ಸ್ವಾವಲಂಬನೆಯಿಂದ ಬದುಕಲು ಮುಂದಾಗಿ
Team Udayavani, Jan 21, 2019, 10:01 AM IST
ಬಸವಕಲ್ಯಾಣ: ಕೇವಲ ಸರಕಾರಿ ನೌಕರಿ ಮೇಲೆ ನಂಬಿಕೆ ಇಟ್ಟಕೊಳ್ಳಬಾರದು. ಬದಲಾಗಿ ಸ್ವಾವಲಂಬಿ ಅಥವಾ ಸ್ವಾಭಿಮಾನದ ಜೀವನ ಮಾಡುವುದಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ನಾವು ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಬೀದರ ಸಂಸದ ಭಗವಂತ ಖೂಬಾ ಹೇಳಿದರು.
ಶ್ರೀ ಮಾದರ ಚನ್ನಯ್ಯ ಅರಿವು ಪೀಠದ ವತಿಯಿಂದ ನಗರದ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ರವಿವಾರ ನಡೆದ 20ನೇ ಮಾದಾರ ಚನ್ನಯ್ಯ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವಾಗಲಿ ಶೇ.7ರಷ್ಟು ಮಾತ್ರ ಸರಕಾರಿ ನೌಕರಿಯಲ್ಲಿ ಕೊಡಲು ಸಾಧ್ಯ ಎಂದು ಹೇಳಿದರು.
12ನೇ ಶತಮಾನದಲ್ಲಿ ಅಸ್ಪೃಶ್ಯತೆ ಮತ್ತು ಮೂಢನಂಬಿಕೆ ಎನ್ನುವುದು ಮುಗಿಲು ಮುಟ್ಟಿತ್ತು. ಅಂತಹ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನವರು ಕಾಯಕವೇ ಕೈಲಾಸ ಎಂಬ ವಚನದೊಂದಿಗೆ ಎಲ್ಲ ಶಿವ-ಶರಣರನ್ನು ಒಂದುಗೂಡಿಸಿ ಸಮಾಜದಲ್ಲಿ ಅನಿಷ್ಠ ಪದ್ಧತಿ ದೂರ ಮಾಡಿದ್ದಾರೆ ಎಂದು ಹೇಳಿದರು.
ಕಲಬುರಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ| ವಿಶ್ವನಾಥ ಹೊಸಮನಿ ಮಾತನಾಡಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟ ಮೈಗೂಡಿಸಿಕೊಳ್ಳಬೇಕು. ನ್ಯಾ| ಸದಾಶಿವ ಆಯೋಗದ ವರದಿ ಜಾರಿಗಾಗಿ ಬೆಂಬಲ ನೀಡುತ್ತಾರೊ ಅಂತಹ ಪಕ್ಷಕ್ಕೆ ನಮ್ಮ ಸಮಾಜ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಮೇಲ್ಜಾತಿ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ನೀಡಿರುವುದು ನಮಗೆ ಸಂತೋಷ ವಿಷಯವಾಗಿದೆ. ಆದರೆ ಕಳೆದ 20 ವರ್ಷಗಳಿಂದ ಸದಾಶಿವ ಆಯೋಗದ ವರದಿ ಜಾರಿಗೆ ಮಾಡಬೇಕು ಎಂದು ಸಾಕಷ್ಟು ಹೋರಾಟ ಮಾಡುತ್ತ ಬರಲಾಗುತ್ತಿದೆ. ಇಂದಿನ ನಮ್ಮ ಬೇಡಿಕೆಗೆ ಸ್ಪಂದಿಸದೇ ಇರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕಗಾಗಿ ಮಾತನಾಡಿದ ಪ್ರಹ್ಲಾದ ಚಂಗಟಿ, ಮಾದಿಗ ಸಮಾಜಕ್ಕೆ ತನ್ನದೆ ಆದ ಪರಂಪರೆ ಮತ್ತು ಇತಿಹಾಸ ಇದೆ. ಎಸ್ಸಿ ಜನಾಂಗದಲ್ಲಿ ಹೆಚ್ಚು ಜನಸಂಖ್ಯೆ ಉಳ್ಳ ಸಮಾಜ ನಮ್ಮದ್ದಾಗಿದೆ. ಆದರೆ ನಾವು ಎಲ್ಲಿ ಇದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು. ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು.
ನೂಲಿಯ ಚಂದಯ್ಯ ಗವಿ ಅಧ್ಯಕ್ಷೆ ಚಿತ್ರಮ್ಮ ತಾಯಿ, ಬಸವ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮಿಗಳು ಸಾನ್ನಿಧ್ಯ ಮತ್ತು ಬಸವಕಲ್ಯಾಣ ಮಾದರ ಚನ್ನಯ್ಯ ಅರಿವು ಪೀಠದ ಕಾಂತ ಸ್ವಾಮಿಗಳು ನೇತೃತ್ವ ವಹಿಸಿದ್ದರು.
ರಾಜು ಕೌಡಿಯಾಳ, ಆರ್.ಜೆ. ಬೆಳ್ಳಿಚುಕ್ಕಿ, ರಮೇಶ ಕಟ್ಟಿತೂಗಾಂವ, ರೋಹಿದಾಸ ಘೋಡೆ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಹಲಗೆ, ಕಾವೇರಿ ಯುವರಾಜ ಬೆಂಡೆ, ಯುವರಾಜ ಬೆಂಡೆ, ಕರುಣಾಬಾಯಿ, ಮಾರುತಿ ಲಾಡೆ, ಸುಧಾಕರ ಸೂರ್ಯವಂಶಿ, ಸಂತೋಷ ಘೋಡೆ, ಮಲ್ಲಿಕಾರ್ಜುನ ಮೇತ್ರೆ, ಪ್ರದೀಪ ಡಗಳೆ, ಸಂತೋಷ ಮುಜನಾಯಕ, ದತ್ತಾತ್ರೆ ಡಾಂಗೆ ಇದ್ದರು.