ಹೊತ್ತಿ ಉರಿದ ತೈಲ ಟ್ಯಾಂಕರ್
Team Udayavani, Jun 20, 2018, 11:09 AM IST
ಅಜ್ಜಂಪುರ/ಕಡೂರು: ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿದಿದ್ದಲ್ಲದೆ ಈ ಬೆಂಕಿ ರಸ್ತೆ ಪಕ್ಕದಲ್ಲಿದ್ದ ನಾಲ್ಕಾರು ಮನೆಗಳಿಗೂ ವ್ಯಾಪಿಸಿ ಅಪಾರ ನಷ್ಟವಾದ ಭಾರೀ ಅನಾಹುತ ಅಜ್ಜಂಪುರ ತಾಲೂಕಿಗೆ ಸೇರಿದ ಗಿರಿಯಾಪುರದಲ್ಲಿ ಸಂಭವಿಸಿದೆ.
ಅವಘಡದಲ್ಲಿ ಟ್ಯಾಂಕರ್ ಕೀನ್ಲರ್ ಸಜೀವವಾಗಿ ದಹನಗೊಂಡಿದ್ದು, ತೀವ್ರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸತತ ನಾಲ್ಕು ಗಂಟೆ ಕಾರ್ಯಾಚರಣೆ ಕೈಗೊಂಡರೂ ಬೆಂಕಿ ತಹಬದಿಗೆ ತರಲು ಸಾಧ್ಯವಾಗಿರಲಿಲ್ಲ.
ಆಗಿದ್ದೇನು: ಹಾಸನದಿಂದ ಹೊಸದುರ್ಗಕ್ಕೆ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಗಿರಿಯಾಪುರದ ಬಸ್ ನಿಲ್ದಾಣದ ಪಕ್ಕದಲ್ಲೇ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಯಲ್ಲಿ ಉರುಳಿ ಬಿದ್ದಿದೆ. ಪಲ್ಟಿಯಾದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಟ್ಯಾಂಕರ್ ಒಳಗಿದ್ದ ತೈಲಕ್ಕೆ ಬೆಂಕಿ ಆವರಿಸಿದ್ದು ಟ್ಯಾಂಕರ್ ಧಗಧಗನೆ ಹೊತ್ತಿ ಉರಿದಿದೆ. ಟ್ಯಾಂಕರ್ ಪಲ್ಟಿಯಾಗುತ್ತಲೆ ಆದ ಶಬ್ದಕ್ಕೆ ಜನ ಮನೆಯಿಂದ ಹೊರಬಂದಿದ್ದಾರೆ. ಜೋರಾದ ಬೆಂಕಿಯ ಜ್ವಾಲೆ ಕಂಡು ಕಂಗಾಲಾಗಿದ್ದಾರೆ. ಬೆಂಕಿ ಆರಿಸಲು ಮುಂದಾದ ಜನರ ಪ್ರಯತ್ನ ಫಲಕೊಟ್ಟಿಲ್ಲ.
ಉರಿಯುವ ಸ್ಥಿತಿಯಲ್ಲೇ ಲಾರಿಯಿಂದ ಹಾರಿದ:
ಟ್ಯಾಂಕರ್ ರಸ್ತೆಯ ಎಡ ಭಾಗಕ್ಕೆ ಪಲ್ಟಿಯಾದ ಕಾರಣ ಕ್ಲೀನರ್ ಹೊರಬರಲಾರದೆ ಟ್ಯಾಂಕರ್ ನಲ್ಲಿಯೇ ಸಜೀವ ದಹನವಾಗಿರದೆಂಬ ಶಂಕೆ ಇದೆ. ಬೆಂಕಿಯ ಜ್ವಾಲೆಗೆ ಸಿಲುಕಿದ ಚಾಲಕ ದಾವಣಗೆರೆಯ ದಾದಾಫೀರ್ ಲಾರಿಯ ಬಾಗಿಲು ತೆರೆದು ಉರಿಯುವ ಸ್ಥಿತಿಯಲ್ಲಿಯೇ ಹೊರಗೆ ಹಾರಿದ್ದಾನೆ. ಕೂಡಲೇ ಗ್ರಾಮಸ್ಥರು ಆತನ ಮೈಗೆ ತಾಗಿದ್ದ ಬೆಂಕಿ ಆರಿಸಿ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ. 80ರಷ್ಟು ಸುಟ್ಟಗಾಯಗಳಾದ ಈತನನ್ನು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಚಾಲಕ ಮಾತ್ರ ಪತ್ತೆಯಾಗಿದ್ದು ಟ್ಯಾಂಕರ್ನಲ್ಲಿ ಕೀನ್ಲರ್ ಸಹ ಇದ್ದ ಎನ್ನಲಾಗುತ್ತಿದ್ದರೂ ಆತ ಏನಾದ ಎಂಬುದು ಇನ್ನೂ ತಿಳಿದುಬಂದಿಲ್ಲ.
