ಆ್ಯಸಿಡ್ ದಾಳಿ ಆರೋಪಿಗಳಿಗೆ ಕಠಿಣ ಶಿಕ್ಷೆ: ನ್ಯಾ| ಕಮತೆ
Team Udayavani, Aug 18, 2018, 12:10 PM IST
ಹುಮನಾಬಾದ: ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆಸುವ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಎಂ. ಕಮತೆ ಹೇಳಿದರು. ಪಟ್ಟಣದಲ್ಲಿ ಗುರುವಾರ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘ ಸಂಯುಕ್ತವಾಗಿ ಏರ್ಪಡಿಸಿದ್ದ “ಆ್ಯಸಿಡ್ ದಾಳಿ ಮತ್ತು ಕಾನೂನಾತ್ಮಕ ಪರಿಹಾರ’ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಂ 326ರ ಪ್ರಕಾರ ಆ್ಯಸಿಡ್ ದಾಳಿ ಪ್ರಮಾಣ ಆಧರಿಸಿ, ಎ-ಅಂದರೇ ತೀವ್ರ ತರನಾದ ಹಾನಿ, ಬಿ-ಎಂದರೆ ಸಾಮಾನ್ಯ ತರನಾದ ಹಾನಿ ಎಂದರ್ಥ. ತೀವ್ರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗೆ ಜೀವಾವಧಿಶಿಕ್ಷೆ, ಸಾಮಾನ್ಯ ಪ್ರಕರಣಕ್ಕೆ 10 ವರ್ಷ ಜೈಲು ಶಿಕ್ಷೆ ವಿ ಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಇಂಥ ಪ್ರಕರಣಗಳಲ್ಲಿ ಹಾನಿಗೀಡಾದ ಸಂತ್ರಸ್ತ ಮಹಿಳೆಯರಿಗೆ 3ಲಕ್ಷ ರೂ.ಪರಹಾರ ಕೊಡಬೇಕೆಂದು ಹೇಳಿದರೂ ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಪರಿಹಾರದ ಬೇಡಿಕೆ ಇಟ್ಟು ಕಾನೂನು ನೆರವು ಬಯಸಿದಲ್ಲಿ ಆಗಿರುವ ಹಾನಿ ಆಧರಿಸಿ, ಕೋರ್ಟ್ ಸಂತ್ರಸ್ತರಿಗೆ 3ರಿಂದ 5ಲಕ್ಷ ರೂ.ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡುತ್ತದೆ. ಕಾನೂನು ಸೇವಾ ಪ್ರಾಧಿಕಾರದ ಮೂಲಕ ನೆರವು ಪಡೆಯಲಯ ಅವಕಾಶವಿದ್ದು, ನೊಂದವರು ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ವಿರೇಕಾ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಪ್ರಧಾನ ಸಿವಿಲ್ ನ್ಯಾಯಾಧಿಧೀಶ ಆಶೆಪ್ಪ ಬಿ. ಸಣ್ಮನಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಗಗನ್ ಎಂ.ಆರ್., ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಮಂಜುನಾಥ ಮಡಿವಾಳ ಮಾತನಾಡಿದರು. ವಕೀಲರ ಸಂಘದ ತಾಲೂಕು ಘಟಕ ಅಧ್ಯಕ್ಷ ಶಂಭುಲಿಂಗ ಧುಮ್ಮನಸೂರ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಆರ್. ಕುದರೆ, ವಕೀಲರ ಸಂಘದ ಉಪಾಧ್ಯಕ್ಷ ಈಶ್ವರ ಸೋನಕೇರಾ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಜೋತಗೊಂಡ ಇದ್ದರು. ಕೆ.ಶ್ರೀಮಂತ ಸ್ವಾಗತಿಸಿದರು. ಭೀಮರಾವ್ ಓತಗಿ ನಿರೂಪಿಸಿ, ವಂದಿಸಿದರು.