ಉತ್ಸವಕ್ಕೆ ಲಕ್ಷಾಧೀಶ ರೈತನ ಮೆರುಗು
Team Udayavani, Nov 8, 2018, 5:37 PM IST
ಹುಬ್ಬಳ್ಳಿ: ವಿಜಯಪುರದಲ್ಲಿ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವದ ಮೆರುಗು ಹೆಚ್ಚಿಸಲು, ರೈತರಿಗೆ ಮಹತ್ವದ ಮನವರಿಕೆಗಾಗಿ ಕೇವಲ 38 ಗುಂಟೆಯಲ್ಲಿ ಸುಮಾರು 70 ವಿಧದ ಬೆಳೆಗಳ ಪ್ರಾತ್ಯಕ್ಷಿಕೆಗೆ ಲಕಪತಿ ಶೇತಿ (ಲಕ್ಷಾಧೀಶ ರೈತ) ಸಜ್ಜಾಗುತ್ತಿದ್ದಾನೆ.
ಭಾರತೀಯ ಸಂಸ್ಕೃತಿ ಉತ್ಸವ ನಡೆಯುವ ಸ್ಥಳದ ವ್ಯಾಪ್ತಿಯಲ್ಲೇ ಸುಮಾರು 1 ಎಕರೆ ಜಮೀನಿನಲ್ಲಿ ಎರಡು ಗುಂಟೆಯಲ್ಲಿ ಒಂದು ಮನೆ, ಆಕಳು ಕೊಟ್ಟಿಗೆ, ಗೋಬರ್ ಗ್ಯಾಸ್ ನಿರ್ಮಿಸಲಾಗುತ್ತಿದ್ದು, ಉಳಿದ ಸುಮಾರು 38 ಗುಂಟೆಯಲ್ಲಿ ಲಕಪತಿ ಶೇತಿ ಮಾದರಿ ರೂಪಿಸಲಾಗುತ್ತಿದೆ. ಲಕಪತಿ ಶೇತಿ (ಲಕ್ಷಾಧೀಶ ರೈತ) ಇದು ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯ ಶ್ರೀ ಕಾಡಸಿದ್ದೇಶ್ವ ಮಠ ಹಾಗೂ ಸಿದ್ದಗಿರಿ ಗುರುಕುಲ ಪ್ರತಿಷ್ಠಾನದ ಪರಿಕಲ್ಪನೆ. ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕೇವಲ 38 ಗುಂಟೆಯಲ್ಲಿ ಸುಮಾರು 100 ತರಹದ ಬೆಳೆಗಳನ್ನು ಬೆಳೆಯುವ ಮೂಲಕ 2015ರಲ್ಲಿ ಕನೇರಿಯಲ್ಲಿ ನಡೆದ 4ನೇ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಬಂದಿದ್ದ ಲಕ್ಷಾಂತರ ಜನರು ವೀಕ್ಷಿಸುವಂತೆ ಮಾಡಿದ್ದರು. ಅಷ್ಟೇ ಅಲ್ಲ ಉತ್ಸವದ ನಂತರವೂ ಅದನ್ನು ಮುಂದುವರೆಸಿದ್ದು, ಇಂದಿಗೂ ಶ್ರೀಮಠಕ್ಕೆ ಹೋಗುವ ರೈತರು, ಭಕ್ತರು, ಪ್ರವಾಸಿಗರು ಲಕ್ಷಾಧೀಶರೈತ ಮಾದರಿ ನೋಡಬಹುದಾಗಿದೆ.
ಕನೇರಿಯ ಶ್ರೀ ಮಠದಲ್ಲಿ ಕೈಗೊಂಡ ಲಕ್ಷಾಧೀಶ ರೈತ ಮಾದರಿ ಕೇಂದ್ರ ಸರ್ಕಾರದ ಗಮನ ಸೆಳೆದಿತ್ತಲ್ಲದೆ, ಕೇಂದ್ರ ಸರ್ಕಾರ ದೀನದಯಾಳ ಉಪಾಧ್ಯಾಯ ಅವರ ಹೆಸರಲ್ಲಿ ದೇಶದ ಸುಮಾರು 100 ಗ್ರಾಮಗಳಲ್ಲಿ ಇದೇ ಮಾದರಿಯನ್ನು ಅನುಷ್ಠಾನಗೊಳಿಸಿದೆ. ಇದರ ಮುಂದುವರೆದ ಭಾಗವಾಗಿ 5ನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ರೈತರ ವೀಕ್ಷಣೆಗೆ ಲಕ್ಷಾಧೀಶ ರೈತ ಮಾದರಿ ಸಿದ್ಧಗೊಳ್ಳುತ್ತಿದೆ.
