ವಿರಹ ಜ್ವಾಲೆಯಲ್ಲಿ ಭಸ್ಮವಾದ 5 ಲಕ್ಷ ರೂ.!
Team Udayavani, Apr 21, 2018, 3:38 AM IST
ಮಧ್ಯಪ್ರದೇಶದ ಹಣಕಾಸು ಸಂಸ್ಥೆಯೊಂದರಲ್ಲಿ ಕ್ಯಾಷಿಯರ್ ಆಗಿದ್ದ ಒಬ್ಟಾತ, ಸಂಸ್ಥೆಯಿಂದ 6.74 ಲಕ್ಷ ರೂ.ಗಳನ್ನು ಕದ್ದೊಯ್ದಿದ್ದ. ಆತನ ಬೆನ್ನು ಬಿದ್ದಿದ್ದ ಪೊಲೀಸರು ಆತನನ್ನು ಬಂಧಿಸುವಲ್ಲಿ ಸಫಲರಾದರೂ ಕೇವಲ 1.74 ಲಕ್ಷ ರೂ.ಗಳನ್ನಷ್ಟೇ ವಶಪಡಿಸಿಕೊಂಡಿದ್ದಾರೆ. ಆದರೆ, ಉಳಿದ 5 ಲಕ್ಷ ರೂ. ಏನಾಯ್ತು ಎಂದು ಕೇಳಿದಾಗ ಆತ ಹೇಳಿದ ಲವ್ ಸ್ಟೋರಿ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ! ಆತನ ಹೆಸರು ಜಿತೇಂದ್ರ ಗೋಯೆಲ್. 22 ವರ್ಷ ವಯಸ್ಸಿನ ಈ ಯುವಕ, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನಂತೆ. ಇದೊಂದು ಒನ್ ವೇ ಲವ್. ಆಕೆಯನ್ನು ಒಲಿಸಿಕೊಂಡು ಮದುವೆಯಾಗಲು ಆತನಲ್ಲಿ ಹಣ ಇರಲಿಲ್ಲ. ಅದಕ್ಕಾಗಿ ತಾನು ದುಡಿಯುತ್ತಿದ್ದ ಕಂಪನಿಯಲ್ಲಿ ಹಣ ಕದ್ದುಕೊಂಡು ಹೋಗಿದ್ದನಂತೆ. ಆದರೆ, ಹುಡುಗಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ.
ಹುಡುಗಿಯೇ ಸಿಗದ ಮೇಲೆ, ಆಕೆಗಾಗಿ ತಂದಿದ್ದ ದುಡ್ಡು ಬೇಕಿಲ್ಲ ಎನಿಸಿ, ಇದ್ದ ಹಣದಲ್ಲಿ 5 ಲಕ್ಷ ರೂ. ಮೊತ್ತವನ್ನು ಬೆಂಕಿ ಹಚ್ಚಿ ಸುಟ್ಟಿದ್ದಾನೆ! ಅಂತೂ ಇಂತೂ ಈ ಭಗ್ನ ಪ್ರೇಮಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.