ಸೌಹಾರ್ದತೆ-ಭಾವೈಕ್ಯತೆಗೆ ಸಾಕ್ಷಿಯಾದ ಶುಕ್ರವಾರ
Team Udayavani, Sep 22, 2018, 12:42 PM IST
ದಾವಣಗೆರೆ: ನಡು ಕರ್ನಾಟಕದ ಕೇಂದ್ರದ ದಾವಣಗೆರೆ ಶುಕ್ರವಾರ ಕೋಮುಸೌಹಾರ್ದ, ಸಾಮರಸ್ಯ, ಭಾವೈಕ್ಯತೆ ಪ್ರತೀಕಕ್ಕೆ ಸಾಕ್ಷಿಯಾಯಿತು. ಕಾಕತಾಳಿಯ ಎನ್ನುವಂತೆ ಒಂದೇ ದಿನ ವಿವಿಧಡೆ ಗಣೇಶ ಮೂರ್ತಿಗಳ ಮೆರವಣಿಗೆ
ಮತ್ತು ಸ್ವಾತಂತ್ರ್ಯಾ ಹಾಗೂ ಸಮಾನತೆ ಹೋರಾಟವನ್ನು ಸಾರುವ ಅಲ್ಪಸಂಖ್ಯಾತ ಬಾಂಧವರ ಮೊಹರಂನ 10ನೇ ದಿನದ ಮೆರವಣಿಗೆ ಶಾಂತಿಯುತ, ಸೌಹಾರ್ದತೆಯಿಂದ ಜರುಗಿದವು.
ವಿನೋಬ ನಗರದ 2ನೇ ಮುಖ್ಯ ರಸ್ತೆಯಲ್ಲಿನ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯನ್ನು ಅತ್ಯಂತ ಸಡಗರ, ಸಂಭ್ರಮ, ಹರ್ಷೋದ್ಘಾರದ ಮೆರವಣಿಗೆಗಿಂತಲೂ ಅತೀ ಮುಖ್ಯವಾಗಿ
ಶಾಂತಿಯುತವಾಗಿ ವಿಸರ್ಜಿಸಲಾಯಿತು.
ಇನ್ನೊಂದು ಕಡೆ ಸತ್ಯ, ನ್ಯಾಯಕ್ಕಾಗಿ ನಿರಂಕುಶ ದಬ್ಟಾಳಿಕೆಯ ವಿರುದ್ಧ ಧೀರತೆಯಿಂದ ಹೋರಾಡಿ, ಆತ್ಮಾರ್ಪಣೆಗೈದ ಹಜರತ್ ಇಮಾಂ ಹುಸೇನ್ರನ್ನು ಸ್ಮರಿಸುವ ಮತ್ತು ಜಾಗೃತಿಯ ಮೊಹರಂ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹಿಂದೂಗಳು ಸಹ ಪೀರಲ ದೇವರಿಗೆ ಭಕ್ತಿ ಸಮರ್ಪಿಸುವ ಮೂಲಕ ಭಾವೈಕ್ಯತೆ ಮೆರೆದರು.
ವಿನೋಬ ನಗರದ 2ನೇ ಮುಖ್ಯರಸ್ತೆಯಲ್ಲಿನ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ ಗಣೇಶಮೂರ್ತಿ ಮೆರವಣಿಗೆಗೆ ಮಹಾನಗರ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್, ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಸಮಿತಿ ಅಧ್ಯಕ್ಷ ಟಿ.ಎಂ. ಗುರುನಾಥ್ಬಾಬು, ಡಿ.ಕೆ. ರಮೇಶ್, ದೇವರಮನೆ ಶಿವಕುಮಾರ್, ಗಣೇಶ್ ದಾಸಕರಿಯಪ್ಪ, ಟಿ. ಗಣೇಶ್, ನಾಗರಾಜಗೌಡ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಚಾಲನೆ ನೀಡಿದರು.
