ಪರಿಸರ ಸಂರಕ್ಷಣೆ ಎಲ್ಲರ ಹೊಣೆ
Team Udayavani, Nov 24, 2017, 2:11 PM IST
ಬೀದರ: ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಕಾಲಕಾಲಕ್ಕೆ ವಾಹನಗಳ ತಪಾಸಣೆ ಮತ್ತು ಸರ್ವೀಸ್ ಮಾಡುವ ಮೂಲಕ ಕಪ್ಪು ಹೊಗೆ ಬಿಡುವುದನ್ನು ನಿಯಂತ್ರಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ
ಕೆ.ಟಿ. ವಿಶ್ವನಾಥ ಹೇಳಿದರು.
ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ವತಿಯಿಂದ ಗುರುವಾರ ನಗರದ ಬಿ.ವಿ.ಭೂಮರೆಡ್ಡಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಾಯು ಮಾಲಿನ್ಯ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ನೀವು ಬದುಕಿ, ಇನ್ನೊಬ್ಬರನ್ನು ಬದುಕುಲು ಬಿಡಿ’ ಎನ್ನುವ ಮಾತಿನಂತೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು. ವಾಹನಗಳಿಂದ ಹೊರಸೂಸುವ ಹಾನಿಕಾರಕ ಅಂಶಗಳನ್ನು ನಿಯಂತ್ರಿಸಲು ಯತ್ನಿಸಬೇಕು.
ವಿದ್ಯಾರ್ಥಿಗಳು ವಾಹನ ಚಾಲನೆ ವೇಳೆ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ದೇಶದಲ್ಲಿ ಪ್ರತಿ ವರ್ಷ 1.50 ಲಕ್ಷ ಜನರಿಗೆ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಶೇ.80ರಷ್ಟು ಯುವಕರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಮನುಷ್ಯ ಎಲ್ಲದರಲ್ಲೂ ಮುಂಚೂಣಿಯಲ್ಲಿರಬೇಕು ಎನ್ನುವ ಹಂಬಲ ಹೊಂದಿದ್ದು,
ವಾಹನ ಚಾಲನೆ ವಿಷಯದಲ್ಲಿ ಸೋಲುವ ಗುಣ ಬೆಳೆಸಿಕೊಳ್ಳಬೇಕು. ಅಂದಾಗಲೇ ಅಮೂಲ್ಯವಾದ ಜೀವ
ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಮೋಟಾರು ವಾಹನ ನಿರೀಕ್ಷಕರಾದ ನಾಗರಾಜ ಡಿ.ಜಿ.ಮಾತನಾಡಿ, ಎಲ್ಲರೂ ಕಡ್ಡಾಯ ಸಂಚಾರಿ ನಿಯಮಗಳನ್ನು
ಪಾಲಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಅಲ್ಲದೇ ಪ್ರತಿಯೊಬ್ಬರು ಕನಿಷ್ಠ ಒಂದು ಗಿಡ ನೆಡಲು ಮುಂದಾಗಬೇಕು.
ಇದರಿಂದ ಶಬ್ದ ಮತ್ತು ವಾಯ ಮಾಲಿನ್ಯ ತಡೆಯಬಹುದು ಎಂದರು. ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್
ಪ್ರಾಂಶುಪಾಲ ಶಿವರಾಜ ಜಮಾದಾರ್ ಮಾತನಾಡಿ, ನಾವು ಪರಿಸರ ರಕ್ಷಿಸಿದಲ್ಲಿ ಅದು ನಮ್ಮನ್ನು ಉಳಿಸುತ್ತದೆ. ಹೆಚ್ಚು
ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸುವುದರಿಂದ ಶಬ್ದ, ವಾಯು ಮಾಲಿನ್ಯ ನಿಯಂತ್ರಿಸಿ ಪರಿಸರ ಸಂರಕ್ಷಿಸಬಹುದು ಎಂದು ಹೇಳಿದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಾಘವೇಂದ್ರ ಡಿ.ಎಚ್. ಅವರು ಅಧ್ಯಕ್ಷತೆ ವಹಿಸಿದ್ದರು.
ಸಂತೋಷ ರಾಯ್ಕೋಡಿ ವೇದಿಕೆಯಲ್ಲಿದ್ದರು. ರೇಣುಕಾ ಸ್ವಾಮಿ, ಸಿದ್ರಾಮ್ ನೆಂಗಾ, ವಿದ್ಯಾರ್ಥಿಗಳು ಸಿಬ್ಬಂದಿ
ಕಾರ್ಯಕ್ರಮದಲ್ಲಿ ಇದ್ದರು. ಪ್ರೊ| ಮೀರಾ ಖೇಣಿ ನಿರೂಪಿಸಿದರು. ಪ್ರೊ| ಉಮಾದೇವಿ ಧನ್ನೂರೆ ಸ್ವಾಗತಿಸಿದರು.
ಗಾಯತ್ರಿ ನೇಳಗೆ ವಂದಿಸಿದರು.