ಒಗ್ಗಟ್ಟಿನಿಂದ ಸಮಾಜ ಅಭಿವೃದ್ಧಿ
Team Udayavani, Jan 26, 2018, 2:29 PM IST
ಬೀದರ: ಯಾವುದೇ ಸಮಾಜ, ಸಂಘ, ಸಂಸ್ಥೆಗಳು ಅಭಿವೃದ್ಧಿಯಾಗಬೇಕಾದರೆ ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದು ಸುಲೇಪೆಟ್ ಮದಾನೆಗುಂದಿ ಸರಸ್ವತಿ ಪೀಠ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಹೇಳಿದರು.
ನಗರದ ಮೌನೇಶ್ವರ ಮಂದಿರದಲ್ಲಿ ಶ್ರೀ ಮೌನೇಶ್ವರರ 23ನೇ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಒಗ್ಗಟ್ಟಿನಲ್ಲಿ ಶಕ್ತಿ ಇದೆ. ವಿಶ್ವಕರ್ಮ ಬಾಂಧವರು ಒಗ್ಗಟ್ಟಿನಿಂದಿರಬೇಕು ಎಂದು ಕರೆ ನೀಡಿದರು.
ವಿಶ್ವಕರ್ಮ ಜನರು ಹಿಂದೆ ತಮ್ಮ ಕಸುಬು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಎಲ್ಲಾ ಬದಲಾಗಿರುವುದರಿಂದ ತಮ್ಮ ಕಸುಬು ನಿಂತು ಹೋಗಿದ್ದು, ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದರಿಂದ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ಉನ್ನತ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ವೀರೇಂದ್ರ ಇಮಾಮದಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿಶ್ವಕರ್ಮ ಜನರಿಲ್ಲ ಅಂದರೆ ಅದು ಊರೇ ಅಲ್ಲ. ಮದುವೆ ಮಾಡಲು ಮನೆ, ಬಾಗಿಲು ಕಿಟಕಿ ಮಾಡಲು ಇತ್ಯಾದಿ ಕೆಲಸಗಳಿಗೆ ವಿಶ್ವಕರ್ಮ ಜನರು ಬೇಕೆ ಬೇಕು. ಆದರೆ ಈಗ ವಿಶ್ವಕರ್ಮ ಜನರ ಸ್ಥಿತಿ ಶೋಚನೀಯವಾಗಿದೆ ಎಂದರು.
ಗುರುಪಾದಪ್ಪಾ ನಾಗಮಾರಪಳ್ಳಿ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ
ಮಾತನಾಡಿ, ವಿಶ್ವಕರ್ಮ ಜನರು ಕೌಶಲ್ಯವಂತರು. ಈಗ ಎಷ್ಟೇ ಓದಿದರೂ ಕೌಶಲ್ಯಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ.
ನಿಮ್ಮ ಕಸುಬು ಜೊತೆಯಲ್ಲಿ ಶಿಕ್ಷಣದಲ್ಲೂ ಮುಂದುವರಿಯಬೇಕು ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಈಶ್ವರಸಿಂಗ್ ಠಾಕೂರ ಮಾತನಾಡಿ, ವಿಶ್ವಕರ್ಮ ಜನರು ಶೈಕ್ಷಣಿಕವಾಗಿ ಮುಂದೆ
ಬರಲು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಕರೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವಿಠೊಬಾ ಪತ್ತರ್, ನಾಂದೇಡ್ನ ನಾಗನಾಥ ವಿಶ್ವಕರ್ಮ ಮಾತನಾಡಿದರು.
ಶ್ರೀ ಕುಮಾರಸ್ವಾಮಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮೌನೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಅಣ್ಣೆಪ್ಪಾ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು.
ರಮೇಶ ಪಂಚಾಳ, ನಾರಾಯಣರಾವ ವಿಶ್ವಕರ್ಮ, ಸುಭಾಷ ಪಂಚಾಳ, ಬಾಬುರಾವ್ ಪಂಚಾಳ, ಜಿಲ್ಲಾ ವಿಶ್ವಕರ್ಮ
ಸಮಾಜದ ಯುವ ಸಂಘಟನೆಯ ಅಧ್ಯಕ್ಷ ಮಹೇಶ ಪಂಚಾಳ ಹಳ್ಳದಕೇರಿ, ರಾಜೇಶ (ಪಪ್ಪು) ವಿಶ್ವಕರ್ಮ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ವೇದಿಕೆಯಲ್ಲಿದ್ದರು.
ಇದಕ್ಕೂ ಮುನ್ನ ನಗರದ ಕಾಳಿಕಾದೇವಿ ಮಂದಿರದಿಂದ ಮೌನೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಪುರವಂತರ ಭಜನಾ ಮಂಡಳಿ ಸೇವೆಯೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ನಂತರ ಇಡೀ ರಾತ್ರಿ ಭಜನೆ ಹಾಗೂ ಸಂಗೀತ ದರ್ಬಾರ್
ಜರುಗಿತು. ರಮೇಶ ಪಂಚಾಳ ಸ್ವಾಗತಿಸಿ, ನಿರೂಪಿಸಿದರು, ಇಂದುಮತಿ ಪಂಚಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.