ಶಾಸನಸಭೆಗಳು ರಾಜಕೀಯ ಗುಣಮಟ್ಟದ ಕನ್ನಡಿ; ಕಲಾಪ ವ್ಯರ್ಥಾಲಾಪ
Team Udayavani, Feb 16, 2017, 3:35 AM IST
ವಿಧಾನಮಂಡಲದ ಏಳು ದಿನಗಳ ಅಧಿವೇಶನ ಯಾವುದೇ ಘನ ಚರ್ಚೆಯಿಲ್ಲದೆ ಮುಗಿದಿದೆ. ಅತ್ತ ಸಂಸತ್ ಕಲಾಪವೂ ಇದಕ್ಕಿಂತ ಉತ್ತಮ ಸ್ಥಿತಿಯನ್ನು ಕಂಡಿಲ್ಲ. ಕಲಾಪಗಳ ಗುಣಮಟ್ಟದಲ್ಲಿ ಈ ತೆರನಾದ ಸವಕಳಿ ಕಳವಳಕಾರಿ. ಇದು ಸುಧಾರಣೆಗೊಳ್ಳಲೇ ಬೇಕಿದೆ.
ಒಂದು ದೇಶದ ರಾಜಕೀಯ ವಾತಾವರಣ ತಿಳಿಯಬೇಕಿದ್ದರೆ ಆ ದೇಶದ ಶಾಸನ ಸಭೆಗಳನ್ನು ನೋಡಬೇಕು ಎನ್ನುತ್ತಾರೆ. ಉತ್ತಮ ರಾಜಕೀಯ ವಾತಾವರಣವಿರುವ ದೇಶದ ಜನಪ್ರತಿನಿಧಿಗಳು ಶಾಸನ ಸಭೆಗಳಲ್ಲಿ ಘನತೆಯ ನಡವಳಿಕೆ ಹೊಂದಿರುತ್ತಾರೆ. ಅವರು ಜನರ ಪ್ರತಿನಿಧಿಗಳು ಮಾತ್ರವಲ್ಲದೆ ಒಟ್ಟಾರೆ ಸಮಾಜದ ಪ್ರತಿನಿಧಿಗಳೂ ಆಗಿರುತ್ತಾರೆ ಎನ್ನುವುದು ಈ ಮಾತಿನ ತಾತ್ಪರ್ಯ. ಈ ಮಾತನ್ನು ನಮ್ಮ ವಿಧಾನಸಭೆಗಳಿಗೋ ಸಂಸತ್ತಿಗೋ ಅನ್ವಯಿಸಿದರೆ ಗೊತ್ತಾಗುತ್ತದೆ ನಮ್ಮನ್ನಾಳುವವರ ಹಣೆಬರಹ. ಅಧಿವೇಶನ ಇರುವುದೇ ಪ್ರತಿಭಟಿಸಿ ಧರಣಿ ಮಾಡಲು ಎಂಬ ಪರಿಸ್ಥಿತಿ ಸೃಷ್ಟಿಧಿಯಾಗಿ ದಶಕಗಳೇ ಕಳೆದಿವೆ. ಇತ್ತೀಧಿಚೆಗಿನ ವರ್ಷಗಳಲ್ಲಿ ಅಧಿವೇಶನದಲ್ಲಿ ನಡೆಧಿಯುವ ಕಲಾಪಗಳ ಅವಧಿ ಕಡಿಮೆಧಿಯಾಗುತ್ತಿದೆ. ಕಲಾಪ ನಡೆದರೂ ವಿಪಕ್ಷಗಳ ಪ್ರತಿಭಟನೆಯಿಂದಾಗಿ ವ್ಯರ್ಥಾಲಾಪಧಿವಾಗುಧಿತ್ತಿದೆ. ಸೋಮವಾರದಿಂದ ಏಳು ದಿನಗಳ ಕಾಲ ನಡೆದ ರಾಜ್ಯ ವಿಧಾನಮಂಡಲದ ಅಧಿವೇಶನವೂ ಈ ಮಾತಿಗೆ ಹೊರತಾಗಲಿಲ್ಲ. ರಾಜ್ಯ ವಿಧಾನಮಂಡಲ 60 ದಿನಗಳಿಗೆ ಕಡಿಮೆಯಿಲ್ಲದಂತೆ ಕಲಾಪ ನಡೆಸಬೇಕೆಂಬ ನಿಯಮವನ್ನು 2005ರಲ್ಲಿ ರಚಿಸಿದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ.
