ಸೌಕರ್ಯ ಕೊರತೆಯಿಂದ ನರಳುತ್ತಿದೆ ಮೋರಟಗಿ
Team Udayavani, Sep 4, 2018, 12:45 PM IST
ಮೋರಟಗಿ: ಗ್ರಾಮಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಮಗಳ ಅಭಿವೃದ್ಧಿಗಾಗಿ ಕೇಂದ್ರ, ರಾಜ್ಯ ಸರಕಾರಗಳು ಹಲವಾರು ಯೋಜನೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿವೆಯಾದರೂ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಇದಕ್ಕೆ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮವೇ ಸೂಕ್ತ ನಿದರ್ಶನ.
ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಕೇಂದ್ರವಾಗಿರುವ ಮೋರಟಗಿ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಈ ಭಾಗದ ಗ್ರಾಪಂ ಅಧ್ಯಕ್ಷರು, ಜಿಲ್ಲಾ ಮತ್ತು ತಾಪಂ ಸದಸ್ಯರ ನಿರ್ಲಕ್ಷ್ಯದಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಬಂದ ಅನುದಾನದ ಹಣವನ್ನು ಜನಪ್ರತಿನಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.
ಮೋರಟಗಿ ಸುತ್ತಲಿನ 18 ಗ್ರಾಮಗಳ ಕೇಂದ್ರ ಸ್ಥಳವಾಗಿದ್ದು, ಪ್ರತಿ ಮಂಗಳವಾರ ಸಂತೆ ನಡೆಯುತ್ತದೆ. ಆದರೆ ಸಂತೆ
ನಡೆಸಲು ಸುಸಜ್ಜಿತ ವ್ಯವಸ್ಥೆಯಿಲ್ಲ. ಅಭಿವೃದ್ಧಿ ಕಾರ್ಯದಲ್ಲಿ ಮೋರಟಗಿ ಗ್ರಾಪಂ ಸಂಪೂರ್ಣ ನಿಷ್ಕ್ರಿಯವಾಗಿದೆ
ಎನ್ನುವ ಮಾತುಗಳು ಕೇಳಿಬರುತ್ತಿವೆ. ಸುಸಜ್ಜಿತ ರಸ್ತೆಗಳಿಲ್ಲ. ಸ್ವಲ್ಪ ಮಳೆಯಾದರೆ ರಸ್ತೆಗಳೆಲ್ಲ ಕೆಸರು ಗದ್ದೆಯಂತಾಗುತ್ತವೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ರೋಗ-ರುಜಿನುಗಳ ಹಾವಳಿ ಹೆಚ್ಚಾಗಿದೆ.
ನೆಮ್ಮದಿ ಕೇಂದ್ರ, ಬಜಾರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳು ಬಿದ್ದಿವೆ. ಗ್ರಾಪಂ ವ್ಯವಹಾರದಲ್ಲಿ ಅಧ್ಯಕ್ಷೆ
ರೇಖಾ ಕೆರಿಗೊಂಡ ಪತಿ ಶ್ರೀಶೈಲ ಕೆರಿಗೊಂಡ ಮಧ್ಯಸ್ಥಿಕೆ ವಹಿಸುತ್ತಿರುವುದು ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ. ಗ್ರಾಪಂ ಅಭಿವೃದ್ಧಿಗೆ ಬಂದ ಅನುದಾನದ ಬಳಕೆ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಸದಸ್ಯರು ಹಾಗೂ ಗ್ರಾಮಸ್ಥರು ಜಿಪಂಗೆ ಒತ್ತಾಯಿಸಿದ್ದಾರೆ.
ಮೋರಟಗಿ ಗ್ರಾಮ ಅಭಿವೃದ್ಧಿಯಾಗಿಲ್ಲ. ಸುಸಜ್ಜಿತ ರಸ್ತೆ, ಚರಂಡಿ ಇಲ್ಲ. ಮಂಗಳವಾರ ಸಂತೆ ನಡೆಯುತ್ತದೆ. ಮರುದಿನ ಅಲ್ಲಿ ಬಿದ್ದ ಕಸವನ್ನು ಸ್ವತ್ಛಗೊಳಿಸುವುದಿಲ್ಲ. ಗ್ರಾಮ ಅಭಿವೃದ್ಧಿಯಾಗಬೇಕು.
ಹಾವಣ್ಣ ಕಕ್ಕಳಮೇಲಿ, ಗ್ರಾಮಸ್ಥ
ಗ್ರಾಮದ ಅಭಿವೃದ್ಧಿಗಾಗಿ ತಿಂಗಳಿಗೊಮ್ಮೆ ಸಭೆ ಕರೆಯಬೇಕು, ಆದರೆ ಕರೆಯುವುದಿಲ್ಲ. ಯಾವುದೇ ಮಾಹಿತಿ ನೀಡುವುದಿಲ್ಲ. ಅಭಿವೃದ್ಧಿಗೆ ಬಂದ ಯೋಜನೆಗಳ ಕುರಿತು ಚರ್ಚಿಸುವುದಿಲ್ಲ. ಹೀಗಾದರೆ ಗ್ರಾಮ ಅಭಿವೃದ್ಧಿ ಸಾಧ್ಯವೇ?.
ನೂರಹ್ಮದ್ ಕಣ್ಣಿ ಸದಸ್ಯ, ಗ್ರಾಪಂ ಮೋರಟಗಿ
ಪಿಡಿಒ ಮೇಲಿಂದ ಮೇಲೆ ಬದಲಾಗುತ್ತಾರೆ. ಏನಾದರು ಕೇಳಲು ಹೋದರೆ ಪಿಡಿಒ ಬದಲಾಗಿದ್ದಾರೆ ಎಂದು ನೆಪ ಹೇಳುತ್ತಾರೆ. ಶುದ್ಧ ನೀರಿನ ಘಟಕಗಳು ಗ್ರಾಪಂ ವ್ಯಾಪ್ತಿಗೆ ತೆಗೆದುಕೊಂಡು ಶೀಘ್ರ ಕಾರ್ಯ ಪ್ರಾರಂಭಿಸಬೇಕು.
ಸಿದ್ದು ಚೌಡಾಪುರ ಮೋರಟಗಿ ಗ್ರಾಪಂ ಸದಸ್ಯ