ಹುಮನಾಬಾದ ವೀರಭದ್ರೇಶ್ವರ ಜಾತ್ರೆಗೆ ಮುನ್ನದ ಪಲ್ಲಕ್ಕಿ ಉತ್ಸವ
Team Udayavani, Jan 15, 2019, 9:37 AM IST
ಹುಮನಾಬಾದ: ಹೈ.ಕ. ಭಾಗದ ಇತಿಹಾಸ ಪ್ರಸಿದ್ಧ ಹುಮನಾಬಾದ ಶ್ರೀ ವೀರಭದ್ರೇಶ್ವರ ಜಾತ್ರೆಗೆ ನಿಮಿತ್ತ ಪಲ್ಲಕ್ಕಿ ಉತ್ಸವಕ್ಕೆ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ ಸೋಮವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಉತ್ಸವ ಆರಂಭಕ್ಕೆ ಮುನ್ನ ಇಲ್ಲಿನ ಹಿರೇಮಠದ ಶ್ರೀ ರೇಣುಕ ಗಂಗಾಧರ ಸ್ವಾಮೀಜಿ ಅವರನ್ನು ಪಾರಂಪರಿಕ ವ್ಯಾದ್ಯ ಮೇಳದೊಂದಿಗೆ ಶ್ರೀ ಮಂಟದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಕರೆ ತರಲಾಯಿತು. ಶ್ರೀಗಳು, ಸಚಿವರು ವಿಶೇಷ ಮಂಗಳಾರತಿ ಸಲ್ಲಿಸುವ ಮೂಲಕ ಪಲ್ಲಕ್ಕಿ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ದೇವಸ್ಥಾನದಿಂದ ಜೇರಪೇಟೆ ಹನುಮ ದೇವಸ್ಥಾನಕ್ಕೆ ಹೊರಟಿತು. ಅಲ್ಲಿ ಭದ್ರಕಾಳಿ ಮತ್ತು ವೀರಭದ್ರೇಶ್ವರರಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮದ ವೇಳೆ ನಡೆದ ಶಲ್ಯ ಸುಡುವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ನೆರೆದಿದ್ದರು.
ವಿಧಾನ ಪರಿಷತ್ ಸದಸ್ಯ ಡಾ|ಚಂದ್ರಶೇಖರ ಪಾಟೀಲ, ದೇವಸ್ಥಾನ ಗೌರವಾಧ್ಯಕ್ಷ ವೀರಣ್ಣ ಎಚ್.ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ, ತಹಶೀಲ್ದಾರ್ ಡಿ.ಎಂ.ಪಾಣಿ, ಶರಣಪ್ಪಗೌಡ ಪಾಟೀಲ, ದತ್ತಕುಮಾರ ಆರ್.ಚಿದ್ರಿ, ಬಾಬುರಾವ್ ಪೋಚಂಪಳ್ಳಿ, ಮಲ್ಲಿಕಾರ್ಜುನ ಮಾಶಟ್ಟಿ, ಎಪಿಎಂಸಿ ಅಧ್ಯಕ್ಷ ಡಾ| ಭದ್ರೇಶ ಎಸ್.ಪಾಟೀಲ, ಶರಣಪ್ಪ ಗುಡ್ಡಾ, ಶಿವಕುಮಾರ ವಿ.ನಿಟ್ಟೂರ, ಶ್ರೀನಿವಾಸ ಚವಾಣ್, ಶರಣಪ್ಪ ರೇಚೆಟ್ಟಿ ಇನ್ನಿತರರು ಇದ್ದರು.