ಬರ, ಅಕ್ರಮ ಮರಳು ಗಣಿಗಾರಿಕೆ, ಎತ್ತಿನಹೊಳೆ ಯೋಜನೆ ವಿವಾದ, ನೈಸ್ ಅಕ್ರಮ, ಕಪ್ಪತಗುಡ್ಡ ವಿವಾದವೂ ಸೇರಿದಂತೆ ಹತ್ತಾರು ಜ್ವಲಂತ ಸಮಸ್ಯೆಗಳು ರಾಜ್ಯದಲ್ಲಿವೆ. ಆದರೆ ಬರದ ಕುರಿತು ಗಂಭೀರವಾದ ಚರ್ಚೆಯೇ ಆಗಲಿಲ್ಲ. ಒಟ್ಟಾರೆ ನಡೆದಿರುವುದು 36 ತಾಸುಗಳ ಕಲಾಪ. ಅದರಲ್ಲಿ ಭ್ರಷ್ಟಾಚಾರ ಆರೋಪಗಳ ಕುರಿತು ಗಲಭೆ ಹೊರತುಪಡಿಸಿದರೆ ಬೇರೇನೂ ಆಗಿಲ್ಲ. ಕೊನೆಯ ದಿನವಂತೂ ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮಾಡಿದ ಭ್ರಷ್ಟಾಚಾರದ ಆರೋಪವೇ ಇಡೀ ಕಲಾಪವನ್ನು ನುಂಗಿ ಹಾಕಿದೆ. ಐದು ಮಸೂದೆಗಳೇನೋ ಆಂಗೀಕಾರವಾಗಿವೆ. ಆದರೆ ಈ ಮಸೂದೆಗಳ ಮೇಲೆ ಗಂಭೀರವಾದ ಚರ್ಚೆ ನಡೆದಿಲ್ಲ. ಕಲಾಪ ಭಂಗಗೊಳಿಸುವ ಪಿಡುಗು ಇಂದು ಎಲ್ಲ ರಾಜ್ಯಗಳಿಗೂ ವ್ಯಾಪಿಸಿದೆ.
ಕಲಾಪ ನಡೆದರೂ ಸದಸ್ಯರ ಗೈರು ಹಾಜರಿ ಇನ್ನೊಂದು ಗಂಭೀರವಾದ ಸಮಸ್ಯೆ. ಹಾಜರಿ ಪುಸ್ತಕದಲ್ಲಿ ಸಹಿ, ಕಲಾಪಕ್ಕೆ ಚಕ್ಕರ್ ಬಹುತೇಕ ಶಾಸಕ, ಸಂಸದರ ಸಾಮಾನ್ಯ ಚಾಳಿ. ಹಾಜರಿ ಹಾಕಿದರೆ ಸಾಕು, ಕಲಾಪದಲ್ಲಿ ಭಾಗವಹಿಸಿದ ಎಲ್ಲ ಭತ್ಯೆ ಸೌಲಭ್ಯಗಳು ಸಿಗುತ್ತವೆ. ಸೌಲಭ್ಯ ಬೇಕು, ಜವಾಬ್ದಾರಿ ಬೇಡ ಎಂಬ ಭಂಡ ನಿಲುವು ಇದು. ಜನಪ್ರತಿನಿಧಿಗಳು ಶಾಸನಸಭೆಯಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚಿಸದೆ ಹಾಜರಿ ಹಾಕಿ ಕುಟುಂಬಿಕರ ಜತೆಗೆ ಮಾಲ್ಗಳಲ್ಲಿ ಶಾಪಿಂಗ್, ಧಾರ್ಮಿಕ ಕ್ಷೇತ್ರಗಳ ಭೇಟಿ ಇಲ್ಲವೇ ಉದ್ಘಾಟನೆ, ಶಂಕುಸ್ಥಾಪನೆಯಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಜನರಿಗೆ ಮಾಡುವ ವಂಚನೆಯಲ್ಲವೆ?
