ಜೆಟ್ ಏರ್ ವೇಸ್ಗೆ ಮರು ಜೀವ: ಪಿಎಂಓನಿಂದ ಟಾಟಾ ಮನ ಒಲಿಕೆ
Team Udayavani, Nov 16, 2018, 5:23 PM IST
ಹೊಸದಿಲ್ಲಿ : ತೀವ್ರ ಸಾಲದ ಹೊರೆಯಿಂದ ನಲುಗುತ್ತಿರುವ ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಗೆ ಮರು ಜೀವ ನೀಡುವ ದಿಶೆಯಲ್ಲಿ ಪ್ರಧಾನಿ ಕಾರ್ಯಾಲಯ ಟಾಟಾ ಸನ್ಸ್ ಲಿಮಿಟೆಡ್ ಕಂಪೆನಿಯ ಮನ ಒಲಿಕೆ ಮಾಡುತ್ತಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಭಾರತೀಯ ವಿಮಾನ ಯಾನ ರಂಗದಲ್ಲಿ ಎರಡನೇ ಅತೀ ದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿರುವ ಜೆಟ್ ಏರ್ ವೇಸ್ ಅಗಾಧ ಪ್ರಮಾಣದ ಸಾಲದ ಹೊರೆಗೆ ಕುಸಿಯುತ್ತಿರುವುದಾಗಿ ವರದಿಗಳು ತಿಳಿಸಿವೆ.
ಜೆಟ್ ಏರ್ ವೇಸ್ ಸಂಸ್ಥೆಯನ್ನು ಪಾರುಗೊಳಿಸುವ ಮಾರ್ಗೋಪಾಯಗಳನ್ನು ಅರಸುವಂತೆ ಪ್ರಧಾನಿ ಕಾರ್ಯಾಲಯ ಟಾಟಾ ಸನ್ಸ್ ಕಂಪೆನಿಯಯನ್ನು ಕೇಳಿಕೊಂಡಿರುವುದಾಗಿ ವರದಿಯಾಗಿದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಜೆಟ್ ಏರ್ ವೇಸ್ನಿಂದ ತನಗೆ ಸಂದಾಯವಾಗಬೇಕಿರುವ ಸಾಲ ಬಾಧ್ಯತೆಗಳನ್ನು ಬಿಟುಕೊಡಲು ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ.
ಜೆಟ್ ಏರ್ ವೇಸ್ ಕಂಪೆನಿಯಲ್ಲಿ ನರೇಶ್ ಗೋಯಲ್ ಮತ್ತು ಅವರ ಕುಟುಂಬದವರ ಶೇ.51 ಪಾಲಿದೆ; ಕೊಲ್ಲಿಯ ಎತಿಹಾದ್ ಏರ್ ವೇಸ್ಗೆ ಶೇ.24ರ ಪಾಲಿದೆ. ಈ ವಾರದ ಆದಿಯಲ್ಲಿ ಜೆಟ್ ಏರ್ ವೇಸ್ ಜುಲೈ-ಸೆಪ್ಟಂಬರ್ ತ್ತೈಮಾಸಿಕದಲ್ಲಿ 1,261 ಕೋಟಿ ರೂ. ನಷ್ಟವನ್ನು ಪ್ರಕಟಿಸಿತ್ತು.