ಬೀದಿಗಿಳಿದ ರೈತರು ಅನ್ನದಾತನ ಸಮಸ್ಯೆ ಬಗೆಹರಿಸಿ
Team Udayavani, Nov 20, 2018, 6:00 AM IST
ಕಬ್ಬು ಬೆಳೆಗಾರರು ಮತ್ತೆ ಬೀದಿಗೆ ಇಳಿದಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಪಾವತಿಸಬೇಕಾದ ಬಾಕಿ ಹಣಕ್ಕಾಗಿ ಪ್ರತಿವರ್ಷ ಬೀದಿಗಿಳಿದು ಹೋರಾಟ ಸಾಮಾನ್ಯ ಎಂಬಂತೆ ಆಗಿದೆ. ಬೆಳಗಾವಿ ಸುವರ್ಣ ಸೌಧದಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಷ ಚಳಿಗಾಲದ ವಿಧಾನಮಂಡಲ ಅಧಿವೇಶನ ನಡೆಸುವುದರಿಂದ ಅದೇ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಿಗಡಾಯಿಸುವುದು, ರೈತರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದು, ಬಂದ್ ಮಾಡುವುದು, ಬೃಹತ್ ಪ್ರತಿಭಟನೆ ಮಾಡುವುದು ಐದಾರು ವರ್ಷಗಳಿಂದ ನಡೆಯುತ್ತಲೇ ಇದೆ.
ಉತ್ತರ ಕರ್ನಾಟಕ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಬಹುತೇಕ ರಾಜಕಾರಣಿಗಳೇ. ಎಲ್ಲ ಪಕ್ಷದ ನಾಯಕರೂ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ. ರೈತರಿಗೆ ಬಾಕಿ ಪಾವತಿಸುವ ವಿಚಾರದಲ್ಲಿ ಸರ್ಕಾರ ಇದೇ ಕಾರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗುವುದಿಲ್ಲ ಎಂಬ ಮಾತು ಇದೆ. ಇದೇ ರೀತಿಯ ಪ್ರತಿಭಟನೆ ಸಂದರ್ಭದಲ್ಲಿ ಸುವರ್ಣಸೌಧದ ಮುಂದೆ ರೈತ ವಿಠಲ ಅರಬಾವಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ದುರ್ಘಟನೆಯೂ ನಡೆದಿದೆ.
ಎಚ್.ಡಿ.ಕುಮಾರಸ್ವಾಮಿಯವರು ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಕಬ್ಬು ಬೆಳೆಗಾರರು ಸೇರಿದಂತೆ ರೈತರ ಸಮಸ್ಯೆಗಳ ನಿವಾರಣೆಗೆ ಪಾದಯಾತ್ರೆ ಸಹ ಮಾಡಿದ್ದರು. ರೈತರ ಶಾಂತಿಯುತ ಪ್ರತಿಭಟನೆಗೂ ಬೆಂಬಲ ನೀಡಿದ್ದರು. ಇದೀಗ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಸಹಜವಾಗಿ ರೈತರಿಗೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುವರು ಎಂಬ ಆಶಾಭಾವನೆ ಇರಬಹುದು. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆಗೆ ಇಳಿದಾಗ ಮುಖ್ಯಮಂತ್ರಿಯವರು ಖುದ್ದು ಬಂದು ರೈತರ ಜತೆ ಚರ್ಚಿಸುವುದಾಗಿ ತಿಳಿಸಿದರು. ಅದಕ್ಕಾಗಿ ನ.19 ರಂದು ದಿನಾಂಕ ಸಹ ನಿಗದಿಗೊಳಿಸಲಾಯಿತು.
ಆ ನಂತರ ನ.20 ರಂದು ಸಭೆ ಮುಂದೂಡಿ ಬೆಳಗಾವಿ ಬದಲು ಬೆಂಗಳೂರಿನ ವಿಧಾನಸೌಧದಲ್ಲೇ ನಡೆಸುವುದಾಗಿಯೂ ಭರವಸೆ ನೀಡಿದರು.
ಇದರ ಮಧ್ಯೆ ಬೆಳಗಾವಿ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿ ಬಾಕಿ ಪಾವತಿ ಮಾಡುವ ಒಪ್ಪಂದವೂ ಆಗಿ ಇನ್ನೇನು ರೈತರ ಸಮಸ್ಯೆ ಬಗೆಹರಿಯಿತು ಎನ್ನುವಷ್ಟರಲ್ಲೇ ಮತ್ತೆ ಪ್ರತಿಭಟನೆ ಪ್ರಾರಂಭವಾಯಿತು.
ಕೃಷಿ ಮೇಳದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪ್ರತಿಭಟನಾ ನಿರತ ರೈತ ಮಹಿಳೆ ಕುರಿತು ಆಡಿದ ಮಾತು ವಿವಾದಕ್ಕೂ ಕಾರಣವಾಯಿತು. ನಂತರ ಆ ಪದ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿಯವರು ಹೇಳಬೇಕಾಯಿತು. ಇತ್ತ ರೈತ ಸಂಘಟನೆಗಳು ಬೆಂಗಳೂರಿನಲ್ಲಿಯೂ ಪ್ರತಿಭಟನೆ ನಡೆಸಿ ವಿಧಾನಸೌಧ ಮುತ್ತಿಗೆಗೆ ಯತ್ನಿಸಿ ವಿಫಲವಾಗಿ ಸರ್ಕಾರಕ್ಕೆ ಹದಿನೈದು ದಿನಗಳ ಡೆಡ್ಲೈನ್ ನೀಡಿವೆ. ಪ್ರತಿಪಕ್ಷ ಬಿಜೆಪಿ ಸಮ್ಮಿಶ್ರ ಸರ್ಕಾರದ ವಿರುದ್ಧ ಮುಗಿಬಿದ್ದು ರೈತರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ಧಾಳಿ ನಡೆಸುತ್ತಿದೆ.
ಇಲ್ಲಿಯಾರೂ ಉದ್ವೇಗ, ಪ್ರಚೋದನೆ, ಪ್ರತಿಷ್ಠೆಗೆ ಒಳಗಾಗಬೇಕಿಲ್ಲ. ರೈತರ ವಿಚಾರದಲ್ಲಿ ರಾಜಕಾರಣ ಸಹ ಸಲ್ಲ. ಆದರೆ, ಆಡಳಿತ ಪಕ್ಷದ ಸಮೇತ ಸರ್ವಪಕ್ಷಗಳು ಕುಳಿತು ಚರ್ಚಿಸಿ ರೈತರ ವಿಚಾರದಲ್ಲಿ ಅದು ಕಬ್ಬು ಬೆಳಗಾರರ ಬಾಕಿ ಇರಬಹುದು, ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ, ನ್ಯಾಯಯುತ ಬೆಲೆ ಕೊಡಿಸುವ ವಿಚಾರ ಇರಬಹುದು ಎಲ್ಲವನ್ನೂ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸಾಲ ಮನ್ನಾ ಘೋಷಣೆಯಾಗಿದೆ. ಸಹಕಾರ ಸಂಘಗಳ ಸಾಲ ಮನ್ನಾ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ಬ್ಯಾಂಕುಗಳ ಸಾಲ ಮನ್ನಾ ಕುರಿತು ಎರಡು ಮೂರು ಹಂತದ ಚರ್ಚೆಗಳು ನಡೆದಿವೆ. ಹಿಂದಿನ ಸರ್ಕಾರವೂ ಸಾಲ ಮನ್ನಾ ಮಾಡಿತ್ತು. ಇಷ್ಟಾದ ನಂತರವೂ ರೈತರ ಆತ್ಮಹತ್ಯೆಗಳು ನಿಂತಿಲ್ಲ. ರೈತರು ಬೀದಿಗಿಳಿದು ಪ್ರತಿಭಟನೆ ಮಾಡುವುದು ತಪ್ಪಿಲ್ಲ. ಹೀಗಾಗಿ, ಮೂಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದರ ಬಗ್ಗೆ ರಾಜಕಾರಣ ಬಿಟ್ಟು ಆಡಳಿತ ಮತ್ತು ಪ್ರತಿಪಕ್ಷ ಯೋಚಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