ದಿಲ್ಲಿ ವಾಯುಮಾಲಿನ್ಯ, ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ
Team Udayavani, Nov 14, 2017, 6:55 AM IST
ವಾಯುಮಾಲಿನ್ಯದಿಂದಾಗಿ ದಿಲ್ಲಿ ಮತ್ತೂಮ್ಮೆ ಹೈರಾಣಾಗಿದೆ. ಪ್ರತಿ ವರ್ಷ ಮಳೆಗಾಲ ಮುಗಿದು ಚಳಿಗಾಲ ಕಾಲಿಡುವಾಗ ದಿಲ್ಲಿಯ ಹವಾಮಾನ ಹದಗೆಡುವುದು ಸಾಮಾನ್ಯ ವಿಷಯ. ಇತ್ತೀಚೆಗಿನ ವರ್ಷಗಳಲ್ಲಿ ದಿಲ್ಲಿ ಭಾರೀ ಪ್ರಮಾಣದಲ್ಲಿ ಬೆಳವಣಿಗೆಯಾಗಿರುವುದರಿಂದ ಮಾಲಿನ್ಯದ ಮಟ್ಟವೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿದೆ. ಜಗತ್ತಿನ ಪ್ರಮುಖ 1,600 ನಗರಗಳ ಪೈಕಿ ಅತ್ಯಂತ ಹೆಚ್ಚು ವಾಯುಮಾಲಿನ್ಯ ಇರುವ ನಗರ ಎಂಬ ಕುಖ್ಯಾತಿ ರಾಷ್ಟ್ರ ರಾಜಧಾನಿಗಿದೆ. ಕೆಲ ವರ್ಷಗಳ ಹಿಂದೆ ಚೀನದ ರಾಜಧಾನಿ ಬೀಜಿಂಗ್ ಕೂಡ ಇದೇ ರೀತಿ ಮಲಿನವಾಗಿತ್ತು. ಆದರೆ ಅಲ್ಲಿನ ಆಡಳಿತ ಮತ್ತು ಜನರು ಸಕಾಲದಲ್ಲಿ ಎಚ್ಚೆತ್ತುಕೊಂಡು ಕ್ಷಿಪ್ರವಾಗಿ ಪರಿಹಾರೋಪಾಯಗಳನ್ನು ಕಂಡುಕೊಂಡ ಪರಿಣಾಮ ವಾಗಿ ಸದ್ಯ ಬೀಜಿಂಗ್, ದಿಲ್ಲಿಯಷ್ಟು ಹದಗೆಟ್ಟಿಲ್ಲ. ಆದರೆ ದಿಲ್ಲಿಯಲ್ಲೇ ಇರುವ ನಮ್ಮನ್ನಾಳುವವರಿಗೆ ಮಾತ್ರ ವಾಯುಮಾಲಿನ್ಯದ ಬಿಸಿ ಇನ್ನೂ ತಟ್ಟಿದಂತೆ ಕಾಣಿಸುತ್ತಿಲ್ಲ. ಕಳೆದ ವರ್ಷವೂ ದಿಲ್ಲಿಯಲ್ಲಿ ಇದೇ ಮಾದರಿಯಲ್ಲಿ ಪ್ರಾಣವಾಯುವಿಗಾಗಿ ತಹತಹಿಸುವ ಪರಿಸ್ಥಿತಿ ಉಂಟಾ ಗಿತ್ತು. ಆಗ ಒಂದಿಷ್ಟು ತತ್ಕ್ಷಣದ ಪರಿಹಾರಗಳನ್ನು ಕಂಡುಕೊಳ್ಳುವುದು ಬಿಟ್ಟರೆ ದಿಲ್ಲಿ ಸರಕಾರವಾಗಲಿ, ಕೇಂದ್ರವಾಗಲಿ ಬೇರೇನೂ ಮಾಡಲು ಹೋಗಿಲ್ಲ. ಹೀಗಾಗಿ ಈ ವರ್ಷವೂ ಅದೇ ಪರಿಸ್ಥಿತಿ ಪುನರಾವರ್ತನೆಯಾಗಿದೆ.
ದಟ್ಟ ಮಬ್ಬಿನಿಂದಾಗಿ ಮಧ್ಯಾಹ್ನದ ಹೊತ್ತಿಗೆ ಕತ್ತಲೆ ಕವಿಯುತ್ತದೆ. ಕೆಲ ದಿನಗಳ ಹಿಂದೆ 50 ಮೀಟರ್ ದೂರದಲ್ಲಿರುವ ವಸ್ತುಗಳು ಕಾಣಿಸದೆ ಯಮುನಾ ಎಕ್ಸ್ಪ್ರೆಸ್ ಹೈವೇಯಲ್ಲಿ ಸರಣಿ ಅಪಘಾತವಾಗಿತ್ತು. ರವಿವಾರ ವಾತಾವರಣ ಇನ್ನಷ್ಟು ಹದಗೆಟ್ಟು ಆರೋಗ್ಯವಂತ ವ್ಯಕ್ತಿಗಳಿಗೂ ದಿಲ್ಲಿಯ ಗಾಳಿ ಯೋಗ್ಯವಲ್ಲ ಎಂಬ ಮಟ್ಟಕ್ಕಿಳಿದಿತ್ತು. 100 ಮೀಟರ್ ದೂರದಲ್ಲಿರುವ ವಸ್ತುಗಳು ಕೂಡ ಗೋಚರಿಸುತ್ತಿರಲಿಲ್ಲ. ಗಾಳಿಯಲ್ಲಿರುವ ಮಾಲಿನ್ಯದ ಮಟ್ಟವನ್ನು ತಿಳಿಸುವ ಪಿಎಂ 2.5 ಮತ್ತು ಪಿಎಂ 10ಮಟ್ಟ ಗರಿಷ್ಠ ಮಟ್ಟಕ್ಕೇರಿಯಾಗಿದೆ. ಸದ್ಯಕ್ಕೆ ಈ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಯಾವ ಮಾರ್ಗವೂ ಇಲ್ಲದಿರುವುದರಿಂದ ಚಳಿ ಕಡಿಮೆಯಾಗಿ ಮಾಲಿನ್ಯ ಸ್ವಯಂ ಕಡಿಮೆಯಾಗುವುದನ್ನು ಕಾಯುವುದೊಂದೇ ಪರಿಹಾರ.
ವಾಯುಮಾಲಿನ್ಯ ಮುಖ್ಯವಾಗಿ ಬಾಧಿಸುವುದು ರೋಗಿಗಳನ್ನು, ಗರ್ಭಿಣಿ-ಬಾಣಂತಿಯರನ್ನು ಹಾಗೂ ಮಕ್ಕಳನ್ನು. ಮಾಲಿನ್ಯದಿಂದಾಗಿ 2015ರಲ್ಲಿ ದೇಶದಲ್ಲಿ 25 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಇತ್ತೀಚೆಗೆ ವರದಿಯೊಂದು ಬಹಿರಂಗ ಪಡಿಸಿದೆ. ಜಗತ್ತಿನಲ್ಲೇ ಮಾಲಿನ್ಯದಿಂದಾಗಿ ಸಂಭವಿಸುವ ಸಾವುಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಆದರೆ ನಮಗೆ ವಾಯುಮಾಲಿನ್ಯದ ನೆನಪಾಗುವುದು ಮಾತ್ರ ದಿಲ್ಲಿಯಲ್ಲಿ ಜನರು ಉಸಿರಾಡುವ ಪ್ರಾಣ ವಾಯುವಿಗಾಗಿ ತಹತಹಿಸುವ ಪರಿಸ್ಥಿತಿ ಬಂದಾಗ ಮಾತ್ರ. ಇಂದು ದಿಲ್ಲಿಗಾದ ಪರಿಸ್ಥಿತಿ ನಾಳೆ ನಮ್ಮ ನಗರಗಳಿಗೂ ಬರಬಹುದು ಎಂದು ಯಾರಿಗೂ ಅನಿಸದಿರುವುದು ದುರಂತ. ದಿಲ್ಲಿಯಲ್ಲಾದರೂ ಅಷ್ಟೇ; ಉಸಿರಾಡುವುದೇ ಕಷ್ಟ ಎಂಬ ಪರಿಸ್ಥಿತಿಯುಂಟಾದಾಗ ಶಾಲೆಗಳಿಗೆ ರಜೆ ಸಾರುವುದು, ಸಮ-ಬೆಸ ನಿಯಮ ಜಾರಿಗೆ ತರುವುದು,
ವಿದ್ಯುತ್ ಸ್ಥಾವರ ಮತ್ತು ಫ್ಯಾಕ್ಟರಿಗಳನ್ನು ಮುಚ್ಚುವುದು, ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸುವುದು, ಜನರಿಗೆ ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡುವುದು ಇತ್ಯಾದಿ ತತ್ಕ್ಷಣದ ಕ್ರಮ ಗಳನ್ನು ಕೈಗೊಳ್ಳಲಾಗುತ್ತದೆ.
