ಅಕ್ರಮ ಶಸ್ತ್ರಾಸ್ತ್ರ ಕೇಸ್;ಖಾನ್ ಗೆ ಬಿಗ್ ರಿಲೀಫ್, ಜೈಲುಶಿಕ್ಷೆ ಇಲ್ಲ
Team Udayavani, Jan 18, 2017, 11:52 AM IST
ಜೋಧಪುರ: 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ನಿರ್ದೋಷಿ ಎಂದು ರಾಜಸ್ತಾನದ ಜೋಧಪುರದ ಸಿಜೆಎಂ ಕೋರ್ಟ್ ಬುಧವಾರ ತೀರ್ಪು ಪ್ರಕಟಿಸುವ ಮೂಲಕ ಸಲ್ಮಾನ್ ಖಾನ್ ಜೈಲು ಶಿಕ್ಷೆಯಿಂದ ಬಚಾವ್ ಆಗಿದ್ದು, ಸದ್ಯ ರಿಲೀಫ್ ಸಿಕ್ಕಂತಾಗಿದೆ.
ಪ್ರಕರಣದ ತೀರ್ಪು ಪ್ರಕಟಿಸುವ ಮುನ್ನ ಸಲ್ಮಾನ್ ಖಾನ್ ಕೋರ್ಟ್ ನಲ್ಲಿ ಹಾಜರಿರಬೇಕೆಂದು ಕೋರ್ಟ್ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಕೋರ್ಟ್ ಗೆ ಹಾಜರಾಗಿದ್ದರು. ಬಳಿಕ ನ್ಯಾಯಾಧೀಶರು ಕೇವಲ 10 ಸೆಕೆಂಡ್ ಗಳಲ್ಲಿ ತೀರ್ಪನ್ನು ಪ್ರಕಟಿಸಿದರು.
ಸುಮಾರು 18 ವರ್ಷಗಳ ಅಕ್ರಮ ಶಸ್ತ್ರಾಸ್ತ್ರ ಬಳಸಿದ ಆರೋಪದ ಪ್ರಕರಣದಲ್ಲಿ ಸಲ್ಮಾನ್ ಖಾನ್ ನಿರ್ದೋಷಿ ಎಂದಿರುವ ನ್ಯಾಯಾಧೀಶ ದಲ್ಪತ್ ಸಿಂಗ್ ರಾಜ್ ಪುರೋಹಿತ್ ತೀರ್ಪು ನೀಡಿ, ಬೆನಿಫಿಟ್ ಆಫ್ ಡೌಟ್(ಸಾಕ್ಷ್ಯಾಧಾರದ ಕೊರತೆ) ಆಧಾರದ ಮೇಲೆ ಖುಲಾಸೆಗೊಳಿಸಿರುವುದಾಗಿ ತಿಳಿಸಿದ್ದಾರೆ.
1998ರ ಅ.1ರಂದು “ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಅವರು ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಬೇಟೆಯಾಡಿದ್ದರು ಎಂದು ಆರೋಪಿಸಲಾಗಿತ್ತು. ಬೇಟೆ ಪ್ರಕರಣದಲ್ಲಿ ಸಲ್ಮಾನ್ ಸೇರಿದಂತೆ ಸಹ ನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ನೀಲಂ ಹಾಗೂ ತಬು ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಅಲ್ಲದೇ ಈ ಬೇಟೆಗೆ ಅಕ್ರಮ ಶಸ್ತ್ರಾಸ್ತ್ರ ಬಳಸಿದ ಆರೋಪವೂ ಸಲ್ಮಾನ್ ಖಾನ್ ಮೇಲಿದ್ದು, ಅಕ್ರಮ ಶಸ್ತ್ರಾಸ್ತ್ರ ಕುರಿತ ತೀರ್ಪು ನ್ನು ಪ್ರಕಟಿಸಿದೆ.