೆ ಬಾವಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳನ್ನು ಕೂಡಲೇ ಮುಚ್ಚಲು ಮುಂದಾಗಬೇಕು. ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಉಪಟಳ ತೀವ್ರವಾಗಿದ್ದು, ಇವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.