ಅದ್ಧೂರಿ ಮತ್ತು ಚಿತ್ತಾಕರ್ಷಕದ ಗಣೇಶ ಮೂರ್ತಿಯ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ನೆರೆದಿದ್ದವರ
ಹರ್ಷೋದ್ಘಾರ ಮುಗಿಲು ಮುಟ್ಟಿತು. ಕಿವಿಗಡುಚಿಕ್ಕುವಂತೆ ಪಟಾಕಿ ಸಿಡಿಸಿ, ಗುಲಾಲ್ ಒಳಗೊಂಡಂತೆ ಬಣ್ಣ ಎರಚುತ್ತಾ ಹೋಳಿ ಹಬ್ಬದ ಸಂಭ್ರಮ ಮತ್ತೂಮ್ಮೆ ಕಳೆಗಟ್ಟುವಂತೆ ಮಾಡಿದರು.
ಡೊಳ್ಳು, ಡ್ರಮ್ಸೆಟ್, ನಂದಿಕೋಲು, ತಮಟೆ ಮುಂತಾದ ಜಾನಪದ ವಾದ್ಯಗಳ ನಡುವೆ ಸೌಂಡ್ಬಾಕ್ಸ್ನಿಂದ ಕೇಳಿ ಬರುತ್ತಿದ್ದ ಹಾಡುಗಳಿಗೆ ತಕ್ಕನ್ನಾಗಿ ಹೆಜ್ಜೆಯನ್ನಾಕಿದ ಯುವಕರು, ಚಿಣ್ಣರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಗಣಪತಿ ಬಪ್ಪ ಮೋರಯಾ… ಜೈ ಗಣೇಶ… ಜೈ ಶ್ರೀರಾಮ, ಭಾರತ್ ಮಾತಾ ಕೀ… ಎಂಬ ಜಯಘೋಷಣೆ ಇಡೀ ಮೆರವಣಿಗೆಗೆ
ರಂಗು ನೀಡಿದವು.
ಗಣೇಶಮೂರ್ತಿ ಮೆರವಣಿಗೆ ಸಾಗಿದ ಇಕ್ಕೆಲಗಳ ಕಟ್ಟಡಗಳ ಮೇಲೆ ನಿಂತಿದ್ದವರು ಮೆರವಣಿಗೆ ಹಾಗೂ ಗಣೇಶ ಮೂರ್ತಿ ಮೇಲೆ ಹೂವಿನ ರಾಶಿ ಸುರಿಸಿದರು. ಕಿಕ್ಕಿರಿದು ನೆರೆದಿದ್ದ ಭಕ್ತರ ದಂಡು, ಮೈ ಮರೆತವರಂತೆ ನರ್ತಿಸುತ್ತಿದ್ದ ಯುವಕರ
ಗುಂಪಿನ ನಡುವೆ ಗಣೇಶನ ದೇವಸ್ಥಾನದಿಂದ ಮಧ್ಯಾಹ್ನ 3ಕ್ಕೆ ಪ್ರಾರಂಭವಾದ ಮೆರವಣಿಗೆಗೆ ನೂರು, ಇನ್ನೂರು ಮೀಟರ್ ದೂರ ಸಾಗಲು ಎರಡು ಗಂಟೆಗೂ ಹೆಚ್ಚು ಕಾಲ ಆಯಿತು.
