ಲಂಡನ್ ಶೇರು ಮಾರುಕಟ್ಟೆಯಿಂದ ವೇದಾಂತ ಡೀಲಿಸ್ಟ್ಗೆ ಆಗ್ರಹ
Team Udayavani, May 26, 2018, 3:27 PM IST
ಲಂಡನ್: ತಮಿಳು ನಾಡಿನ ತೂತುಕುಡಿಯಲ್ಲಿ ಈಚೆಗೆ ವೇದಾಂತ ಕಂಪೆನಿ ವಿರುದ್ಧ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 13 ಅಮಾಯಕ ಜೀವಗಳು ಬಲಿಯಾಗಿರುವ ಕಾರಣ, ವೇದಾಂತ ಕಂಪೆನಿಯನ್ನು ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಿಂದ ‘ಡೀಲಿಸ್ಟ್’ ಮಾಡಬೇಕು ಎಂದು ಬ್ರಿಟನ್ನ ವಿರೋಧ ಪಕ್ಷವಾಗಿರುವ ಲೇಬರ್ ಪಾರ್ಟಿ ಒತ್ತಾಯಿಸಿದೆ.
ಬ್ರಿಟನ್ನ ಛಾಯಾ ಚಾನ್ಸ್ಲರ್ ಆಗಿರುವ ಜಾನ್ ಮೆಕ್ಡೊನೆಲ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ “ಕಳೆದ ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಈ ಪುಂಡು ಕಂಪೆನಿಯಿಂದ (ವೇದಾಂತ) ಲಂಡನ್ ಹಣಕಾಸು ಮಾರುಕಟ್ಟೆಯ ಪ್ರತಿಷ್ಠೆಗೆ ಆಗುವ ಹಾನಿಯನ್ನು ತಡೆಯಲು ಅದನ್ನು ಶೇರು ಮಾರುಕಟ್ಟೆಯ ವಹಿವಾಟು ಪಟ್ಟಿಯಿಂದ ಕಿತ್ತು ಹಾಕುವುದೇ ಲೇಸು’ ಎಂದು ಹೇಳಿದರು.