ಡಿಸಿ ನಿವಾಸದ ಬಳಿಯ ಬಾವಲಿ ನಿಯಂತ್ರಣಕ್ಕೆ ಚಿಂತನೆ
Team Udayavani, May 25, 2018, 4:17 PM IST
ಚಿಕ್ಕಮಗಳೂರು: ನಿಫಾ ವೈರಸ್ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಆಧರಿಸಿ ಜಿಲ್ಲಾಧಿಕಾರಿಗಳ ನಿವಾಸದ ಸುತ್ತಮುತ್ತಲಿನ ಮರದಲ್ಲಿರುವ ಬಾವಲಿಗಳ ಸ್ಥಳಾಂತರ ಅಥವಾ ನಿಯಂತ್ರಣದ ಬಗ್ಗೆ ಆಲೋಚಿಸಲಾಗುವುದೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಫಾ ಸೂಕ್ಷ್ಮಾಣುಗಳು ಬಾವಲಿಗಳ ಮೂಲಕವೂ ಸೋಂಕನ್ನು ಹರಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಸಾಕಷ್ಟು ಪ್ರಮಾಣದಲ್ಲಿ ಬಾವಲಿಗಳು ಜಿಲ್ಲಾಧಿಕಾರಿ ನಿವಾಸದ ಸುತ್ತಲಲ್ಲಿರುವ ಮರಗಳಲ್ಲಿ ಆಶ್ರಯ ಪಡೆದಿದ್ದು, ಅವುಗಳಿಂದ ಈ ಸೋಂಕು ಹರಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ
ಕೈಗೊಳ್ಳಬೇಕಾಗಿದೆ ಎಂದರು.
ಮನುಷ್ಯನ ಆರೋಗ್ಯ ರಕ್ಷಣೆ ಬಗ್ಗೆ ಜಿಲ್ಲಾಡಳಿತ ಆಲೋಚಿಸಲೇಬೇಕು. ಈಗಾಗಲೇ ಈ ವೈರಸ್ ಸೋಂಕು ಕೇರಳದಿಂದ ಮಂಗಳೂರಿಗೂ ಬಂದಿದೆ ಎಂದು ವರದಿಯಾಗಿದೆ. ಆ ಹಿನ್ನೆಲೆಯಲ್ಲಿ ಅದು ಈ ಜಿಲ್ಲೆಗೂ ಕಾಲಿಡುವ ಶಂಕೆಗಳಿವೆ. ಹಾಗಾಗಿ ಬಾವಲಿ ಸಹ ಈ ಸೂಕ್ಷ್ಮಾಣುಗಳನ್ನು ಹೊತ್ತು ತರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿರುವ ಬಾವಲಿಗಳಿಂದ ಈ ಸೋಂಕು ಹರಡದಂತೆ ಆಲೋಚಿಸಬೇಕಾಗಿದೆ ಎಂದು ವಿವರಿಸಿದರು.
ನಿವಾಸ ಸೇರಿದಂತೆ ಸುತ್ತಲಲ್ಲಿರುವ ಮರಗಳನ್ನು ಕಡಿದು ಹಾಕುವುದರಿಂದ ಈ ಬಾವಲಿ ನಿಯಂತ್ರಿಸಲು ಸಾಧ್ಯವಿಲ್ಲ. ಅವು ಮತ್ತೂಂದು ಕಡೆ ಹೋಗಿ ಮರಗಳಲ್ಲಿ ಆಶ್ರಯ ಪಡೆಯಬಹುದು. ಅವುಗಳನ್ನು ಹಿಡಿದು ಕೊಲ್ಲುವುದು
ಸಾಕಷ್ಟು ಕಷ್ಟದ ಕೆಲಸ. ಹಾಗಾಗಿ ಯಾವ ರೀತಿ ಈ ಬಾವಲಿಗಳಿಂದ ನಿಫಾ ವೈರಸ್ ಸೋಂಕು ಹರಡದಂತೆ ಮಾಡಬಹುದೆಂಬ ಆಲೋಚನೆ ಮಾಡಲು ವೈದ್ಯರಿಗೆ ತಿಳಿಸಿದ್ದು, ಈ ಸಂಬಂಧ ತಜ್ಞರ ಸಲಹೆ ಪಡೆಯಲು ಸೂಚಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿಫಾ ವೈರಸ್ ಸೋಂಕು ಈ ಜಿಲ್ಲೆಯಲ್ಲಿ ಹರಡದಂತೆ ಮುಂಜಾಗ್ರತೆ ಕ್ರಮ ಹಾಗೂ ಜನರಲ್ಲಿ ಬಾವಲಿಗಳು ತಿಂದು ಬಿಟ್ಟ ಹಣ್ಣನ್ನು ಸೇವಿಸದಂತೆ ಹಾಗೂ ಹಂದಿಗಳಿಂದಲೂ ಈ ಸೋಂಕು
ಹರಡುವ ಅಪಾಯವಿರುವುದರಿಂದ ಅವುಗಳ ನಿಯಂತ್ರಣದ ಬಗ್ಗೆ ಸಹ ಯೋಚಿಸಬೇಕಾಗಿದೆ. ಹಂದಿಗಳನ್ನಾದರೆ
ಅವುಗಳನ್ನು ಸಾಕಣೆ ಮಾಡುವವರಿಗೆ ಹೊರಗೆ ಬಿಡದಂತೆ ಸೂಚಿಸಬಹುದು. ಆದರೆ ಬಾವಲಿಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ ಎಂದು ತಿಳಿಸಿದರು.
ತಜ್ಞರ ಹೇಳಿಕೆಯಂತೆ ಜಿಲ್ಲಾಧಿಕಾರಿಗಳ ನಿವಾಸ ಹಾಗೂ ಸುತ್ತಲಲ್ಲಿರುವ ಬಾವಲಿಗಳು ಹಣ್ಣನ್ನು ಅರಸುವ ಬಾವಲಿಗಳಾಗಿದ್ದು, ಹಲವು ಶತಮಾನದಿಂದ ಈ ಸ್ಥಳದಲ್ಲಿರುವ ಮರಗಳಲ್ಲಿ ಆಶ್ರಯ ಪಡೆದಿವೆ. ಮಾನವ ಚಟುವಟಿಕೆಗಳಿಂದ ಬಾವಲಿಗಳ ನೈಸರ್ಗಿಕ ಆವಾಸ ಸ್ಥಾನಗಳು ನಾಶವಾಗುತ್ತಾ ಬಂದಿವೆ. ಇದರಿಂದ ಅವುಗಳಿಗೆ
ಆಹಾರ ದೊರಕಿಸಿಕೊಳ್ಳಲು ಕಷ್ಟವಾಗುತ್ತಿದೆ. ಒತ್ತಡ ಹಾಗೂ ಹಸಿವಿಗೆ ಒಳಗಾಗಿರುವ ಬಾವಲಿಗಳ ದೇಹದಲ್ಲಿ ರೋಗ ಬಾತ ವ್ಯವಸ್ಥೆ ಕ್ಷೀಣಿಸಿದ್ದು, ನಿಫಾ ಸೂಕ್ಷ್ಮಾಣುಗಳು ಅವುಗಳ ದೇಹದಲ್ಲಿ ಆಶ್ರಯ ಪಡೆಯಲು ಪೂರಕವಾಗುತ್ತಿದೆ. ಒಮ್ಮೆ ಈ ಸೂಕ್ಷ್ಮಾಣುಗಳು ಅವುಗಳ ದೇಹವನ್ನು ಹೊಕ್ಕು ಬೆಳೆದರೆ ಬಾವಲಿಗಳ ಮೂತ್ರ, ಎಂಜಲುಗಳಲ್ಲೂ ಸೇರಿಕೊಂಡು ಅವುಗಳ ಸಂಪರ್ಕಕ್ಕೆ ಮನುಷ್ಯ ಬಂದಾಗ ಈ ರೋಗ ಹರಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಒಂದು ಪಕ್ಷ ಇಲ್ಲಿ ವಾಸಿಸುತ್ತಿರುವ ಬಾವಲಿಗಳನ್ನು ಯಾವುದೇ ರೀತಿಯಲ್ಲಿ ಬೇರೆ ಕಡೆಗೆ ಓಡಿಸಿದರೂ ಅದು ಇನ್ನಷ್ಟು ಪರಿಸರ ಸಮಸ್ಯೆಗಳನ್ನು ಸೃಷ್ಟಿ ಮಾಡುವುದೇ ಹೊರತು, ನಿಫಾ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಅವುಗಳ ಸಾಮೂಹಿಕ ನಾಶದಿಂದಲೂ ಬೇರೆ ರೀತಿಯ ಪರಿಸರ ಸಮಸ್ಯೆಗಳು ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಹೆಚ್ಚಾಗಿ ಕಾಡುವ ನಿಫಾ ಸೋಂಕನ್ನು ತಡೆಗಟ್ಟಲು ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ ಎಂದು ತಜ್ಞರು ಹೇಳುತ್ತಾರೆ ಎಂದರು.
ಆಗ್ರಹ: ನಗರ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕು ಕೇಂದ್ರಗಳಲ್ಲಿ ಬಿಡಾಡಿ ಹಂದಿಗಳ ಕಾಟ ಸಾಮಾನ್ಯವಾಗಿದೆ. ನಿಫಾ ಸೋಂಕು ಹಂದಿಗಳಿಂದಲೂ ಹರಡಬಹುದೆಂದು ಹೇಳುತ್ತಿರುವ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣದ ಬಗ್ಗೆ ಜಿಲ್ಲಾಡಳಿತ ಆಲೋಚಿಸಬೇಕೆಂದು ಸಾರ್ವಜನಿಕರು ಹೇಳಿದ್ದಾರೆ.
ನಗರದಲ್ಲಿ ಹಂದಿಗಳ ಕಾಟ ಬಹುತೇಕ ಎಲ್ಲಾ ಬಡಾವಣೆಗಳಲ್ಲೂ ಸಾಕಷ್ಟಿವೆ. ಹಂದಿ ಸಾಕಣೆದಾರರು ಅವುಗಳನ್ನು ತಮ್ಮ ಮನೆಯಲ್ಲೆ ಅದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿ ಸಾಕುವುದಿಲ್ಲ. ಅವುಗಳನ್ನು ಹೊರಗೆ ಓಡಾಡಲು ಬಿಟ್ಟು ತಮಗೆ ಬೇಕಾದಾಗ ಅವುಗಳನ್ನು ಹಿಡಿದು ಮಾಂಸ ಮಾರಾಟಕ್ಕಾಗಿ ವಧಿಸಲಾಗುತ್ತದೆ. ಜಿಲ್ಲಾಡಳಿತ ಹಂದಿ ಸಾಕಣೆದಾರರಿಗೂ ಸೂಕ್ತ ತಿಳುವಳಿಕೆ ನೀಡಿ ನಿಫಾ ಸೋಂಕಿನ ಹಾವಳಿ ಕಡಿಮೆಯಾಗುವವರೆಗಾದರೂ ಅವುಗಳು ಬೀದಿ ಬೀದಿಗಳಲ್ಲಿ ಓಡಾಡದಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