ಚೌಡಯ್ಯ ವಚನಗಳಲಿದೆ ಸಾಮಾಜಿಕ ಕಳಕಳಿ
Team Udayavani, Jan 22, 2018, 3:24 PM IST
ವಿಜಯಪುರ: ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾಪುರುಷರ ಸ್ಮರಣೆ ನಮ್ಮ ಕರ್ತವ್ಯ.
ಜಾತಿ-ಮತ, ಬೇಧ ಎನ್ನದೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ದುಡಿದ ಶರಣರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಅವರ ಸಂದೇಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಹೇಳಿದರು.
ರವಿವಾರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜ ಸುಧಾರಕ ಮಹಾನ್ ಪುರುಷರ ಜನ್ಮದಿನಾಚರಣೆಗಳು ತಳ ಸಮುದಾಯಗಳನ್ನು ಮೇಲೆತ್ತಲು ಸಹಕಾರಿಯಾಗಿವೆ ಎಂದರು.
ಅಂಬಿಗ ಸಮಾಜ ಪ್ರಗತಿ ಹೊಂದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸಮಾಜದವರು ಶೈಕ್ಷಣಿಕವಾಗಿ,
ಸಾಮಾಜಿಕವಾಗಿ ಮುಂದುವರಿಯಲು ಸುಶೀಕ್ಷಿತರಾಗಬೇಕು. ಪ್ರತಿಯೊಬ್ಬರು ತಮ್ಮ ಸಮುದಾಯವನ್ನು ಪೂಜಿಸಬೇಕು. ಇದರೊಂದಿಗೆ ಉಳಿದ ಸಮುದಾಯವನ್ನು ಗೌರವಿಸುವುದು ಮಾನವನ ಧರ್ಮ.
ಇಂದು ಸಮಾಜದಲ್ಲಿ ಹಿರಿಯರು ಹಾಕಿಕೊಟ್ಟ ಅಡಿಪಾಯ, ಶರಣರ, ಸಂತರ ನುಡಿದ ವಚನ ಪಾಲಿಸುವಲ್ಲಿ ವಿಫಲವಾಗಿದ್ದೇವೆ. ಸಮಾಜದಲ್ಲಿ ಶಾಂತಿ ನೆಮ್ಮದಿಯ ಜೀವನಕ್ಕೆ ಹಿರಿಯರು ಮಾರ್ಗದರ್ಶನ ಮಾಡಬೇಕು. ಕಿರಿಯರು ಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಸಾಹಿತಿ ಸಂಗಮೇಶ ಬದಾಮಿ ಉಪನ್ಯಾಸ ನೀಡಿ, ನಿಜಶರಣ ಅಂಬಿಗರ ಚೌಡಯ್ಯನವರು ಭವಸಾಗರ ದಾಟಿಸುವ ನಿಷ್ಟೂರ ವಚನಕಾರನಾಗಿದ್ದ. ಏಕದೇವೋಪಾಸನೆಯಲ್ಲಿ ಪರಮ ನಿಷ್ಠೆ. ಕೆಳವರ್ಗದ ಜನರ ನೋವು-ನಲಿವುಗಳನ್ನು ಅನುಭವಿಸಿದ ಮಹಾನುಭಾವಿ. ಆಚಾರ ಹೇಳುತ್ತ ನಡೆ-ನುಡಿ ಒಂದಾಗದವರ ವಿರುದ್ಧ ಅವನು ಛಾಟಿಯೇಟು ಅವರ ವಚನಗಳುದ್ದಕ್ಕೂ ತಾತ್ವಿಕತೆಗಿಂತ ನೈತಿಕತೆ ಮತ್ತು ಸಾಮಾಜಿಕ ಕಳಕಳಿ ಎದ್ದು ಕಾಣುತ್ತಿತ್ತು. ಪರಮಾತ್ಮನ ನಿಲುವು ಏನೆಂಬುವುದನ್ನು ಹೇಗೆಂಬುದನ್ನು ಚೌಡಯ್ಯ ತನ್ನ ವಚನಗಳಲ್ಲಿ ಸ್ಪಷ್ಟಪಡಿದ್ದಾರೆ. ಕೆಳ ವರ್ಗದಲ್ಲಿ ಜನಿಸಿದ ಅಂಬಿಗರ ಚೌಡುಯ್ಯ ಶರಣ ಸಮುದಾಯದಲ್ಲಿಯೇ ವಿಶಿಷ್ಟ ವ್ಯಕ್ತಿತ್ವವುಳ್ಳವವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಜಾದ ಪಟೇಲ್ ಮಾತನಾಡಿ, ಸಮಾಜದಲ್ಲಿ ಅನ್ಯೋನ್ಯವಾಗಿ ಬದುಕಲು ಮಹಾನ್ ಪುರುಷರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು. ಇಂದು ಸಮಾಜ ಒಡೆದು ಆಳುವ ಭಾವನೆ ನಮ್ಮಲ್ಲಿ ಬೆಳೆದು ಬಂದಿದೆ. ಅದನ್ನು ಮರೆತು ಸಹಬಾಳ್ವೆಯಿಂದ ಎಲ್ಲರೂ ಒಗ್ಗಟ್ಟಾಗಿ ಬೆರೆಯಬೇಕು. ಈ ನಾಡಿನಲ್ಲಿನ ಸೂಫಿ ಸಂತರು ಬೇರೆ ನಾಡಿನಲ್ಲಿ ಸಿಗುವುದಿಲ್ಲ ಎಂದರು.
ಜಿಪಂ ಸಿಇಒ ಎಂ. ಸುಂದರೇಶ ಬಾಬು, ಉಪ ವಿಭಾಗಾಧಿಕಾರಿ ಡಾ| ಶಂಕರ ವಣಿಕ್ಯಾಳ, ಜಿಪಂ ಸದಸ್ಯೆ ಶಾಂತಾಬಾಯಿ ನಾಗರಾಳ, ಸಮಾಜದ ಮುಖಂಡರಾದ ಸಾಹೇಬಗೌಡ ಬಿರಾದಾರ, ಭರತ ಕೋಳಿ, ಶಿವಾನಂದ ಹಿಪ್ಪರಗಿ, ಪ್ರದೀಪ ಭುಯ್ನಾರಕರ, ಪ್ರಕಾಶ ನಾಯ್ಕೋಡಿ, ಶರಣಪ್ಪ ಕಣಮೇಶ್ವರ, ಮಹಾದೇವಪ್ಪ ಸೊನ್ನ, ಶಂಕರ ನಾಟೀಕಾರ, ಸಿದ್ದಣ್ಣ ತಳವಾರ, ಶಿವಾನಂದ ಭುಯ್ನಾರ, ಶಿವಾನಂದ ಅಂಬಿಗೇರ ಇದ್ದರು.
ಇದೇ ವೇಳೆ ವಿವಿಧ ಕಲಾವಿದರು ಅಂಬಿಗರ ಚೌಡಯ್ಯ ಜೀವನಾಧಾರಿತ ರೂಪಕ ಪ್ರದರ್ಶಿಸಿದರು. ನಂತರ ವಿವಿಧ
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು.
ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಸ್ಥಾನ ದಿಂದ ಆರಂಭಗೊಂಡ ನಿಜಶರಣ ಅಂಬಿಗರ ಚೌಡಯ್ಯ ಭಾವಚಿತ್ರ
ಮೆರವಣಿಗೆಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಚಾಲನೆ ನೀಡಿದರು. ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಹಾತ್ಮ ಗಾಂಧೀಜಿ ಮಾರ್ಗವಾಗಿ ಕಂದಗಲ್ ಹನುಮಂತರಾಯ ಮಂದಿರದವರೆಗೆ ನಡೆಯಿತು.