ಭದ್ರತಾ ಪಡೆ ಠಾಣೆಯಲ್ಲಿ ಆಯುಧ ಪೂಜೆ
Team Udayavani, Oct 20, 2018, 3:32 PM IST
ಆಲಮಟ್ಟಿ: ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಭದ್ರತೆಗೆ ನಿಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಜಲಾಶಯದ ಬಲ ಭಾಗದಲ್ಲಿರುವ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು.
93 ಪೊಲೀಸರ ಬಲವುಳ್ಳ ಈ ಪಡೆಗೆ ನೀಡಲಾಗಿರುವ ವಿವಿಧ ಬಂದೂಕು, ಗುಂಡು ಮೊದಲಾದ ಆಯುಧಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಕೆಎಸ್ಐಎಸ್ಎಫ್ ಆಲಮಟ್ಟಿ ಉಸ್ತುವಾರಿ ಪಿಎಸ್ಐ ಐ.ಎಸ್. ವಾಲಿ ಮಾತನಾಡಿ, ಆಲಮಟ್ಟಿ ಜಲಾಶಯ ಸೂಕ್ಷ್ಮ ಪ್ರದೇಶವಾಗಿದ್ದು ಕೆಎಸ್ಐಎಸ್ಎಫ್ ಸುಪರ್ದಿಯಲ್ಲಿ ಭದ್ರತೆ ಕಟ್ಟುನಿಟ್ಟಾಗಿದೆ. ಜಲಾಶಯ, ಉದ್ಯಾನ, ಆಲಮಟ್ಟಿ ಅಣೆಕಟ್ಟು ಪ್ರವೇಶ ಸೇರಿದಂತೆ ಹಲವಾರು ಕಡೆ ಭದ್ರತೆ ಹೆಚ್ಚಿಸಲಾಗಿದೆ. ಸದ್ಯ ಜಲಾಶಯದ ಭದ್ರತೆಗಾಗಿ ಒಟ್ಟು 93 ಪೊಲೀಸರು ದಿನ 24 ಗಂಟೆ ಮೂರು ಪಾಳೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು ಐವರು ಪಿಎಸ್ಐ, 72 ಪೊಲೀಸರು ಹಾಗೂ 16 ಮಹಿಳಾ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕೆಎಸ್ಐಎಸ್ಎಫ್ ಪಿಎಸ್ಐಗಳಾದ ಯಲ್ಲಪ್ಪ ಬೈಲಕೂರ, ಮಹೇಶ ಹುದ್ದಾರ, ಶಿವಲಿಂಗ ಕುರೆನ್ನವರ, ಜಯಶ್ರೀ ವಡ್ಡರ, ವಿ.ಎಸ್. ಗಾಳಪ್ಪಗೋಳ ಹಾಗೂ ಸಿಬ್ಬಂದಿ ಇದ್ದರು. ಆಲಮಟ್ಟಿ ಜಲಾಶಯದ ಪ್ರವೇಶ ದ್ವಾರ, ಜಲಾಶಯದ ಗೇಟ್ ನಿಯಂತ್ರಣ ಕೊಠಡಿ ಸೇರಿದಂತೆ ನಾನಾ ಕಡೆ ಆಯುಧ ಪೂಜೆ ನೆರವೇರಿಸಲಾಯಿತು.
ಕೃಷ್ಣಾ ಭಾಗ್ಯ ಜಲ ನಿಗಮದ ವಿವಿಧ ಸರ್ಕಾರಿ ವಾಹನಗಳನ್ನು ಹೂವುಗಳಿಂದ ಸಿಂಗಾರಗೊಳಿಸಿದ್ದು ಕಂಡು ಬಂತು. ಆಲಮಟ್ಟಿಯ ಏತ ನೀರಾವರಿ ಯೋಜನೆಗಳ ಮುಖ್ಯಸ್ಥಾವರಗಳಲ್ಲಿಯೂ ಆಯುಧ ಪೂಜೆ ನೆರವೇರಿಸಲಾಯಿತು.