70 ವಿವಿಧ ಬೆಳೆ ಬಿತ್ತನೆ: ಲಕ್ಷಾಧೀಶ ರೈತ ಮಾದರಿ ಕೃಷಿ ವಿಜ್ಞಾನಿ ಡಾ| ರವೀಂದ್ರ ಬೆಳ್ಳಿ ಅವರ ಮಾರ್ಗದರ್ಶನದಲ್ಲಿ ತಯಾರಾಗುತ್ತಿದೆ. ಒಂದು ಎಕರೆಯಲ್ಲಿ ಒಂದು ಕುಟುಂಬ ವಾಸಕ್ಕೆ ಒಂದು ಮನೆ ನಿರ್ಮಾಣ ಮಾಡಲಾಗುತ್ತಿದ್ದು, ಉಳಿದ ಜಾಗದಲ್ಲಿ ತರಕಾರಿ, ಬಳ್ಳಿಗಳು, ಸಿರಿಧಾನ್ಯ, ನೇಂದ್ರ ಬಾಳೆ, ಯಾಲಕ್ಕಿ ಬಾಳೆ, ವಿವಿಧ ಆಹಾರ ಧಾನ್ಯಗಳು, ಹೂಗಳು, ಕರಿಬೇವು, ನುಗ್ಗೆ ಹೀಗೆ ವಿವಿಧ ಸುಮಾರು 70 ರೀತಿಯ ಬೆಳೆಗಳನ್ನು ಬಿತ್ತನೆ-ನಾಟಿ ಮಾಡಲಾಗುತ್ತದೆ. ಸಾವಯವ ಕೃಷಿಗೆ ಬೇಕಾಗುವ ಎರೆಹುಳು ತೊಟ್ಟಿ, ಕೃಷಿ ಹೊಂಡ, ಜೀವಾಮೃತ ಘಟಕಗಳನ್ನು ನಿರ್ಮಿಸಲಾಗುತ್ತದೆ.
ಮತ್ತೊಂದು ಎಕರೆಯಲ್ಲಿ ಕಂಗೊಳಿಸುತ್ತಿದೆ ಬೆಳೆ: ಲಕ್ಷಾಧೀಶ ರೈತ ಮಾದರಿಯ ಎದುರಿಗೆ ಒಂದು ಎಕರೆಯಲ್ಲಿ ಮತ್ತೂಂದು ರೀತಿಯ ಪ್ರಯೋಗವನ್ನು ಮಾಡಲಾಗಿದೆ. ಇಡೀ ಒಂದು ಎಕರೆಯಲ್ಲಿ ಆಹಾರ ಧಾನ್ಯಗಳು, ತರಕಾರಿ, ಪಲ್ಯ, ಹಣ್ಣು, ಎಣ್ಣೆಕಾಳು ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಈಗಾಗಲೇ ಬೆಳೆಗಳು ಮೇಲೆದ್ದಿದ್ದು, ಉತ್ಸವ ವೇಳೆಗೆ ಒಂದಿಷ್ಟು ಫಲ ನೀಡುವ ಸಾಧ್ಯತೆಯೂ ಇದೆ.
ಒಂದು ಎಕರೆಯಲ್ಲಿ 21 ತಳಿ ಸಿರಿಧಾನ್ಯ, 9 ತಳಿ ಗೋಧಿ, 7 ತಳಿ ಜೋಳ, 5 ತಳಿ ಕಡಲೆ ಇದಲ್ಲದೆ ಚಿಯಾ, ಉಳ್ಳಾಗಡ್ಡಿ, ಬೆಳ್ಳುಳ್ಳಿ, ಪಡವಲಕಾಯಿ, ಚವಳೆಕಾಯಿ, ಬೆಂಡೇಕಾಯಿ, ಹೀರೇಕಾಯಿ, ಬೀನ್ಸ್, ಟೊಮೆಟೊ, ಬದನೇಕಾಯಿ, ಕಾಬೂಲ ಕಡಲೆ, ಸಕ್ಕರೆಮುಕ್ಕರಿ ಜೋಳ, ಪಪ್ಪಾಯಿ, ಕರಬೂಜ, ಕಲ್ಲಂಗಡಿ, ಚೆಂಡು ಹೂ, ಶಿಮ್ಲಾ ಮೆಣಸಿನಕಾಯಿ ಹೀಗೆ ವಿವಿಧ ಬೆಳೆ ಬಿತ್ತನೆ ಮಾಡಲಾಗಿದೆ. ಜತೆಗೆ ರೇಷ್ಮೆ ಕೃಷಿ ಮಾಹಿತಿಗೂ ವ್ಯವಸ್ಥೆ ಕೈಗೊಳ್ಳಲಾಗಿದೆ. ಒಂದು ಎಕರೆಯಲ್ಲಿ ಪಾಲಿಹೌಸ್ ಮಾಡಲಾಗುತ್ತದೆ.
ಲಕ್ಷಾಧೀಶ ರೈತ ಹಾಗೂ ಅದರ ಪಕ್ಕದಲ್ಲೇ ಒಂದು ಎಕರೆಯಲ್ಲಿನ ಕೃಷಿ ಮಾದರಿ ವೀಕ್ಷಣೆಗೆ ಹೋಗುವ ರೈತರು ಮಿಶ್ರ ಹಾಗೂ ಬಹುಬೆಳೆಗಳ ಪ್ರಾತ್ಯಕ್ಷಿಕೆ ಜತೆಗೆ ಅದರ ಮಾಹಿತಿ ನೀಡಿಕೆ, ಪ್ರಶ್ನೆಗಳೇನಾದರು ಮೂಡಿದರೆ ಅದಕ್ಕೆ ಉತ್ತರಿಸುವ, ಕೃಷಿ ವಿಜ್ಞಾನಿ-ತಜ್ಞರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ
Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ
L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ
Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ
UPSC ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ
MUST WATCH
ಹೊಸ ಸೇರ್ಪಡೆ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು