ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹ
Team Udayavani, Feb 12, 2019, 9:39 AM IST
ಶೃಂಗೇರಿ: ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಮತ್ತು ಸಣ್ಣ ಉದ್ಯಮಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಹೇಳಿದರು. ಮೆಸ್ಕಾಂ ಕಚೇರಿಯಲ್ಲಿ ಸೋಮವಾರ ತಾಲೂಕಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮನವಿ ಸಲ್ಲಿಸಿ ಅವರು ಮಾತನಾಡಿದರು.
ತೋಟಗಾರಿಕೆ ಬೆಳೆಗಳಿಗೆ ಈಗ ನೀರು ಅಗತ್ಯವಾಗಿದ್ದು, ವಿದ್ಯುತ್ ಮೋಟಾರ್ನಿಂದ ತೋಟಗಳಿಗೆ ನೀರು ಒದಗಿಸಲು ಸಮರ್ಪಕ ವಿದ್ಯುತ್ ಪೂರೈಸಬೇಕು. ಕಳೆದ ಒಂದೂವರೆ ತಿಂಗಳಿಂದ ವಿದ್ಯುತ್ ಪೂರೈಕೆಯಲ್ಲಿ ತೀವ್ರ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೂರೈಕೆಯಾಗುತ್ತಿರುವ ವಿದ್ಯುತ್ ವೋಲ್ಟೇಜ್ನ ಏರುಪೇರುನಿಂದ ಮೋಟಾರ್ಗಳು ಸುಟ್ಟು ಹೋಗುತ್ತಿವೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ನೂತನ ವಿದ್ಯುತ್ ಮಾರ್ಗ ನಿರ್ಮಾಣಕ್ಕಾಗಿ ವಾರದಲ್ಲಿ ಮೂರು ದಿನ ವಿದ್ಯುತ್ ಸ್ಥಗಿತಗೊಳಿಸುತ್ತಿದ್ದು, ಇದನ್ನು ಒಂದು ದಿನಕ್ಕೆ ಇಳಿಸಬೇಕು. ಅಕ್ರಮ ಸಕ್ರಮ ಯೋಜನೆಯಡಿ ನಾಲ್ಕು ವರ್ಷದಿಂದ ರೈತರಿಂದ ಹಣ ಪಾವತಿಸಿಕೊಂಡಿರುವ ಮೆಸ್ಕಾಂ ವಿದ್ಯುತ್ ಸಂಪರ್ಕ ಮತ್ತು ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ ಎಂದು ಆರೋಪಿಸಿದರು.
ರೈತ ಮುಖಂಡ ಮೆಣಸೆ ಚನ್ನಕೇಶವ ಮಾತನಾಡಿ, ಪ್ರತಿ ದಿನ ಬೆಳಗ್ಗೆ 6ಕ್ಕೆ ವಿದ್ಯುತ್ ನಿಲುಗಡೆ ಮಾಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗೃಹಿಣಿಯರಿಗೆ ತೊಂದರೆಯಾಗುತ್ತಿದೆ. ಇದನ್ನು ಕನಿಷ್ಠ 8 ಗಂಟೆಯ ನಂತರವಷ್ಟೇ ವಿದ್ಯುತ್ ಕಡಿತ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್. ಮಂಜುನಾಥ್, ಚಿಕ್ಕಮಗಳೂರು-ಆಲ್ದೂರು-ಶೃಂಗೇರಿ ಮಾರ್ಗದ ವಿದ್ಯುತ್ ಮಾರ್ಗಕ್ಕೆ ನೂತನ ಟವರ್ ಗೋಪುರ ನಿರ್ಮಾಣ ಭರದಿಂದ ನಡೆದಿದೆ. ವಾರದಲ್ಲಿ ಮೂರು ದಿನ ಇದಕ್ಕಾಗಿ ವಿದ್ಯುತ್ ಕಡಿತ ಮಾಡುತ್ತಿದ್ದು, ಪ್ರತಿ ದಿನ 7 ಟವರ್ ನಿರ್ಮಾಣ ಮಾಡಿ ಲೈನ್ ಎಳೆಯಲಾಗುತ್ತಿದೆ. ಒಟ್ಟು 168 ಟವರ್ ನಿರ್ಮಾಣ ಕೈಗೊಳ್ಳಬೇಕಿದೆ. ಇದು ಪೂರ್ಣಗೊಂಡ ಕೂಡಲೇ ಸಮರ್ಪಕ ವಿದ್ಯುತ್ ವೋಲ್ಟೇಜ್ ದೊರಕಲಿದೆ. ಇದುವರೆಗೆ ಇದ್ದ ಸಮಸ್ಯೆಯೂ ಬಗೆಹರಿಯಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಏಪ್ರಿಲ್ ಒಳಗಾಗಿ ಕಾಮಗಾರಿ ಮುಗಿಯುವ ನಿರೀಕ್ಷೆಯಿದ್ದು, ಪ್ರತಿ ದಿನ 150ಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ ವಿದ್ಯುತ್ ಕಡಿತ ಮಾಡುವ ಅವಧಿಯನ್ನು 7:30 ರ ನಂತರ ಮಾಡುವ ಭರವಸೆ ನೀಡಿದರು.
ಮೆಸ್ಕಾಂ ಸಹಾಯಕ ಅಭಿಯಂತರ ಪ್ರಶಾಂತ ಕುಮಾರ್, ಜಿ. ವೀರಣ್ಣಗೌಡ, ರೈತ ಮುಖಂಡರಾದ ಗುಂಡಪ್ಪ, ಮೆಣಸೆ ಅನಂತಯ್ಯ, ಚಂದ್ರಪ್ಪ ಇತರರಿದ್ದರು.