ಎಲ್ಲರಿಗೂ ಕಾನೂನು ಅರಿವು ಅಗತ್ಯ
Team Udayavani, Aug 10, 2018, 12:32 PM IST
ತಿ.ನರಸೀಪುರ: ನಮ್ಮ ದೈನಂದಿನ ಬದುಕಿನಲ್ಲಿ ಪ್ರತಿ ಹಂತದಲ್ಲೂ ಕಾನೂನು ಅನ್ವಯವಾಗುವುದರಿಂದ ಕಾನೂನಿನ ಬಗ್ಗೆ ಅರಿವು ಪಡೆದುಕೊಳ್ಳುವುದು ಅಗತ್ಯದೆ ಎಂದು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಎ.ನಾಗಿರೆಡ್ಡಿ ಹೇಳಿದರು.
ತಾಲೂಕಿನ ಹುಣಸೂರು ಗ್ರಾಮದ ಸಿದ್ದಪ್ಪಾಜಿ ದೇವಾಲಯ ಆವರಣದಲ್ಲಿ ಕಾನೂನು ಸೇವೆಗಳ ಸಮಿತಿ, ಮಹಿಳಾ ಕಲ್ಯಾಣ, ಪೊಲೀಸ್ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಪಾತ್ರ: ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ. ಭ್ರೂಣಾವಸ್ಥೆಯಲ್ಲಿರುವ ಮಗುವಿನ ರಕ್ಷಣೆಯಿಂದ ಶುರುವಾಗುವ ಕಾನೂನಿನ ಪಾತ್ರ, ವ್ಯಕ್ತಿ ಸತ್ತ ನಂತರವೂ ಆತನ ಅಂತ್ಯ ಸಂಸ್ಕಾರ ಹಾಗೂ ಆತ ಹೊಂದಿರುವ ಆಸ್ತಿ ಪರಭಾರೆ, ಹಂಚಿಕೆಯ ಮೇಲೂ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನಿನ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾಯ್ದೆ: ಬಾಲ್ಯ ವಿವಾಹ ಪದ್ಧತಿ ವಿರುದ್ಧ ಕಾಯ್ದೆ, ಬಾಲ ಕಾರ್ಮಿಕರು, ಶಿಕ್ಷಣ ಹಕ್ಕು, ಕೌಟುಂಬಿಕ ದೌರ್ಜನ್ಯ ಕಾಯ್ದೆ, ವಾಹನ ಚಾಲನೆಗೆ ಅಗತ್ಯ ವಯೋಮಾನ, ವಿವಾಹ ವಯೋಮಾನ ಸೇರಿದಂತೆ ಹತ್ತು ಹಲವು ಕಾನೂನು ನಮ್ಮ ಬದುಕಿನ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು. ಬಾಲವಿಕಾಸ ಯೋಜನಾಧಿಕಾರಿ ಬಸವರಾಜು ಮಾತನಾಡಿ, ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡಿದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ರಾಜು, ವಕೀಲೆ ನಾಗಮ್ಮ ಮಹಿಳಾ ದೌರ್ಜನ್ಯ ಕಾಯ್ದೆ ಬಗ್ಗೆ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ರವಿಶಂಕರ್, ವಕೀಲರಾದ ಶಂಭುಲಿಂಗಸ್ವಾಮಿ, ಶಾಂತನಾಗರಾಜು, ಜಯರಾಂ, ಪಿ.ಸತೀಶ್, ಜಗದೀಶ್, ಎಂ.ಸುರೇಶ್, ಮಾದಪ್ಪ, ಹುಣಸೂರು ಬಸವಣ್ಣ ಮೇಲ್ವಿಚಾರಕ ನಾರಾಯಣ್, ಆಶಾ ಮತ್ತಿತರರಿದ್ದರು.