ಇಡೀ ಮೆರವಣಿಗೆಯ ಕೇಂದ್ರ ಬಿಂದು ಸ್ಥಳ ಬಂದಾಗ, ಅದರಲ್ಲೂ ಬಯಸುತ್ತಿದ್ದಂತಹ ಹಾಡು ಹೊರ ಹೊಮ್ಮುತ್ತಿದ್ದಂತೆಯೇ ಯುವಕರ ದಂಡಿನ ಉತ್ಸಾಹ ನೂರ್ಮಡಿಯಾಗಿತ್ತು. ಸ್ಟೆಪ್ ಜೋರಾದವು. ಮನಸೋಇಚ್ಛೆ
ಕುಣಿದರು, ಕುಪ್ಪಳಿಸಿದರು. ಗಣೇಶಮೂರ್ತಿ ಆಗಮಿಸುತ್ತಿದಂತೆಯೇ ಅಲ್ಪಸಂಖ್ಯಾತ ಬಾಂಧವರು ಸ್ವಾಗತಿಸುವ ಮೂಲಕ ಭಾವೈಕ್ಯತೆಯ ಮೆರೆದರು.
ವಿನೋಬ ನಗರ 2ನೇ ಮುಖ್ಯ ರಸ್ತೆ, ಹಳೆ ಪಿಬಿ ರಸ್ತೆ, ಅರುಣಾ ಚಿತ್ರಮಂದಿರ ಸರ್ಕಲ್, ರಾಂ ಆ್ಯಂಡ್ ಕೋ ವೃತ್ತ, ವಿನೋಬ ನಗರ 1ನೇ ಮುಖ್ಯ ರಸ್ತೆ, ಪುನಾಃ ಹಳೆ ಪಿಬಿ ರಸ್ತೆಯ ಮೂಲಕ ಬಾತಿ ಕೆರೆಯಲ್ಲಿ ಗಣೇಶಮೂರ್ತಿ ವಿಸರ್ಜನೆ ನೆರವೇರಿತು. ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಖುದ್ದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಉಸ್ತುವಾರಿ ವಹಿಸಿದ್ದರು. ಮೆರವಣಿಗೆ ಮೇಲೆ ಕಣ್ಣಿಡಲು ಡ್ರೋಣ್ಕೂಡ ಬಳಸಲಾಯಿತು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಗಣೇಶಮೂರ್ತಿ ಇದ್ದ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಮೆರವಣಿಗೆ ಶಾಂತಿಯುತವಾಗಿ ಸಾಗುವಂತೆ ನೋಡಿಕೊಂಡರು. ಜಿಲ್ಲಾಧಿಕಾರಿ ಕುಟುಂಬದವರು ಸಹ ಮೆರವಣಿಗೆಯಲ್ಲಿ ಸಾಗಿದರು. ಭದ್ರತೆಗೆ ನಿಯೋಜಿಸಲಾಗಿದ್ದ ಮಹಿಳಾ ಪೇದೆಯೊಬ್ಬರು ಪರ್ಸ್ ಕಳೆದುಕೊಂಡ ಘಟನೆ ನಡೆಯಿತು.
ಮೊಹರಂ ಹಬ್ಬದ 10ನೇ ದಿನ ಶುಕ್ರವಾರ ಯೌಮೆ ಶಹದತ್ ಮೆರವಣಿಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಆಜಾದ್ ನಗರ, ಅಹಮ್ಮದ್ ನಗರ ಪ್ರತಿಷ್ಠಾಪಿಸಲಾಗಿದ್ದ ದೇವರ ಅಲ್ಲಾವಿ(ಪಂಜಾ) ಮೆರವಣಿಗೆ ನಡೆಯಿತು. ಹೊಂಡದ ವೃತ್ತದಲ್ಲಿ ಸಮಾಗಮಗೊಂಡ ಅಲ್ಲಾವಿ ನಂತರ ಸ್ವಸ್ಥಾನಕ್ಕೆ ಮರಳಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Davanagere: ಮತದಾನ ಜಾಗೃತಿ ಲಾಂಛನದಲ್ಲಿ ಅಪರೂಪದ ಪ್ರಾಣಿ ಚಿತ್ರ ಬಳಕೆ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gayatri Siddeshwar: ಅಡಕೆ ಮೌಲ್ಯವರ್ಧನೆಗೆ ಯೋಜನೆ: ಗಾಯಿತ್ರಿ
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