ಮನೆಗಳಿಗೆ ಹಬ್ಬಿದ ಬೆಂಕಿ: ಬೆಂಕಿಯ ಕೆನ್ನಾಲೆಗೆ ಟ್ಯಾಂಕರ್ನಲ್ಲಿದ ತೈಲಕ್ಕೆ ತಗುಲಿದ ಬೆಂಕಿ ಕೆಲವೇ ಕ್ಷಣದಲ್ಲಿ ಅಕ್ಕ-ಪಕ್ಕಕ್ಕೆ ಹರಡಿದೆ. ಒಟ್ಟೂ ಆರು ಮನೆಗಳಿಗೆ ಬೆಂಕಿ ತಾಗಿದ್ದು, ಅದರಲ್ಲಿ ನಿವೃತ್ತ ಶಿಕ್ಷಕರಾದ ಗುರುಶಾಂತಪ್ಪ ಮತ್ತು
ಮೃತ್ಯುಂಜಯಪ್ಪ ಅವರ ಮನೆಗಳು ಸಂಪೂರ್ಣ ಭಸ್ಮಗೊಂಡಿದೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ
ಯಾವುದೇ ಪ್ರಾಣಹಾನಿಯಾಗಲಿಲ್ಲ. ಇದಲ್ಲದೆ ಗ್ರಾಮ ಪಂಚಾಯತಿಗೆ ಸೇರಿದ ಎರಡು ವಾಣಿಜ್ಯ ಮಳಿಗೆಗಳು, ಚಿದಾನಂದಪ್ಪ ಎಂಬುವವರಿಗೆ ಸೇರಿದ ಪೆಟ್ಟಿಗೆ ಅಂಗಡಿ ಹಾಗೂ ಬಸ್ ಶೆಲ್ಟರ್ ಸಂಪೂರ್ಣ ಹಾಳಾಗಿವೆ.
ಬೆಂಕಿ ಆರಿಸಲು ಹರಸಾಹಸ: ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು, ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಕಡೂರು, ತರೀಕೆರೆ, ಚಿಕ್ಕಮಗಳೂರು, ಹೊಸದುರ್ಗದಿಂದ ಆಗಮಿಸಿದ ಅಗ್ನಿಶಾಮಕ ದಳದ 150ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬೆಂಕಿ ಆರಿಸಲು ಸಿಬ್ಬಂದಿಗೆ ಗ್ರಾಮಸ್ಥರು ಸಾಥ್ ನೀಡಿದರು. ಇದಲ್ಲದೆ ತರೀಕೆರೆ, ಕಡೂರು, ಬೀರೂರು, ಅಜ್ಜಂಪುರ, ಯಗಟಿ ಹಾಗೂ ಚಿಕ್ಕಮಗಳೂರಿನ ಮೀಸಲು ಸಶಸ್ತ್ರಪಡೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಶಿವಮೊಗ್ಗ ಪೊಲೀಸ್ ಮುಖ್ಯಾಧಿಕಾರಿ ಅಭಿನವ ಖರೆ, ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಗೀತಾ, ತರೀಕೆರೆ ಸರ್ಕಲ್ ಇನ್ಸ್ ಪೆಕ್ಟರ್ ರಾಮಚಂದ್ರನಾಯಕ್, ಕಡೂರು ಪೊಲೀಸ್ ಠಾಣಾಧಿಕಾರಿ ಸಿ.ರಾಕೇಶ್, ಯಗಟಿ ಠಾಣಾಧಿಕಾರಿ ವಿಶ್ವನಾಥ್ ಹಾಜರಿದ್ದು ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡರು.
ಸ್ಥಳಕ್ಕೆ ಸಿರಿಗೆರೆ ತರಳಬಾಳು ಸಾಣೆಹಳ್ಳಿ ಶಾಖಾ ಮಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ,
ಶಾಸಕ ಬೆಳ್ಳಿಪ್ರಕಾಶ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಗೀತಾ, ಉಪವಿಭಾಗಾಧಿಕಾರಿ ಬಿ.ಬಿ. ಸರೋಜ, ತರೀಕೆರೆ ಡಿವೈಎಸ್ಪಿ ರವೀಂದ್ರನಾಥ, ತರೀಕೆರೆ ವೃತ್ತ ನಿರೀಕ್ಷಕ ರಾಮಚಂದ್ರನಾಯಕ್, ಕಡೂರು ಆರಕ್ಷಕ ಉಪ ನಿರೀಕ್ಷಕ ಸಿ. ರಾಕೇಶ್, ಜಿಲ್ಲಾ ಪಂಚಾಯತಿ ಸದಸ್ಯ ಮಹೇಶ್ಒಡೆಯರ್, ತಾಲೂಕು ಪಂಚಾಯತಿ ಅಧ್ಯಕ್ಷೆ ರೇಣುಕಾ ಉಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ|ಎಸ್.ಕೆ. ಪ್ರಭು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಅನಾಹುತದಲ್ಲಿ ಈವರೆಗೂ ಒಂದು ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮತ್ತೂಂದು ಶೇ 50 ರಷ್ಟು
ಆಹುತಿಯಾಗಿದ್ದರೆ 3-4 ಮನೆಗಳ ಕಾಂಪೌಂಡ್ಗಳಿಗೆ ಬೆಂಕಿ ಆವರಿಸಿದೆ. ಟ್ಯಾಂಕರ್ನಲ್ಲಿ ಚಾಲಕನೊಂದಿಗೆ ಕ್ಲೀನರ್ ಕೂಡ ಇದ್ದ ಎಂದು ಕೆಲವರು ಹೇಳುತ್ತಿದ್ದಾರೆ. ಟ್ಯಾಂಕರ್ ಮಗುಚಿ ಬಿದ್ದಿದ್ದು, ಅದನ್ನು ಎತ್ತುವವರೆಗೂ ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹಾಸನದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅವರಿಗೆ ಸ್ಥಳಕ್ಕೆ ಬರಲು ತಿಳಿಸಲಾಗಿದೆ. ಅವರು ಬಂದ ನಂತರ ಟ್ಯಾಂಕರ್ನ್ನು ಮೇಲೆತ್ತಲಾಗುವುದು. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.
ಎಂ.ಕೆ. ಶ್ರೀರಂಗಯ್ಯ ,ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