ತರೂರ್ಗೆ ತೃತೀಯ ಲಿಂಗಿ ಮದುವೆ ನಿವೇದನೆ!
Team Udayavani, Nov 17, 2017, 4:04 AM IST
ದೆಹಲಿಯಲ್ಲಿ ನಡೆದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸ್ವಾಭಿಮಾನ ಯಾತ್ರೆಯಲ್ಲಿ ವ್ಯಕ್ತಿಯೊಬ್ಬರು ಕಾಂಗ್ರೆಸ್ ಸಂಸದ ಶಶಿ ತರೂರ್ಗೆ ಮದುವೆ ಪ್ರಸ್ತಾಪವನ್ನು ಮುಂದಿಟ್ಟ ಘಟನೆ ನಡೆದಿದೆ. ಇದಕ್ಕೆ ತರೂರ್ ನೀಡಿರುವ
ಪ್ರತಿಕ್ರಿಯೆ ಕೂಡ ಜಾಲತಾಣಗಳಲ್ಲಿ ಸೂಪರ್ ಹಿಟ್ ಆಗಿದೆ.
ರ್ಯಾಲಿಯಲ್ಲಿ ಸೂರ್ಯ ಎಂಬ ವ್ಯಕ್ತಿ “ಶಶಿ ತರೂರ್, ನನ್ನನ್ನು ಮದುವೆ ಆಗಿ’ ಎಂದು ಬರೆಯಲಾಗಿದ್ದ ಫಲಕ ಹಿಡಿದಿದ್ದರು. ನಿಯತಕಾಲಿಕೆಯೊಂದು ಟ್ವಿಟರ್ ಮೂಲಕ ಈ ಕುರಿತು ತರೂರ್ ಗಮನ ಸೆಳೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ತರೂರ್ “ಇವರು ತಿರುವನಂತಪುರಂನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡರೆ ಒಳ್ಳೆಯದಿತ್ತು’ ಎಂದಿದ್ದಾರೆ.
ಸೂರ್ಯ ತಾನೇಕೆ ಈ ಫಲಕ ಹಿಡಿದಿದ್ದೆ ಎಂದು ಟ್ವೀಟ್ ಮಾಡಿದ್ದಾರೆ. “ತರೂರ್ ಒಬ್ಬ ವಾಗ್ಮಿ, ವಿಚಾರ ಸ್ಪಷ್ಟತೆ ಇರುವವರು, ದೇಶದ ಒಳಿತಿಗಾಗಿ ಧ್ವನಿ ಎತ್ತುತ್ತಾರೆ.ನಕಲಿ ಜಾತ್ಯತೀತರು, ಉಗ್ರ ದೇಶಪ್ರೇಮಿಗಳೇ ತುಂಬಿರುವ ಈಗಿನ ಸಮಾಜದಲ್ಲಿ ಅವರೊಬ್ಬ ನಿಜವಾದ ಜಾತ್ಯತೀತ, ನೈಜ ದೇಶಪ್ರೇಮಿ. ಎಲ್ಲ ದಕ್ಕಿಂತಲೂ ಹೆಚ್ಚಾಗಿ ಸಂಸತ್ತಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಧ್ವನಿಎತ್ತಿದವರು’ ಎಂದಿದ್ದಾರೆ.