ಜನರು ದೀಪಾವಳಿಗೆ ಪಟಾಕಿ ಸುಡುವುದನ್ನು ನಿಷೇಧಿಸಿದರೆ ಮಾಲಿನ್ಯ ನಿಯಂತ್ರಣಕ್ಕೆ ಬರಬಹುದು ಎಂಬ ಸುಪ್ರೀಂಕೋರ್ಟಿನ ತೀರ್ಮಾನ ಕೂಡ ಸುಳ್ಳಾಗಿದೆ. ಕೈಗಾರಿಕೋದ್ಯಮ, ಇಟ್ಟಿಗೆ ನಿರ್ಮಾಣ, ವಾಹನಗಳು, ಡೀಸೆಲ್ ಜನರೇಟರ್ಗಳು, ಕಲ್ಲಿದ್ದಲು, ರಸ್ತೆಯ ಧೂಳು, ರೈತರು ಬತ್ತದ ಹುಲ್ಲು ಸುಡುವುದು ಹೀಗೆ ದಿಲ್ಲಿಯ ಮಾಲಿನ್ಯಕ್ಕೆ ಹಲವಾರು ಕಾರಣಗಳಿವೆ. ಹಾಗೆಂದು ಇವುಗಳು ಹೊಸ ಕಾರಣಗಳೇನೂ ಅಲ್ಲ. ದಿಲ್ಲಿಯ ವಾಯುಮಾಲಿನ್ಯಕ್ಕೆ ಶೇ.30 ಸ್ಥಳೀಯ ಕಾರಣವಾದರೆ ಶೇ.70 ಹೊರಗಿನ ಕಾರಣಗಳಿವೆ. ಹೀಗಾಗಿ ಇದು ದಿಲ್ಲಿಯ ಸರಕಾರ ಅಥವಾ ಕೇಂದ್ರ ಸರಕಾರ ಮಾತ್ರ ಪರಿಹರಿಸಬಹುದಾದ ಸಮಸ್ಯೆಯಲ್ಲ. ಅಂತೆಯೇ ರಾಜಕೀಯ ಲಾಭಕ್ಕಾಗಿ ಪರಸ್ಪರರನ್ನು ದೂಷಿಸಿದರೂ ಪರಿಹಾರ ಸಿಗುವುದಿಲ್ಲ. ಟಿವಿಯ ಚರ್ಚಾಕೊಠಡಿಗಳಲ್ಲಿ ಕುಳಿತು ಕಂಠಶೋಷಣೆ ಮಾಡಿದರೆ ಅಥವಾ ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆದರೆ ವಾಯು ಮಾಲಿನ್ಯವೇನೂ ಕಡಿಮೆ ಯಾಗುವುದಿಲ್ಲ. ದಿಲ್ಲಿಯನ್ನು ಜನವಾಸಕ್ಕೆ ಸಹನೀಯಗೊಳಿಸುವ ನಗರ ಮಾಡಬೇಕೆಂದಿದ್ದರೆ ವಾಯುಮಾಲಿನ್ಯಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ. ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕಾದರೆ ಸಮಸ್ಯೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು ಮತ್ತು ಸಂಬಂಧಪಟ್ಟ ಎಲ್ಲರೂ ಈ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆ ಯಲ್ಲಿ ಸಹಭಾಗಿಗಳಾಗಬೇಕು. ನೀತಿ ರೂಪ ಕರು ಹವಾನಿಯಂತ್ರಿತ ಕೊಠಡಿಯಿಂದ ಹೊರಬಂದು ವಾಸ್ತವ ಪರಿಸ್ಥಿತಿ ಯನ್ನು ಅರಿತು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಇಲ್ಲ ವಾದರೆ ದಿಲ್ಲಿಯ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ದೇಶದ ಉಳಿದ ನಗರಗಳ ಕಥೆಯೂ ಹಾಗೆಯೇ ಆಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್