ಸದನಗಳಲ್ಲಿ 50 -60ರ ದಶಕಗಳಲ್ಲಿ ಕಂಡು ಬರುತ್ತಿದ್ದ ವಿದ್ವತ್ಪೂರ್ಣ ಚರ್ಚೆಗಳು ಈಗ ಇಲ್ಲ. ಇದಕ್ಕೆ ಕಾರಣ ಜನಪ್ರತಿನಿಧಿಗಳಲ್ಲಿ ವೈಚಾರಿಕತೆ ಮತ್ತು ನೈತಿಕತೆಯ ಮಟ್ಟ ಕುಸಿದಿರುವುದು. ಚರ್ಚೆಯ ಬದಲು ಗದ್ದಲ ಎಬ್ಬಿಸಿ ಕಲಾಪ ಭಂಗಗೊಳಿಸಿದರೆ ತಮ್ಮ ಉದ್ದೇಶ ಈಡೇರುತ್ತದೆ ಎಂದು ಶಾಸಕರು, ಸಂಸದರು ನಂಬಿದ್ದಾರೆ. ಈಗ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ನೀಡುವುದು ಅವರ ಪ್ರತಿಭೆ ಅಥವಾ ಸಂಸದೀಯ ಪಟುತ್ವವನ್ನು ನೋಡಿಕೊಂಡಲ್ಲ. ಬದಲಾಗಿ ಗೆಲುವಿನ ಸಾಧ್ಯತೆಯೇ ಮಾನದಂಡ. ಏನೇನೋ ಅಕ್ರಮಗಳನ್ನು ಮಾಡಿ ಗೆದ್ದು ಬಂದವರಿಂದ ಉತ್ತಮ ಸಂಸದೀಯ ನಡವಳಿಕೆ ನಿರೀಕ್ಷಿಸುವುದು ಹೇಗೆ? ಮತದಾರನೂ ಅಭ್ಯರ್ಥಿಯ ವೈಯಕ್ತಿಕ ಸಾಮರ್ಥ್ಯಕ್ಕಿಂತ ಪಕ್ಷವನ್ನೇ ನೆಚ್ಚಿಕೊಂಡು ಮತ ಹಾಕುವುದರಿಂದ ಉತ್ತಮ ಜನನಾಯಕರು ಆರಿಸಿ ಬರುವುದಿಲ್ಲ.
ಗದ್ದಲದಿಂದ ಕಲಾಪ ಭಂಗವಾದರೆ ಅದೇ ದೊಡ್ಡ ಸಾಧನೆ ಎಂದು ಪಕ್ಷಗಳು ಭಾವಿಸಿರುವುದರಿಂದ ಜನಪ್ರತಿನಿಧಿಗಳ ಸಂಸದೀಯ ವರ್ತನೆಗಳು ಲಘುವಾಗುತ್ತಿವೆ. ಸದನದಲ್ಲಿ ತಮ್ಮ ನಡವಳಿಕೆಗೆ ಜನರು ಹೇಗೆ ಪ್ರತಿಸ್ಪಂದಿಸುತ್ತಿದ್ದಾರೆ ಎಂದು ತಿಳಿಯುವ ಗುಣವನ್ನು ಜನಪ್ರತಿನಿಧಿಗಳು ಬೆಳೆಸಿಕೊಳ್ಳಬೇಕು. ಜನರಿಂದ ಆಯ್ಕೆಯಾಗಿ ಅದೇ ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡಬಾರದು ಎಂಬ ಪರಿಜ್ಞಾನ ಇರಬೇಕು. ಇಲ್ಲದಿದ್ದರೆ ಕಲಾಪಕ್ಕೆ ಅಡ್ಡಿಪಡಿಸುವುದನ್ನು ತಡೆಯುವ ಸಲುವಾಗಿ ಕಠಿನ ಕಾನೂನುಗಳನ್ನು ರೂಪಿಸುವ ಅನಿವಾರ್ಯತೆ ಎದುರಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು